ಕಳೆದ 5 ವರ್ಷಗಳ ನಮ್ಮ ಕಾರ್ಯ 25 ವರ್ಷಗಳಿಗೆ ಅಡಿಪಾಯ: ಪ್ರಧಾನಿ ಮೋದಿ
ಇಂಫಾಲ್, ಫೆಬ್ರವರಿ 22: ಬಿಜೆಪಿಯ ಡಬಲ್ ಇಂಜಿನ್ ಸರಕಾರ ಮುಂದಿನ 25 ವರ್ಷಗಳ ಕಾಲ ಮಣಿಪುರದ ಅಭಿವೃದ್ಧಿಗೆ ಅಡಿಪಾಯ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಣಿಪುರ ಚುನಾವಣೆ ಪ್ರಚಾರದಲ್ಲಿ ಹೇಳಿದ್ದಾರೆ. ಹಾಗೆಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಮಣಿಪುರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಅಭಿವೃದ್ಧಿಗಾಗಿ ಕೆಲಸ ಮಾಡಿಲ್ಲ ಎಂದು ದೂರಿದ್ದಾರೆ.
ಮಣಿಪುರದ ಹೀಂಗಾಂಗ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಮಣಿಪುರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ, ನೀವು ಬಿಜೆಪಿಯ ಉತ್ತಮ ಆಡಳಿತವನ್ನು ನೋಡಿದ್ದೀರಿ. ಕಳೆದ 5 ವರ್ಷಗಳಲ್ಲಿ ನಮ್ಮ ಕೆಲಸಗಳು ಮುಂದಿನ 25 ವರ್ಷಗಳ ಅಡಿಪಾಯವನ್ನು ಹಾಕಿವೆ, ನೀವು ಬಿಜೆಪಿಯ ಉತ್ತಮ ಆಡಳಿತ ಮತ್ತು ಒಳ್ಳೆಯ ಉದ್ದೇಶವನ್ನು ಕಂಡಿದ್ದೀರಿ ಎಂದು ಪ್ರಧಾನಿ ಹೇಳಿದ್ದಾರೆ.
ನಂತರ ಅವರು ಮಣಿಪುರದಲ್ಲಿ ದಶಕಗಳ ಕಾಲ ರಾಜ್ಯವನ್ನು ಆಳುತ್ತಿದ್ದರೂ ಅಸಮಾನತೆಯನ್ನು ದೂರ ಮಾಡಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕಳೆದ ತಿಂಗಳು, ಮಣಿಪುರ ರಚನೆಯಾಗಿ 50 ವರ್ಷಗಳು ಪೂರ್ಣಗೊಂಡಿವೆ. ಕಳೆದ ಕೆಲವು ದಶಕಗಳಲ್ಲಿ ರಾಜ್ಯವು ಹಲವಾರು ಸರ್ಕಾರಗಳಿಗೆ ಸಾಕ್ಷಿಯಾಗಿದೆ. ದಶಕಗಳ ಕಾಂಗ್ರೆಸ್ ಆಡಳಿತದ ನಂತರ ಮಣಿಪುರಕ್ಕೆ ಕೇವಲ ಅಸಮಾನತೆ ದೊರಕಿದೆ," ಎಂದು ಟೀಕೆ ಮಾಡಿದ್ದಾರೆ.

ಬಂದ್ಗಳ ಅಂತ್ಯದ ಮೂಲಕ ಜನರಿಗೆ ಸಹಾಯ
ಬಿಜೆಪಿ ಸರ್ಕಾರ ಬಂದ್ಗಳು ಮತ್ತು ದಿಗ್ಬಂಧನಗಳನ್ನು ಕೊನೆಗೊಳಿಸುವ ಮೂಲಕ ಜನರಿಗೆ ಪರಿಹಾರ ನೀಡಿದೆ ಎಂದು ಪ್ರಧಾನಿ ಹೇಳಿದರು. ಮತ್ತೊಂದೆಡೆ, ಕಾಂಗ್ರೆಸ್ ಬಂದ್ಗಳು ಮತ್ತು ದಿಗ್ಬಂಧನಗಳನ್ನು ಮಣಿಪುರದ ಪ್ರಮುಖ ಲಕ್ಷಣವನ್ನಾಗಿ ಮಾಡಿದೆ ಎಂದು ಅವರು ಹೇಳಿದರು.
ಯುವಕರು ತಮ್ಮ ಮತದ ಹಕ್ಕು ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದರು. "ನಾನು ಯುವಕರಿಗೆ ಮತ್ತು ಮೊದಲ ಬಾರಿಗೆ ಮತದಾರರಿಗೆ ಮನವಿ ಮಾಡಲು ಬಯಸುತ್ತೇನೆ. ನಿಮ್ಮ ಮತವು ಈ ಸರ್ಕಾರದಲ್ಲಿ ನೀವು ಸಕ್ರಿಯ ಪಾಲುದಾರರಾಗುತ್ತೀರಿ. ನೀವು ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಾಗುತ್ತೀರಿ," ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ರನ್ನು ಶ್ಲಾಘಿಸಿದ ಪ್ರಧಾನಿ
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮಾಡಿದ ಉತ್ತಮ ಕಾರ್ಯಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವು ಮಣಿಪುರಕ್ಕೆ ಬದಲಾವಣೆಯ ಹೊಸ ಅಧ್ಯಾಯವನ್ನು ಬರೆದಿದೆ, ಎಲ್ಲರನ್ನೂ ಮುನ್ನಡೆಸಿದೆ ಎಂದು ಹೇಳಿದರು. ಮಣಿಪುರಿಯಲ್ಲಿ 10 ರಲ್ಲಿ 7 ಜನರು ಈಗ ಉಚಿತ ಪಡಿತರದಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಕೂಡಾ ಪ್ರಧಾನಿ ಉಲ್ಲೇಖ ಮಾಡಿದ್ದಾರೆ.
"ಮಣಿಪುರಿ ಮಹಿಳೆಯರು ವಿದೇಶಿ ಶಕ್ತಿಗಳ ವಿರುದ್ಧ ಐತಿಹಾಸಿಕ ಯುದ್ಧವನ್ನು ನಡೆಸಿದರು. ಹಿಂದಿನ ಸರ್ಕಾರಗಳು ಮಣಿಪುರಿ ಮಹಿಳೆಯರ ಜೀವನವನ್ನು ಎಂದಿಗೂ ಸುಲಭಗೊಳಿಸಲಿಲ್ಲ. ಎನ್ಡಿಎ ಸರ್ಕಾರಗಳು ಮಾತ್ರ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿವೆ ಮತ್ತು ಅವರ ಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ," ಎಂದು ಪಿಎಂ ಹೇಳಿದರು.
ಇನ್ನು 2017 ರ ಮೊದಲು ಜನರು ಎದುರಿಸಿದ ಪಡಿತರ ಸಮಸ್ಯೆಗಳನ್ನು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಲ್ಲೇಖ ಮಾಡಿದ್ದಾರೆ. "ಈ ಕೊರೊನಾ ಬಿಕ್ಕಟ್ಟಿನಲ್ಲೂ ಬಿಜೆಪಿ ಸರ್ಕಾರವು ಮಣಿಪುರದ 22 ಲಕ್ಷ ಜನರಿಗೆ ಉಚಿತ ಪಡಿತರವನ್ನು ಖಾತ್ರಿಪಡಿಸುತ್ತಿದೆ. ಅಂದರೆ, ಮಣಿಪುರದ ಪ್ರತಿ 10 ಜನರಲ್ಲಿ 7 ಜನರು ಉಚಿತ ಪಡಿತರ ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದಾರೆ," ಎಂದಿದ್ದಾರೆ. ಇನ್ನು ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರು ಈಶಾನ್ಯ ಮತ್ತು ಮಣಿಪುರದ ಜನರ ಸಂಸ್ಕೃತಿ ಮತ್ತು ವೇಷಭೂಷಣವನ್ನು ಹೇಗೆ ಅಪಹಾಸ್ಯ ಮಾಡುತ್ತಾರೆ ಎಂಬುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications