ಡಿಆರ್ಡಿಓ 'ಮಿಷನ್ ಶಕ್ತಿ' ತ್ರಿವಿಕ್ರಮ : ಮೋದಿಗೆ ರಾಹುಲ್ ರಂಗಭೂಮಿ ದಿನದ ಶುಭಾಶಯ
ನವದೆಹಲಿ, ಮಾರ್ಚ್ 27 : "ಡಿಆರ್ಡಿಓ, ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ, ನಿಮ್ಮ ಈ ಸಾಧನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಇದೇ ಸಂದರ್ಭದಲ್ಲಿ ನಾನು ಪ್ರಧಾನಿಯವರಿಗೆ 'ವಿಶ್ವ ರಂಗಭೂಮಿ ದಿನ'ದ ಶುಭಾಶಯ ಕೋರಲು ಇಷ್ಟಪಡುತ್ತೇನೆ."
ಉಪಗ್ರಹ ಧ್ವಂಸ ಮಾಡುವ ಕ್ಷಿಪಣಿ ಪ್ರಯೋಗಿಸಿ ತ್ರಿವಿಕ್ರಮ ಸಾಧಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ ನಂತರ, ಮೇಲಿನಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೇವಡಿ ಮಾಡಿರುವ ರೀತಿಯಿದು.
ಇಂಥ ಪ್ರಯೋಗವನ್ನು ಮಾಡಿ ಭಾರತ ದೇಶ ಅಮೆರಿಕ, ರಷ್ಯಾ ಮತ್ತು ಚೀನಾದಂಥ ರಾಷ್ಟ್ರಗಳ ಸಾಲಿಗೆ ಸೇರಿದ ನಾಲ್ಕನೇ ರಾಷ್ಟ್ರವಾಗಿದೆ ಎಂದು ನರೇಂದ್ರ ಮೋದಿಯವರು ಹೆಮ್ಮೆಯಿಂದ ನಮ್ಮ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿರುವ ಸಂದರ್ಭ ರಾಹುಲ್ ಗಾಂಧಿ ಅವರಿಗೆ ಅಪಹಾಸ್ಯವಾಗಿ ಕಂಡಿದೆ.
ರಾಹುಲ್ ಗಾಂಧಿ ಅವರಿಂದ ಇಂಥ ಪ್ರತಿಕ್ರಿಯೆ ಬರುತ್ತಿದ್ದಂತೆ, ಟ್ವಿಟ್ಟರ್ ಪುಟಗಳು ಮೆಚ್ಚುಗೆಯ, ಗೇಲಿಯ, ತಮಾಷೆಯ ಸಂದೇಶಗಳಿಂದಲೇ ತುಂಬಿವೆ. ಈ ಗೇಲಿಯ ಮಾತುಗಳ ನಡುವೆ ವಿಶ್ವ ರಂಗಭೂಮಿ ದಿನ ನಿಜಕ್ಕೂ ತನ್ನ ಮಹತ್ವ ಕಳೆದುಕೊಂಡಂತೆ ಕಾಣಿಸುತ್ತಿದೆ.

ಎಷ್ಟು ಕೆಳಮಟ್ಟಕ್ಕೆ ಬಿದ್ದಿದ್ದೀರಿ ಎಂದರೆ...
ರಾಹುಲ್ ಅವರೇ, ನೀವು ಎಷ್ಟು ಕೆಳಮಟ್ಟಕ್ಕೆ ಬಿದ್ದಿದ್ದೀರಿ ಎಂದರೆ ನೀವು ಇನ್ನೆಂದೂ ಮೇಲೇಳಲು ಸಾಧ್ಯವೇ ಇಲ್ಲ ಎಂದು ಅನಿಲ್ ಎಂಬುವವರು ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಶವ ಪ್ರಕಾಶ್ ಎಂಬುವವರು, ನಾವು ನಿಮ್ಮನ್ನು ವಿರೋಧ ಪಕ್ಷದ ಸಮರ್ಥ ನಾಯಕ ಎಂದುಕೊಂಡಿದ್ದೆವು. ಆದರೆ ನಿಮ್ಮ ಸಂದೇಶ ನೀವು ಎಷ್ಟು ಧೃತಿಗೆಟ್ಟಿದ್ದೀರಿ ಎಂಬುದನ್ನು ತೋರಿಸುತ್ತದೆ. ನೀವು ದೇಶದ ಶತ್ರುವಿನಂತೆ ಮಾತನಾಡುತ್ತಿದ್ದೀರಿ. ನಾನು ಮೊದಲೇ ಹೇಳಿದ ಹಾಗೆ, ನಿಮ್ಮ ಪ್ರತಿಯೊಂದು ಬಿಜೆಪಿಗೆ 1000 ಮತಗಳನ್ನು ದಕ್ಕಿಸಿ ಕೊಡುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
| Array |
ಮೋದಿ ನಿರುದ್ಯೋಗದ ಬಗ್ಗೆಯೂ ಮಾತಾಡಲಿ
ಇಸ್ರೋ, ಡಿಆರ್ ಡಿಓ, ಎನ್ಎಎಲ್, ಎಲ್ಆರ್ ಡಿಇ ಸ್ಥಾಪಿಸಿದ್ದು ಜವಾಹರ ಲಾಲ್ ನೆಹರೂ ಅವರು. ಆದರೆ, ಚೌಕಿದಾರ್, ಮಿತ್ರೋಂ ನಾನೂ ಹಾಗೆ ಮಾಡಿದೆ ನಾನು ಹೀಗೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಎಂದಿನಂತೆ ಮೋದಿ ತಾವೇ ಶ್ರೇಯ ಪಡೆದಿದ್ದಾರೆ. ನಿರುದ್ಯೋಗ ಸಮಸ್ಯೆ ಬಗ್ಗೆಯೂ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಎಂದುಕೊಂಡಿದ್ದೇನೆ. ನಮ್ಮ ವಿಜ್ಞಾನಿಗಳಿಗೆ ಶುಭಾಶಯಗಳು ಎಂದು ಕಾಂಗ್ರೆಸ್ ಪ್ರಚಾರದ ಉಸ್ತುವಾರಿ ವಹಿಸಿರುವ ಶ್ರೀವತ್ಸ ಅವರು ಮೋದಿಯ ಕಾಲೆಳೆದಿದ್ದಾರೆ.

ಸಾಗರಿಕಾ ಘೋಷ್ ರಿಂದ ನೆಹರೂ ಹೊಗಳಿಕೆ
1975ರಲ್ಲಿ ಆರ್ಯಭಟವನ್ನು ಉಡಾಯಿಸಿದಂದಿನಿಂದ ಇಸ್ರೋದ ಒಂದೊಂದು ಸಾಧನೆಗಳು ಭಾರತದ ಹೆಮ್ಮೆಯಾಗಿವೆ. ಹೋಮಿ ಜಹಾಂಗಿರ್ ಭಾಭಾ, ವಿಕ್ರಂ ಸಾರಾಭಾಯ್, ಮತ್ತು ಭಾರತದ ಭಾಹ್ಯಾಕಾಶ ಕಾರ್ಯಕ್ರಮದ ಎಲ್ಲ ವಿಜ್ಞಾನಿಗಳನ್ನು ನೆನೆಯುವ ಸಮಯವಿದು. ಇದನ್ನೆಲ್ಲ ಆರಂಭಿಸಿದ್ದು ಜವಾಹರ ಲಾಲ್ ನೆಹರೂ, ವೈಜ್ಞಾನಿಕ ವೈಚಾರಿಕತೆಯ ಚಾಂಪಿಯನ್ ಎಂದು ಪತ್ರಕರ್ತೆ, ನರೇಂದ್ರ ಮೋದಿಯವರು ತೀವ್ರ ಟೀಕಾಕಾರ್ತಿ ಸಾಗರಿಕಾ ಘೋಷ್ ಅವರು ನೆಹರೂ ಅವರನ್ನು ಹಾಡಿಹೊಗಳಿದ್ದಾರೆ. ಅಲ್ಲದೆ, ಈ ಸಾಧನೆಯನ್ನು ಮಾಡುವ ಮೂಲಕ ನಮ್ಮ ಮಿಲಿಟರಿ ಎಷ್ಟು ದುರಾಕ್ರಮಕಾರಿ ಆಗಿದೆ ಎಂಬುದನ್ನೂ ತೋರಿಸಿದಂತಾಗಿದೆ. ಪಾಕಿಸ್ತಾನವೂ ಇದನ್ನು ಮಾಡಬಹುದಿತ್ತು. ಆದರೆ ಅದು ನಮಗಿಂತ ಹೆಚ್ಚು ಶಾಂತಿ ಆಶಿಸುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಈಗ ಸಾಧ್ಯವಾಗಿದ್ದು ನೆಹರೂರಿಂದ?
2018ರಲ್ಲಿ ಜಿಸ್ಯಾಟ್-6ಎ ಉಡಾವಣೆ ಯಶಸ್ವಿಯಾಗಿರಲಿಲ್ಲ. ಇಸ್ರೋ ಜಿಸ್ಯಾಟ್ ನ ಸಂಪರ್ಕವನ್ನು ಕಳೆದುಕೊಂಡಿತ್ತು. ಆಗ ಇದು ನರೇಂದ್ರ ಮೋದಿಯವರ ವೈಫಲ್ಯ ಎಂದು ಎಲ್ಲರೂ ತೆಗಳಿದ್ದರು. ಆದರೆ, ಈಗ ಬಾಹ್ಯಾಕಾಶದಲ್ಲಿ ಕಡಿಮೆ ಅಂತರದಲ್ಲಿ ಸುತ್ತುತ್ತಿರುವ ಉಪಗ್ರಹವನ್ನು ನಾಶ ಮಾಡುವ ರಾಷ್ಟ್ರಗಳ ಸಾಲಿಗೆ 4ನೇ ರಾಷ್ಟ್ರವಾಗಿ ಸೇರಿದಾಗ, ಇದೆಲ್ಲ ಸಾಧ್ಯವಾಗಿದ್ದು ಜವಾಹರ ಲಾಲ್ ನೆಹರೂ ಅವರಿಂದ ಎಂದು ಟೀಕಿಸುತ್ತಿದ್ದಾರೆ ಎಂದು ಅಗಸ್ತ್ಯಗೌಡ ಎಂಬುವವರು ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications