Maharashtra Assembly Elections 2024: ಮೀಸಲಾತಿ ಅಸ್ತ್ರ ಬಿಟ್ಟ ಎನ್ಸಿಪಿ ನಾಯಕ ಶರದ್ ಪವಾರ್
ಮುಂಬೈ, ಅಕ್ಟೋಬರ್ 05: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ 288 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಸದ್ಯದ ಮಾಹಿತಿ ಪ್ರಕಾರ ನವೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ತಯಾರಿಯನ್ನು ನಡೆಸಿದೆ. ಆದ್ದರಿಂದ ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ.
ವಿಧಾನಸಭೆ ಚುನಾವಣೆ ಎದುರಿರುವಾಗಲೇ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮೀಸಲಾತಿ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಮಹಾರಾಷ್ಟ್ರದ ವಿರೋಧ ಪಕ್ಷಗಳು ಸೇರಿಕೊಂಡು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಶರದ್ ಪವಾರ್ ಈ ಮೈತ್ರಿಕೂಟದಲ್ಲಿದ್ದಾರೆ.

ಎಂವಿಎ ಮೈತ್ರಿಕೂಟ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ಪಕ್ಷಗಳನ್ನು ಒಳಗೊಂಡಿದೆ. 2024ರ ಚುನಾವಣೆಯನ್ನು ಸಹ ಈ ಮೈತ್ರಿಕೂಟ ಸೀಟು ಹಂಚಿಕೆ ಮಾಡಿಕೊಂಡು ಎದುರಿಸಲಿವೆ. ಇಂತಹ ಸಮಯದಲ್ಲಿ ಶರದ್ ಪವಾರ್ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಶರದ್ ಪವಾರ್ ಹೇಳಿದ್ದೇನು?; ಶರದ್ ಪವಾರ್ ಕೇಂದ್ರ ಸರ್ಕಾರವನ್ನು ಮೀಸಲಾತಿಯನ್ನು ಶೇ 50ರಿಂದ 75ಕ್ಕೆ ಹೆಚ್ಚಳ ಮಾಡಲು ಕಾನೂನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಇಂತಹ ಬದಲಾವಣೆಯನ್ನು ತಂದರೆ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಈಗ ಇರುವ ನಿಯಮಗಳಿಗೆ ಯಾವುದೇ ತೊಂದರೆ ಆಗದಂತೆ ಮೀಸಲಾತಿ ಏರಿಕೆ ಮಾಡಲು ಕಾನೂನು ತಿದ್ದುಪಡಿ ಮಾಡಬೇಕು ಎಂದು ಶರದ್ ಪವಾರ್ ಒತ್ತಾಯಿಸಿದ್ದಾರೆ.
"ಎಲ್ಲರೂ ಮೀಸಲಾತಿ ಸಿಗಬೇಕು ಎಂದು ಬಯಸುತ್ತಾರೆ. ಮೀಸಲಾತಿ ನೀಡುವ ಮೂಲಕ ಇತರ ಜನರನ್ನು ನಾವು ರಕ್ಷಿಸಬೇಕಿದೆ. ಆದ್ದರಿಂದ ಈಗಿರುವ ಶೇ 50ರಷ್ಟು ಮೀಸಲಾತಿ ನಿಯಮವನ್ನು ಶೇ 75ಕ್ಕೆ ಏರಿಕೆ ಮಾಡಬೇಕು" ಎಂದರು.
"ಈಗಿರುವ ನಿಯಮಗಳ ಪ್ರಕಾರ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಆಗುವುದಿಲ್ಲ. ಆದ್ದರಿಂದ ಮೀಸಲಾತಿ ಹೆಚ್ಚಿಸಲು ನಿಯಮಗಳಲ್ಲಿ ಬದಲಾವಣೆ ಅಗತ್ಯವಿದೆ. ಈಗಿರುವ ಮೀಸಲಾತಿ ಹಂಚಿಕೆ ನಿಯಮಗಳನ್ನು ಬದಲಾವಣೆ ಮಾಡುವುದರಲ್ಲಿ ಯಾರಿಗೆ ಸಮಸ್ಯೆ ಇದೆ?" ಎಂದು ಶರದ್ ಪವಾರ್ ಪ್ರಶ್ನೆ ಮಾಡಿದರು.
"ಒಂದು ವೇಳೆ ಕೇಂದ್ರ ಸರ್ಕಾರ ಮೀಸಲಾತಿಯನ್ನು ಶೇ 50 ರಿಂದ 75ಕ್ಕೆ ಹೆಚ್ಚಳ ಮಾಡಲು ಕಾನೂನು ತಿದ್ದುಪಡಿಗೆ ಮುಂದಾದರೆ ಎನ್ಸಿಪಿ ಪಕ್ಷ ಇದನ್ನು ಬೆಂಬಲಿಸಲಿದೆ" ಎಂದು ಶರದ್ ಪವಾರ್ ಭರವಸೆ ನೀಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ 'ಇಂಡಿಯಾ' ಮೈತ್ರಿಕೂಟದಲ್ಲಿದ್ದರು ಶರದ್ ಪವಾರ್. ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ವಿರೋಧಿ ಗುಂಪಿನ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ಪಕ್ಷ ಒಳಗೊಂಡ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಭಾಗವಾಗಿದ್ದಾರೆ. ಆದರೆ ಅವರು ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬೆಂಬಲಿಸುತ್ತೇನೆ ಎಂದು ಹೇಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
2019ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಎನ್ಸಿಪಿ ಒಗ್ಗಟ್ಟಾಗಿತ್ತು. ಆದರೆ 2023ರಲ್ಲಿ ಎನ್ಸಿಪಿ ಎರಡು ಭಾಗವಾಗಿದೆ. ಒಂದು ಬಣ ಅಜಿತ್ ಪವಾರ್ ನಾಯಕತ್ವದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಸದ್ಯ ಮಹಾರಾಷ್ಟ್ರ ರಾಜ್ಯದ ಆಡಳಿತ ಪಕ್ಷವಾಗಿದೆ. ಮತ್ತೊಂದು ಬಣ ಶರದ್ ಪವಾರ್ ನಾಯಕತ್ವದಲ್ಲಿದೆ.












Click it and Unblock the Notifications