ಮಾತೃಭೂಮಿ ಪತ್ರಿಕೆ ಸುದ್ದಿ ಸಂಪಾದಕರ ಮನೆ ದರೋಡೆ, ದಂಪತಿ ಮೇಲೆ ಹಲ್ಲೆ
ಕೇರಳದ ಕಣ್ಣೂರು ವಿಭಾಗದ ಮಾತೃಭೂಮಿ ಪತ್ರಿಕೆಯ ಸುದ್ದಿ ಸಂಪಾದಕ ವಿನೋದ್ ಚಂದ್ರನ್ ಹಾಗೂ ಅವರ ಪತ್ನಿ ಮೇಲೆ ಗುರುವಾರ ದಾಳಿ ನಡೆಸಿದ ನಾಲ್ವರ ಗುಂಪು, ಮನೆಯಲ್ಲಿ ದರೋಡೆ ಮಾಡಿದೆ. ವಿನೋದ್ ಹಾಗೂ ಅವರ ಪತ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರ ರಾತ್ರಿ 1.30ರಿಂದ 3.30ರ ಮಧ್ಯೆ ಈ ಘಟನೆ ನಡೆದಿದೆ.
ಮನೆಯ ಮುಂಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಶಬ್ದ ಕೇಳಿದ ವಿನೋದ್ ಹಾಗೂ ಅವರ ಪತ್ನಿ ಸರಿತಾ ವಿಚಾರಿಸುವ ಸಲುವಾಗಿ ಕೋಣೆಯಿಂದ ಹೊರಬಂದಿದ್ದಾರೆ. ಆಗ ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಹಗ್ಗದಿಂದ ಕಟ್ಟಿಹಾಕಿದ ದರೋಡೆಕೋರರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಬಾಂಗ್ಲಾದೇಶದಲ್ಲಿ ಪತ್ರಕರ್ತೆಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು!
ಮನೆಯಲ್ಲಿ ದರೋಡೆ ಮಾಡಿದ ನಾಲ್ವರು, ಅಲ್ಲಿಂದ ಹೊರಟ ನಂತರ ತಮಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಳ್ಳಲು ವಿನೋದ್ ಯಶಸ್ವಿಯಾಗಿದ್ದಾರೆ. ಆ ತಕ್ಷಣವೇ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಪೊಲೀಸರು ಆ ಕೂಡಲೇ ಮನೆಗೆ ಬಂದು, ದಂಪತಿಯನ್ನು ಕಣ್ಣೂರಿನ ಎಕೆಜಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿನೋದ್-ಸರಿತಾಗೆ ಕತ್ತು, ಮುಖದ ಮೇಲೆ ಗಂಭೀರವಾದ ಗಾಯಗಳಾಗಿವೆ. "ನನ್ನ ಕಣ್ಣು ಹಾಗೂ ಬಾಯಿಗೆ ಬಟ್ಟೆ ಕಟ್ಟಿದ ನಾಲ್ವರು ಹೊಡೆಯಲು ಆರಂಭಿಸಿದರು. ನನ್ನ ಹೆಂಡತಿಗೂ ಹಾಗೇ ಹೊಡೆದರು. ಅದೃಷ್ಟವಶಾತ್ ನನಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಳ್ಳಲು ಸಾಧ್ಯವಾಯಿತು. ಇಲ್ಲದಿದ್ದರೆ ನಾವು ಅಲ್ಲೇ ಸತ್ತುಹೋಗ್ತಿದ್ದಿವಿ" ಎಂದು ವಿನೋದ್ ಹೇಳಿದ್ದಾರೆ.
ಇವರಿಬ್ಬರ ಮೇಲೂ ಹಲ್ಲೆ ನಡೆಸಿದ ನಾಲ್ವರ ತಂಡ ಒಂದು ಗಂಟೆ ಕಾಲ ಮನೆಯೊಳಗೇ ಕಾಲ ಕಳೆದಿದೆ. 35 ಸಾವಿರ ರುಪಾಯಿ ನಗದು, 25 ಸವರನ್ ಚಿನ್ನದ ಆಭರಣವನ್ನು ದೋಚಿದ್ದಾರೆ. ಇದರ ಜತೆ ಎಟಿಎಂ ಕಾರ್ಡ್ ಗಳು, ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಥ ದುರಂತ! ಪ್ರವಾಹದ ವರದಿಗೆ ತೆರಳಿ ಶವವಾಗಿ ಹಿಂದಿರುಗಿದ ಪತ್ರಕರ್ತ
ದರೋಡೆ ಮಾಡಿದ ತಂಡವು ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಮಾತನಾಡುತ್ತಿತ್ತು. ಆದ್ದರಿಂದ ಈ ದರೋಡೆಕೋರರು ಕೇರಳ ರಾಜ್ಯದವರಲ್ಲ ಎನಿಸುತ್ತದೆ ಎಂದು ಪೊಲೀಸರು ತಿಳಿಸಿದ್ದು, ಕಣ್ಣೂರು ಡಿವೈಎಸ್ ಪಿ ಪಿ.ಪಿ.ಸದಾನಂದಮ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.