ಇನ್ನೊಂದು ವರ್ಷ ಮಾಸ್ಕ್ ಧರಿಸಿ ಪ್ಲೀಸ್; ಮೂರನೇ ಅಲೆ ಬಗ್ಗೆ ತಜ್ಞರ ಮಾತು?
ನವದೆಹಲಿ, ಸಪ್ಟೆಂಬರ್ 14: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆಗಳು, ಔಷಧಿಗಳು ಹಾಗೂ ಸಾಮಾಜಿಕ ನಡುವಳಿಕೆಯ ಅಗತ್ಯವಿದೆ. 2022ರ ಹೊತ್ತಿಗೆ ದೇಶದಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸುವ ನಾವೇ ಬಳಸುತ್ತೇವೆ ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ಹೇಳಿದ್ದಾರೆ.
ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಕೊವಿಡ್-19 ಲಸಿಕೆಗಳು ಮತ್ತು ಔಷಧಿಗಳು ಜಗತ್ತಿನ ಅದೃಷ್ಟವನ್ನು ಬದಲಾಯಿಸುತ್ತಿವೆ ಎಂದಿರುವ ಅವರು,ಕೊವಿಡ್-19 ಮೂರನೇ ಅಲೆಯ ಬಗ್ಗೆ ತಳ್ಳಿ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶವು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಹಬ್ಬ-ಹರಿದಿನಗಳ ಹೊಸ್ತಿಲಿನಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
"ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಕೊರೊನಾವೈರಸ್ ದೂರ ಹೋಗುವುದಿಲ್ಲ. ಸ್ವಲ್ಪ ಅವಧಿವರೆಗೂ ನಾವು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕಾಗಿದೆ. ಮುಂದಿನ ವರ್ಷದವರೆಗೂ ಮಾಸ್ಕ್ ಧರಿಸುವುದನ್ನು ಜನರು ಮರೆಯಬಾರದು. ಇದು ಲಸಿಕೆಗಳು, ಔಷಧಗಳು ಮತ್ತು ಸಮಂಜಸ ಶಿಸ್ತುಬದ್ಧ ನಡವಳಿಕೆಯ ಸಂಯೋಜನೆಯಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ," ಎಂದು ವಿ ಕೆ ಪೌಲ್ ಹೇಳಿದ್ದಾರೆ.

ಕೊರೊನಾವೈರಸ್ ನಿಯಂತ್ರಿಸಲು ಲಸಿಕೆಗಳು ಅತ್ಯಗತ್ಯ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ನಿಯಂತ್ರಿಸಲು ಲಸಿಕೆಗಳು ತೀರಾ ಅಗತ್ಯವಾಗಿವೆ ಎಂದು ವಿ ಕೆ ಪೌಲ್ ಒತ್ತಿ ಹೇಳಿದ್ದಾರೆ. ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವಾಕ್ಸಿನ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡುವ ಸ್ಥಿತಿಯ ಬಗ್ಗೆ ಉಲ್ಲೇಖಿಸಿದರು. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ವಿರೋಧಿ ಲಸಿಕೆ, ಆರೋಗ್ಯಕ್ಕಾಗಿ ಜಾಗತಿಕ ಸಂಸ್ಥೆಯು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಹೊರಬರುತ್ತದೆ. ಈ ತಿಂಗಳ ಅಂತ್ಯದ ಮೊದಲು ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಮೂರನೇ ಅಲೆ ಇದೆಯಾ?
"ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಯೂ ಇದೆಯಾ ಎನ್ನುವುದು ಬಹುಪಾಲು ಭಾರತೀಯರ ಪ್ರಶ್ನೆಯಾಗಿದೆ. ಇದನ್ನು ನಾನು ತಳ್ಳಿ ಹಾಕುವುದಿಲ್ಲ. ಆದರೆ ಮುಂದಿನ ಮೂರ್ನಾಲ್ಕು ತಿಂಗಳ ಅವಧಿಯು ನಮ್ಮ ಪಾಲಿಗ ಬಹುಮುಖ್ಯ ಪಾತ್ರ ವಹಿಸಬೇಕಿದೆ. ಲಸಿಕೆಯನ್ನು ಪಡೆದುಕೊಳ್ಳುವುದರ ಮೂಲಕ ಪ್ರಬಲ ಪ್ರತಿರಕ್ಷಣೆಯ ಮಹಾಗೋಡೆಯನ್ನು ನಿರ್ಮಿಸಬೇಕಿದೆ. ನಾವೆಲ್ಲರೂ ಒಂದಾಗಿ ಕೈ ಜೋಡಿಸಿದರೆ ಅದು ಸಾಧ್ಯವಾಗುತ್ತದೆ," ಎಂದು ಡಾ. ವಿ ಕೆ ಪೌಲ್ ಹೇಳಿದ್ದಾರೆ.

ಮುಂದಿನ ಹಬ್ಬಗಳಲ್ಲಿ ಮೈಮರೆತರೆ ಅಪಾಯ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿಯು ಜನರನ್ನು ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಹಾಗೂ ಕೊವಿಡ್-19 ನಿಯಮಗಳನ್ನು ಮರೆತು ನಡೆದುಕೊಳ್ಳುವಂತಿಲ್ಲ. ಒಂದು ವೇಳೆ ಹಬ್ಬದ ಸಂತಸದಲ್ಲಿ ಮೈಮರೆತರೆ, ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಮತ್ತೊಮ್ಮೆ ದೇಶವು ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕುವ ಅಪಾಯವಿದೆ. ಶ್ರೇಣಿಕೃತ ರೀತಿಯಲ್ಲಿ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದ್ದು, ಸಾರ್ವಜನಿಕರು ಅದನ್ನು ಪಾಲಿಸುವುದು ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೊವಿಡ್-19 ಲಸಿಕೆ ವಿತರಣೆಯಲ್ಲಿ ದೇಶದ ಮೈಲಿಗಲ್ಲು
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 241 ದಿನಗಳಾಗಿದ್ದು, ಸೋಮವಾರ ರಾತ್ರಿ 7 ಗಂಟೆ ವೇಳೆಗೆ 67,04,768 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 72,70,48,325 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಭಾರತದಲ್ಲಿ ಈವರೆಗೂ 75,10,41,391 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಇದುವರೆಗೂ 56,95,77,696 ಮಂದಿಗೆ ಮೊದಲ ಡೋಸ್ ಹಾಗೂ 18,14,63,695 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪೂರೈಕೆ ಎಷ್ಟಿದೆ?
2021ರ ಸೆಪ್ಟೆಂಬರ್ 13ರ ಅಂಕಿ-ಅಂಶಗಳ ಪ್ರಕಾರ, 72,70,48,325 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕಳುಹಿಸಲಾಗಿರುವ ಲಸಿಕೆಯ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
* ಪೂರೈಕೆಯಾದ ಲಸಿಕೆ ಪ್ರಮಾಣ - 72,70,48,325
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 8,25,000
* ಕೊವಿಡ್-19 ಲಸಿಕೆಯ ಲಭ್ಯತೆ - 4,90,36,525












Click it and Unblock the Notifications