ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ್ ಖರ್ಗೆ: ಕೊಟ್ಟ ಮೂರು ಸಲಹೆಗಳೇನು?
ನವದೆಹಲಿ, ಮೇ 06: ಕೆಲ ದಿನಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಜಾತಿಗಣತಿ ಕುರಿತು ಭಾರೀ ಚರ್ಚೆ ನಡೆಯುತ್ತಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಜಾತಿಗಣತಿ ವಿಚಾರ ದೇಶಾದ್ಯಂತ ಭಾರೀ ಚರ್ಚೆಗೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯಸಭೆ ಸದಸ್ಯರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಜಾತಿ ಗಣತಿ ಕುರಿತು ಪ್ರಧಾನಿ ಮೋದಿ ಅವರಿಗೆ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಈ ಪತ್ರದಲ್ಲಿ ಜಾತಿ ಗಣತಿ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ಅಸಮಾಧಾನ ವ್ಯಕ್ತಪಸಿದಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರ ಪತ್ರದಲ್ಲೇನಿದೆ?
ಏಪ್ರಿಲ್ 16, 2023 ರಂದು ನಾನು ನಿಮಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನವೀಕೃತ ಜಾತಿ ಜನಗಣತಿಯ ಬೇಡಿಕೆಯನ್ನು ಮುಂದಿಟ್ಟು ಬರೆದಿದ್ದೆ. ವಿಷಾದಕರವೆಂದರೆ, ಈ ಪತ್ರಕ್ಕೆ ನನಗೆ ಯಾವುದೇ ಉತ್ತರ ಬಂದಿಲ್ಲ. ದುರದೃಷ್ಟವಶಾತ್, ನಿಮ್ಮ ಪಕ್ಷದ ನಾಯಕರು ಮತ್ತು ನೀವು ಇಂದು ಆಳವಾದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಹಿತಾಸಕ್ತಿಗೆ ಅನುಗುಣವಾಗಿ, ಈ ಕಾನೂನುಬದ್ಧ ಬೇಡಿಕೆಯನ್ನು ಎತ್ತಿದ್ದಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕತ್ವದ ಮೇಲೆ ದಾಳಿ ಮಾಡಿದ್ದೀರಿ" ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ವಿಷಾದಿಸಿದ್ದಾರೆ.
1. ಜನಗಣತಿ ಪ್ರಶ್ನಾವಳಿಯ ವಿನ್ಯಾಸವು ನಿರ್ಣಾಯಕವಾಗಿದೆ. ಕೇಂದ್ರ ಗೃಹ ಸಚಿವಾಲಯವು ತೆಲಂಗಾಣ ಮಾದರಿಯನ್ನು ಬಳಸಬೇಕು. ಪ್ರಶ್ನಾವಳಿಯನ್ನು ಅಂತಿಮಗೊಳಿಸಲು ಅಳವಡಿಸಿಕೊಂಡ ವಿಧಾನ ಮತ್ತು ಕೇಳಲಾದ ಅಂತಿಮ ಪ್ರಶ್ನೆಗಳು ಸ್ಪಷ್ಟವಾಗಿರಬೇಕು.
2. ಕೇಂದ್ರ ಸರ್ಕಾರದ ಜಾತಿ ಜನಗಣತಿ ಫಲಿತಾಂಶಗಳು ಏನೇ ಇರಲಿ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಓಬಿಸಿ ವರ್ಗಕ್ಕೆ ಮೀಸಲಾತಿಯ ಮೇಲೆ ನಿರಂಕುಶವಾಗಿ ವಿಧಿಸಲಾದ ಶೇ. 50ರಷ್ಟು ಮಿತಿಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತೆಗೆದುಹಾಕಬೇಕು.
3. ಭಾರತದ ಸಂವಿಧಾನದಲ್ಲಿ 15(5) ನೇ ವಿಧಿಯನ್ನು ಜನವರಿ 20, 2006 ರಿಂದ ಜಾರಿಗೆ ಬರುವಂತೆ ಪರಿಚಯಿಸಲಾಯಿತು. ಇದನ್ನು ನಂತರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಅಂತಿಮವಾಗಿ, 2014ರ ಲೋಕಸಭಾ ಚುನಾವಣೆಗಳ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸ್ವಲ್ಪ ಸಮಯದ ಮೊದಲು, ಅಂದರೆ ಜನವರಿ 29, 2014 ರಂದು ಸುದೀರ್ಘ ಚರ್ಚೆಗಳ ನಂತರ ಸುಪ್ರೀಂಕೋರ್ಟ್ ಇದನ್ನು ಎತ್ತಿಹಿಡಿಯಿತು. ಇದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಒದಗಿಸುತ್ತದೆ. ಇದನ್ನು ಜಾರಿಗೆ ತರಬೇಕು.
ನಮ್ಮ ಸಮಾಜದ ಹಿಂದುಳಿದ, ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಅವರ ಹಕ್ಕುಗಳನ್ನು ನೀಡುವ ಜಾತಿ ಜನಗಣತಿ ನಡೆಸುವುದನ್ನು, ಯಾವುದೇ ರೀತಿಯಲ್ಲಿ ವಿಭಜಕ ಎಂದು ಪರಿಗಣಿಸಬಾರದು. ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯ ನಂತರ ದೇಶ ಒಗ್ಗಟ್ಟು ಪ್ರದರ್ಶಿಸಿದ ರೀತಿಯಲ್ಲೇ, ನಮ್ಮ ಮಹಾನ್ ರಾಷ್ಟ್ರ ಮತ್ತು ನಮ್ಮ ವಿಶಾಲ ಹೃದಯದ ಜನರು ಯಾವಾಗಲೂ ಅಗತ್ಯವಿದ್ದಾಗ ಒಂದಾಗಿದ್ದಾರೆ ಮುಂದೆಯೂ ಒಗ್ಗಟ್ಟಿನಿಂದಲೇ ಇರುತ್ತಾರೆ" ಎಂದು ಎಐಸಿಸಿ ಅಧ್ಯಕ್ಷರು ಹೇಳಿರುವುದು ಗಮನ ಸೆಳೆದಿದೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಜ್ಞೆ ಮಾಡಿದಂತೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಮತ್ತು ಸ್ಥಾನಮಾನ ಮತ್ತು ಅವಕಾಶದ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು, ಮೇಲೆ ಸೂಚಿಸಲಾದ ಸಮಗ್ರ ರೀತಿಯಲ್ಲಿ ಜಾತಿ ಜನಗಣತಿ ನಡೆಸುವುದು ಸಂಪೂರ್ಣವಾಗಿ ಅಗತ್ಯವಾಗಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ" ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
"ನನ್ನ ಸಲಹೆಗಳನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬುತ್ತೇನೆ. ವಾಸ್ತವವಾಗಿ, ಜಾತಿ ಜನಗಣತಿಯ ವಿಷಯದ ಕುರಿತು ಶೀಘ್ರದಲ್ಲೇ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಂವಾದ ನಡೆಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ರಾಜ್ಯಸಭೆ ಸದಸ್ಯರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ.












Click it and Unblock the Notifications