ಸುವೇಂದು ನಿಜಮುಖ ಅರಿಯದ ಕತ್ತೆ ನಾನು ಎಂದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್ 22: ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಟೀಕೆ ಮುಂದುವರೆಸಿರುವ ಸಿಎಂ ಮಮತಾ ಬ್ಯಾನರ್ಜಿ ಸುವೇಂದು ನಿಜಮುಖ ಅರಿಯದ ಕತ್ತೆ ನಾನು ಎಂದು ಹೇಳಿದ್ದಾರೆ.
ಕಾಂತಿ ದಕ್ಷಿಣದಲ್ಲಿ ಆಯೋಜಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನದೇ ತಪ್ಪಿದೆ, ಅಧಿಕಾರಿ ಕುಟುಂಬವು 5 ಸಾವಿರ ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದೆ ಎಂಬ ವದಂತಿ ನನ್ನ ಕಿವಿಗೂ ಬಿದ್ದಿದೆ. ನಾನು ಅಧಿಕಾರಕ್ಕೆ ಮರಳಿ ಬರುತ್ತಿದ್ದಂತೆ ಈ ವಿಚಾರವಾಗಿ ತನಿಖೆ ನಡೆಸುತ್ತೇನೆ ಎಂದು ಹೇಳಿದರು.
5 ಸಾವಿರ ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಹೊಂದಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ತಿಳಿದಿಲ್ಲ. ಮತ ಖರೀದಿಗೆ ಅವರು ಜನರಿಗೆ ಹಣ ನೀಡಬಹುದು, ಆದರೆ ಅವರಿಗೆ ಖಂಡಿತವಾಗಿಯೂ ಮತ ನೀಡಬೇಡಿ ಎಂದು ಕೇಳಿಕೊಂಡರು.

ರಾಕ್ಷಸರೇ ಬಿಜೆಪಿಯಲ್ಲಿ ತುಂಬಿದ್ದಾರೆ
ಸ್ವಲ್ಪ ಸಮಯದ ಹಿಂದಷ್ಟೇ ಬಿಜೆಪಿ ಒಂದು ರಾಕ್ಷಸರ ಪಕ್ಷವಾಗಿದೆ. ಅಲ್ಲಿರುವ ಎಲ್ಲರೂ ರಾವಣ, ದುರ್ಯೋಧನ, ದುಶ್ಯಾಸನನಂಥ ರಾಕ್ಷಸರೇ ತುಂಬಿದ್ದಾರೆ. ಆದ್ದರಿಂದಲೇ ಅಶಾಂತಿ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು.
ನಾನು ಮೊದಲು ಮಿಡ್ನಾಪುರದ ಭಾಗಗಳಿಗೆ ಬರಲಾಗುತ್ತಿರಲಿಲ್ಲ, ಸುವೇಂದು ಅಧಿಕಾರಿ ಹೇಳಿದಂತೆ ಕೇಳಿಕೊಂಡು ಬರಬೇಕಿತ್ತು. ರಾಜಕೀಯ ಅವರನ್ನು ಕಣ್ಣುಮುಚ್ಚಿಕೊಂಡು ನಾನು ನಂಬಿದ್ದೆ, ಆದರೆ ನನಗೆ ದ್ರೋಹ ಮಾಡಿದರು, 2014ರಲ್ಲೇ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು, ಅವರನ್ನು ನಂಬಿ ನಾನು ಮೋಸಹೋದೆ, ಆದರೆ ಇಂದು ಮಿಡ್ನಾಪುರದ ಯಾವುದೇ ಭಾಗಕ್ಕೂ ಆರಾಮವಾಗಿ ಹೋಗಬಹುದಾಗಿದೆ ಎಂದು ಮಮತಾ ಹೇಳಿದ್ದಾರೆ.

ಶಿಶಿರ್ ಅಧಿಕಾರಿ ಬಿಜೆಪಿ ಸೇರ್ಪಡೆ
ಟಿಎಂಸಿಯ ಹಿರಿಯ ಮುಖಂಡ ಸಂಸದ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ತಂದೆ ಶಿಶಿರ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನಮ್ಮನ್ನು ಪಕ್ಷದಿಂದ ಹೊರಗಿಟ್ಟಿದ್ದರು
ಈ ಕುರಿತು ಶಿಶಿರ್ ಮಾತನಾಡಿ, ನಾವು ಟಿಎಂಸಿಯಲ್ಲಿ ಬಹಳ ಕಷ್ಟದಿಂದ ಉನ್ನತ ಮಟ್ಟಕ್ಕೆ ಏರಿದ್ದೆವು. ಆದರೆ, ನನ್ನನ್ನು ಮತ್ತು ನನ್ನ ಮಗನನ್ನು ಪಕ್ಷ ಕೆಟ್ಟದಾಗಿ ನಡೆಸಿಕೊಂಡಿದೆ. ಇದರಿಂದ ಟಿಎಂಸಿ ತೊರೆಯುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದಾರೆ.
ನಮ್ಮಿಬ್ಬರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಎದುರಾಗುವ ಎಲ್ಲಾ ರಾಜಕೀಯ ದಾಳಿಗಳು ಹಾಗೂ ದೌರ್ಜನ್ಯಗಳನ್ನು ಎದುರಿಸಲು ನಾವು ಯಶಸ್ವಿಯಾಗುತ್ತೇವೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಯಾವಾಗ?
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications