ಅಭಿವೃದ್ಧಿ ಪಥದಲ್ಲಿ ಸಾಗಬೇಕಿದ್ದರೆ ಬ್ಯಾಂಕ್ ವಿಲೀನವಾಗಲೇಬೇಕು
ನವದೆಹಲಿ, ಆಗಸ್ಟ್ 24 : ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಲವಾರು ಸಮಸ್ಯೆಗಳು ಆವರಿಸಿಕೊಂಡಿರುವುದರಿಂದ ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆ ಕುಂಠಿತಗೊಂಡಿರುವುದರಿಂದ ಬ್ಯಾಂಕಿಂಗ್ ಕ್ಷೇತ್ರದ ದಕ್ಷತೆ ತಜ್ಞರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಭಾರತೀಯ ಬ್ಯಾಂಕಿಂಗ್ ಸಮಾವೇಶದಲ್ಲಿ ಈ ಸಂಗತಿ ಪ್ರಮುಖವಾಗಿ ಚರ್ಚಿತವಾಗಿದೆ. ಭಾರತದಾದ್ಯಂತ ಬ್ಯಾಂಕಿಂಗ್ ವಹಿವಾಟುಗಳನ್ನು ಬಲಿಷ್ಠಪಡಿಸುವುದು ಮತ್ತು ಅವಶ್ಯತೆ ಬಿದ್ದರೆ ಕೆಲ ಬ್ಯಾಂಕುಗಳನ್ನು ವಿಲೀನಗೊಳಿಸುವುದು ಎಂಬ ಬಗ್ಗೆ ಮಾತುಕತೆ ನಡೆದವು.
ವಿದೇಶಿ ಬ್ಯಾಂಕುಗಳೇ ಆಗಿರಲಿ, ಸಾರ್ವಜನಿಕ ವಲಯದ ಬ್ಯಾಂಕಾಗಲಿ ಅಥವಾ ಖಾಸಗಿ ಬ್ಯಾಂಕುಗಳೇ ಆಗಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಾಯಿಸಬೇಕು. ಮತ್ತು ಸರಕಾರ ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆ ಬಗ್ಗೆ ನಿಗಾ ವಹಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟರು.

ವಿಶ್ವದ ಅತ್ಯುತ್ತಮ 100 ಬ್ಯಾಂಕ್ ಗಳ ಪಟ್ಟಿಯಲ್ಲಿ ಭಾರತದ ಯಾವುದೇ ಬ್ಯಾಂಕ್ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ ರಾಜೀವ್ ಕುಮಾರ್ ಅವರು, ಭಾರತದ ಅಗ್ರ ಬ್ಯಾಂಕ್ ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 250ರಿಂದ 300ರ ಸ್ಥಾನದಲ್ಲಿದೆ. ಅತ್ಯುತ್ತಮ ಬ್ಯಾಂಕ್ ಗಳ ಪಟ್ಟಿಯಲ್ಲಿ ಏಳು ಚೀನಾದ ಬ್ಯಾಂಕುಗಳಿವೆ. ಹೀಗಿದ್ದಮೇಲೆ ಅಭಿವೃದ್ಧಿಯನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಅವರು ನುಡಿದರು.
ಎರಡು ಚೀನಾದ ಬ್ಯಾಂಕುಗಳು ನೀಡುತ್ತಿರುವ ಹಣವು ವಿಶ್ವ ಬ್ಯಾಂಕ್ ನೀಡುತ್ತಿರುವ ಹಣಕ್ಕಿಂತ ಹೆಚ್ಚಾಗಿದೆ. ನಾವು 2030ರ ಹೊತ್ತಿಗೆ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದ್ದೇವೆ. ಆದರೆ, ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯಾಗದೆ ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಎಲ್ಲ 26 ಬ್ಯಾಂಕುಗಳನ್ನು ವಿಲೀನಗೊಳಿಸಿ ಕೇವಲ ಎರಡು ಅಥವಾ ಮೂರು ಬ್ಯಾಂಕುಗಳನ್ನಾಗಿ ಮಾಡಿದರೆ ವಿಶ್ವದರ್ಜೆಯ ಬ್ಯಾಂಕುಗಳೊಂದಿಗೆ ಭಾರತದ ಬ್ಯಾಂಕುಗಳು ಸ್ಪರ್ಧಿಸಲು ಸಾಧ್ಯವಾಗುತ್ತದೆ ಮತ್ತು ವಿಶ್ವದ ಅತ್ಯುತ್ತಮ ಬ್ಯಾಂಕುಗಳಲ್ಲಿ ಸ್ಥಾನ ಪಡೆಯಲಿದೆ ಎಂದು ರಾಜೀವ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ತನ್ನ ಅಧೀನದಲ್ಲಿ ಬರುವ ಎಲ್ಲ ಬ್ಯಾಂಕುಗಳನ್ನು ಎಸ್ ಬಿಐನಲ್ಲಿ ವಿಲೀನಗೊಳಿಸುವ ಪ್ರಯತ್ನ ಸಾಗಿದೆ ಎಂದು ಗೋಪಾಲ ಕೃಷ್ಣ ಅಗರವಾಲ್ ಅವರು ನುಡಿದರು.
ಈ ಕ್ಷೇತ್ರವನ್ನು ತಕ್ಷಣ ಬಲಪಡಿಸದಿದ್ದರೆ ರಾಷ್ಟ್ರದ ಅಮೂಲಾಗ್ರ ಬೆಳವಣಿಗೆಯ ಬಗ್ಗೆ ವಿಚಾರ ಕೂಡ ಮಾಡಲಾಗುವುದಿಲ್ಲ. ಅಲ್ಲದೆ, ಯಾವುದೇ ಬದಲಾವಣೆಗಳು ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಸಾರ್ವಜನಿಕ ವಲಯದ ಬ್ಯಾಂಕೊಂದರ ನಿರ್ದೇಶಕರೊಬ್ಬರು ಅನಿಸಿಕೆ ಮಂಡಿಸಿದರು.












Click it and Unblock the Notifications