ಸಂಸತ್ತಿನಲ್ಲಿ ಮಂಗನ ಹಿಡಿಯಲು ಮಂಗನಾದ ಮಾನವ
ನವದೆಹಲಿ, ಆ 2 (ಪಿಟಿಐ): ಸಂಸತ್ತಿನಲ್ಲಿ ಮಂಗನ ಕಾಟ ವಿಪರೀತವಂತೆ. ಮಂಗನನ್ನು ಹಿಡಿಯಲು ಹಾಕಿಕೊಂಡ ಯೋಜನೆಗಳು ವಿಫಲಗೊಂಡ ನಂತರ ಮೋದಿ ಸರಕಾರ ಹೊಸ ತಂತ್ರ ಅನುಸರಿಸಲು ಮುಂದಾಗಿದೆ.
ಹೊಸ ಸರಕಾರದ ಹೊಸ ಯೋಜನೆಯ ಪ್ರಕಾರ ಮಂಗನನ್ನು ಹಿಡಿಯಲು ನಲವತ್ತು ಜನರಿಗೆ ಮಂಗನ ವೇಷ ಹಾಕಿ ತರಬೇತಿ ನೀಡಲು ಸರಕಾರ ಮುಂದಾಗಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ನಲವತ್ತು ಜನರಿಗೆ ಮಂಗನ ವೇಷ ಹಾಕಿ ಮಂಗನ ಹಾಗೇ ಓಡಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ನಲವತ್ತು ಜನರನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಈಗಾಗಲೇ ನೇಮಕ ಮಾಡಿಕೊಂಡಿದೆ ಎಂದು ಸಚಿವ ನಾಯ್ಡು ಹೇಳಿದ್ದಾರೆ.
ಸಂಸತ್ತಿನಲ್ಲಿ ನಾಯಿಗಳ ಕಾಟ ಕೂಡಾ ವಿಪರೀತ ಎನ್ನುವ ದೂರುಗಳೂ ಬಂದಿವೆ. ಶ್ವಾನ ಕಾಟವನ್ನು ತಡೆಗಟ್ಟಲು ವಾರಕ್ಕೆ ಮೂರು ಬಾರಿ ನಾಯಿ ಹಿಡಿಯುವವರ ತಂಡವನ್ನು ಕರೆಯಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸಂಸತ್ತಿನಲ್ಲಿ ಮಂಗಗಳನ್ನು ಓಡಿಸಲು ಮಂಗನ ವೇಷಧಾರಿಗಳ ಪ್ರಯತ್ನದ ಜೊತೆಗೆ ಮಂಗಗಳಿಗೆ ರಬ್ಬರ್ ಬುಲೆಟ್ ಪ್ರಯೋಗ ಕೂಡಾ ನಡೆಯಲಿದೆ ಎಂದು ನಾಯ್ಡು ಹೇಳಿದ್ದಾರೆ.