ಬಸ್ ನದಿಗೆ ಬಿದ್ದು 9 ಮಂದಿ ಸಾವು, 25 ಮಂದಿಗೆ ಗಾಯ
ವೇಗವಾಗಿ ಸಾಗುತ್ತಿದ್ದ ಬಸ್ ಸೇತುವೆಯಿಂದ ಉರುಳಿ ನದಿಗೆ ಬಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 25 ಮಂದಿ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರೆಣುಕಾ-ದದಹು-ನಹಾನು ರಸ್ತೆಯ ಖಾದ್ರಿ ಹಳ್ಳಿಯ ಸಮೀಪ ಸಂಭವಿಸಿದೆ. ಶಿಮ್ಲಾದ ದಕ್ಷಿಣಕ್ಕೆ 168 ಕಿ.ಮೀ. ದೂರದಲ್ಲಿ ಈ ಸ್ಥಳವಿದೆ.
ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಕ್ಕೂ ಹೆಚ್ಚು ಜನ ಸಾವು
ಖಾಸಗಿ ಬಸ್ಸು ನಹಾನ್ ನಿಂದ ರೇಣುಕಾ ಜೀಗೆ ತೆರಳುತ್ತಿತ್ತು. ಆ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡು, ಜಲಾಲ್ ಸೇತುವೆಯ ಬೇಲಿಯನ್ನು ಮುರಿದುಕೊಂಡು ನಲವತ್ತು ಅಡಿ ಆಳಕ್ಕೆ ಜಲಾಲ್ ನದಿಗೆ ಬಿದ್ದಿದೆ ಎಂದು ಹೆಚ್ಚುವರಿ ಎಸ್ ಪಿ ವೀರೆಂದರ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಮೂವರು ಮಹಿಳೆಯರನ್ನು ಒಳಗೊಂಡಂತೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಹಾನ್ ಹಾಗೂ ದದಹುನ ಆಸ್ಪತ್ರೆಗಳಲ್ಲಿ ಇಪ್ಪತ್ತೈದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಅಪಘಾತವು ಬಸ್ ಚಾಲಕನ ಅಜಾಗರೂಕತೆಯಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೇತುವೆ ದಾಟುವ ವೇಳೆ ಬಸ್ ಬಹಳ ವೇಗವಾಗಿ ಚಲಿಸುತ್ತಿತ್ತು. ಈಗ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಆ ಪೈಕಿ ಬಹುತೇಕರು ಸ್ಥಳೀಯರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಎಸ್ ಪಿ ಠಾಕೂರ್ ಮಾಹಿತಿ ನೀಡಿದ್ದಾರೆ.