Manipur violence: ಮನೆ ಸುಟ್ಟ ಸುದ್ದಿ ಕೇಳಿ ತಮ್ಮದೇ ಆಡಳಿತದ ವಿರುದ್ಧ ಕೇಂದ್ರ ಸಚಿವರ ಆಕ್ರೋಶ
ನವದೆಹಲಿ, ಜೂನ್ 16: ಇಂಫಾಲ್ನ ಕೊಂಗ್ಬಾದಲ್ಲಿ ಗುರುವಾರ ತಡರಾತ್ರಿ ಕೇಂದ್ರ ಸಚಿವ ಆರ್ಕೆ ರಂಜನ್ ಸಿಂಗ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಆ ನಂತರ ಬೆಂಕಿ ಹಚ್ಚುವ ಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಂಜನ್ ಸಿಂಗ್ ತಮ್ಮದೇ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಟೀಕಿಸಿರುವ ಅವರು ಘಟನೆಯಿಂದ ಆಘಾತಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ.

'ನಾನು ಆಘಾತಗೊಂಡಿದ್ದೇನೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ' ಎಂದು ಕೇಂದ್ರ ಸಚಿವ ಆರ್ಕೆ ರಂಜನ್ ಸಿಂಗ್ ಹೇಳಿದ್ದಾರೆ.
ಗುರುವಾರ ರಾತ್ರಿ ಇಂಫಾಲ ಪಟ್ಟಣದಲ್ಲಿರುವ ಸಿಂಗ್ ಅವರ ಮನೆಯನ್ನು ಗುಂಪೊಂದು ಧ್ವಂಸಗೊಳಿಸಿದೆ. ಆ ನಂತರ ಬೆಂಕಿ ಹಚ್ಚಿದೆ. ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಹಚ್ಚುವ ಯತ್ನಗಳನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರೂ, ಬಹುತೇಕ ಹಾನಿಯಾಗಿದೆ.
ಗುರುವಾರ ಮಧ್ಯಾಹ್ನ ಇಂಫಾಲ್ ಪಟ್ಟಣದ ಹೃದಯಭಾಗದಲ್ಲಿ ಮಣಿಪುರದ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಉದ್ರಿಕ್ತರ ನಡುವೆ ಘರ್ಷಣೆ ನಡೆಯಿತು. ಎರಡು ಮನೆಗಳನ್ನು ಸುಟ್ಟುಹಾಕಿಲಾಯಿತು. ಆ ನಂತರ ಕೇಂದ್ರ ಸಚಿವರ ಮನೆಯನ್ನು ಧ್ವಂಸಗೊಳಿಸಲಾಯಿತು.

ಗುರುವಾರ ತಡರಾತ್ರಿ ಪಟ್ಟಣದಲ್ಲಿ ಸುತ್ತಾಡಿದ ಗುಂಪು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಮಣಿಪುರ ಹಿಂಸಾಚಾರದ ಕುರಿತು ಸಭೆ ನಡೆಸಲು ಟಿಎಂಸಿ ಕೋರಿದೆ. ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಅವರು ಮಣಿಪುರದಲ್ಲಿ ಮುಂದುವರಿದಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ತುರ್ತು ಸಭೆಯನ್ನು ಕೋರಿದ್ದಾರೆ. ಅಲ್ಲಿನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ಮತ್ತು ಮಾಜಿ ಉನ್ನತ ಪೋಲೀಸ್ ಬ್ರಿಜ್ ಲಾಲ್ ಅವರಿಗೆ ಬರೆದ ಪತ್ರದಲ್ಲಿ, 'ಜನಾಂಗೀಯ ಗಲಭೆಯಿಂದ ತತ್ತರಿಸುತ್ತಿರುವ ಮಣಿಪುರದ ಬಗ್ಗೆ ಚರ್ಚಿಸಲು ಸಮಿತಿಯ ಸಭೆಯ ಅಗತ್ಯವಿದೆ' ಎಂದು ಹೇಳಿದರು.
ಮಣಿಪುರದಲ್ಲಿ ಒಂದು ತಿಂಗಳ ಹಿಂದೆ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ವದಂತಿಗಳು ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯವು 11 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದೆ ಮತ್ತು ಇಂಟರ್ನೆಟ್ ಅನ್ನು ನಿಷೇಧಿಸಿದೆ.












Click it and Unblock the Notifications