ಮಣಿಪುರ ಹಿಂಸಾಚಾರ: ಬಿಜೆಪಿಯ ಬೇಟಿ ಬಚಾವೋ ಉಲ್ಲೇಖಿಸಿ ಮಮತಾ ಬ್ಯಾನರ್ಜಿ ಕಿಡಿ
ಕೋಲ್ಕತ್ತಾ, ಜುಲೈ. 21: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಬಿಲ್ಕಿಸ್ ಬಾನೋ ಮತ್ತು ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಶುಕ್ರವಾರ ಭಾರತೀಯ ಜನತಾ ಪಕ್ಷವನ್ನು ಟೀಕಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯ 'ಬೇಟಿ ಬಚಾವೋ' ಘೋಷಣೆ ಈಗ 'ಬೇಟಿ ಜಲಾವೋ' ಆಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ.
"ನೀವು (ಬಿಜೆಪಿ) 'ಬೇಟಿ ಬಚಾವೋ' ಘೋಷಣೆ ನೀಡಿದ್ದೀರಿ, ಈಗ ನಿಮ್ಮ ಘೋಷಣೆ ಎಲ್ಲಿದೆ..? ಮಣಿಪುರದ ಜನರಿಗೆ ನಾವು ನಮ್ಮ ಬೆಂಬಲ ವ್ಯಕ್ತಪಡಿಸುತ್ತೇವೆ. ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ. ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ (ಬ್ರಿಜ್ ಭೂಷಣ್ ಸಿಂಗ್) ಕೂಡ ಜಾಮೀನು ಪಡೆದರು" ಎಂದು ಹೇಳಿದ್ದಾರೆ.

ಮುಂದುವರೆದು, "ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ನಿಮ್ಮನ್ನು ದೇಶದ ರಾಜಕೀಯದಿಂದ ಹೊರಹಾಕುತ್ತಾರೆ. ಬಿಜೆಪಿಯ 'ಬೇಟಿ ಬಚಾವೋ' ಈಗ 'ಬೇಟಿ ಜಲಾವೋ' ಆಗಿ ಮಾರ್ಪಟ್ಟಿದೆ" ಎಂದು ಶುಕ್ರವಾರ ಕಿಡಿಕಾರಿದ್ದಾರೆ. ಕೋಲ್ಕತ್ತಾದಲ್ಲಿ ಟಿಎಂಸಿ ಪಕ್ಷದ 'ಹುತಾತ್ಮರ ದಿನಾಚರಣೆ' ಸಮಾವೇಶದಲ್ಲಿ ನೆರೆದಿದ್ದ ರಾಜ್ಯದಾದ್ಯಂತದ ಹಳ್ಳಿಗಳು ಮತ್ತು ಪಟ್ಟಣಗಳ ಹತ್ತಾರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ಗೆ ಯಾವುದೇ ಕುರ್ಚಿ ಬೇಕಾಗಿಲ್ಲ, ಆದರೆ "ಈ ಬಿಜೆಪಿ ಆಡಳಿತ ತೋಲಗಬೇಕೆಂದು ನಾವು ಬಯಸುತ್ತೇವೆ. ನಾವು ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿ I.N.D.I.A. ಬ್ಯಾನರ್ ಅಡಿಯಲ್ಲಿ ಎಲ್ಲಾ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ" ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಾವೇಶದಲ್ಲಿ ಘೋಷಿಸಿದ್ದಾರೆ.

ಅಕ್ಟೋಬರ್ 2 ರಂದು ದೆಹಲಿಯಲ್ಲಿ ಟಿಎಂಸಿ ಪ್ರತಿಭಟನೆ: ಅಭಿಷೇಕ್ ಬ್ಯಾನರ್ಜಿ
ಎಂಜಿಎನ್ಆರ್ಇಜಿಎ (ಉದ್ಯೋಗ ಖಾತ್ರಿ) ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪಶ್ಚಿಮ ಬಂಗಾಳದ ಹಣವನ್ನು ತಡೆಯುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಾಂಧಿ ಜಯಂತಿಯಂದು (ಅಕ್ಟೋಬರ್ 2) ದೆಹಲಿಯಲ್ಲಿ ಪಕ್ಷವು ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಹಿರಿಯ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಘೋಷಿಸಿದ್ದಾರೆ.
ಬಿಜೆಪಿಯನ್ನು ಕಿತ್ತೊಗೆಯಲಾಗುವುದು ಮತ್ತು ಹೊಸದಾಗಿ ರೂಪುಗೊಂಡ ವಿರೋಧ ಪಕ್ಷದ ಮೈತ್ರಿ I.N.D.I.A 2024 ರ ಲೋಕಸಭಾ ಚುನಾವಣೆಯಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂಬ ಘೋಷಣೆಯೊಂದಿಗೆ ಇಡೀ ದೇಶವು ಪ್ರತಿಧ್ವನಿಸುತ್ತಿದೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಕೇಂದ್ರವು ಸೇಡಿನ ರಾಜಕೀಯದಿಂದಾಗಿ ಪಶ್ಚಿಮ ಬಂಗಾಳಕ್ಕೆ ಹಣವನ್ನು ನಿಲ್ಲಿಸಿದೆ. ನಾನು ಮೊದಲೇ ಹೇಳಿದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಂಜಿಎನ್ಆರ್ಇಜಿಎ ಅಡಿಯಲ್ಲಿ ಬಂಗಾಳದ ಹಣವನ್ನು ತಡೆಹಿಡಿಯುವುದರ ವಿರುದ್ಧ ನಾವು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತೇವೆ. ಅಕ್ಟೋಬರ್ 2 ರಂದು ನಾವು ಕೃಷಿ ಭವನದ ಹೊರಗೆ ಪ್ರತಿಭಟನೆಯನ್ನು ಆಯೋಜಿಸುತ್ತೇವೆ" ಎಂದು ಕೋಲ್ಕತ್ತಾದಲ್ಲಿ ಹುತಾತ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಕರೆಯನ್ನು ಮಮತಾ ಬ್ಯಾನರ್ಜಿ ಕೂಡ ಬೆಂಬಲಿಸಿದ್ದಾರೆ.












Click it and Unblock the Notifications