Vidhan Sabha Election: ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣಾ ದಿನಾಂಕ ಇಂದು ಪ್ರಕಟ
ದೆಹಲಿ ಅಕ್ಟೋಬರ್ 15: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಗೊಂಡಿದೆ. ಈ ವರ್ಷ ಮಹಾರಾಷ್ಟ್ರದಲ್ಲಿ ಒಂದು ಹಂತದಲ್ಲಿ ಮತ್ತು ಜಾರ್ಖಂಡ್ನಲ್ಲಿ 2 ಅಥವಾ 3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ನ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಇಂದು ಅಂದರೆ ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ಘೋಷಿಸಬಹುದು ಎನ್ನಲಾಗುತ್ತಿದೆ. ಮಹಾರಾಷ್ಟ್ರದ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 26 ರಂದು ಕೊನೆಗೊಳ್ಳಲಿದೆ.

2019ರಲ್ಲಿ ಮಹಾರಾಷ್ಟ್ರದಲ್ಲಿ ಒಂದು ಹಂತದಲ್ಲಿ ಮತ್ತು ಜಾರ್ಖಂಡ್ನಲ್ಲಿ ಐದು ಹಂತಗಳಲ್ಲಿ ಚುನಾವಣೆಗಳು ನಡೆದಿತ್ತು. ಈ ಬಾರಿ ಮಹಾರಾಷ್ಟ್ರದಲ್ಲಿ ಒಂದು ಹಂತದಲ್ಲಿ ಹಾಗೂ ಜಾರ್ಖಂಡ್ನಲ್ಲಿ 2 ಅಥವಾ 3 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಆದರೆ 2019ರಲ್ಲಿ ಎರಡೂ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಚುನಾವಣೆ ನಡೆದಿತ್ತು. ಹರಿಯಾಣದ ಜೊತೆಗೆ ಮಹಾರಾಷ್ಟ್ರ ಚುನಾವಣೆಗಳು ನಡೆದಿದ್ದರೆ, ಡಿಸೆಂಬರ್ನಲ್ಲಿ ಜಾರ್ಖಂಡ್ ಚುನಾವಣೆಗಳು ನಡೆದಿದ್ದವು.
ಇಂದು ಉಪಚುನಾವಣೆಗಳ ದಿನಾಂಕ ಘೋಷಣೆ ಸಾಧ್ಯತೆ
ಇಂದು ಮಧ್ಯಾಹ್ನ 3.30ಕ್ಕೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ. ಚುನಾವಣಾ ಆಯೋಗ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇದಕ್ಕಾಗಿ ಪತ್ರಿಕಾಗೋಷ್ಠಿ ಕರೆಯಲಾಗಿದೆ. 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ, ಅಂದರೆ ಅದಕ್ಕೂ ಮೊದಲು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. 81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಯ ಅಧಿಕಾರಾವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ.
ಸುಮಾರು 50 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ದಿನಾಂಕವನ್ನೂ ಚುನಾವಣಾ ಆಯೋಗ ಪ್ರಕಟಿಸಬಹುದು. ಇವುಗಳಲ್ಲಿ ವಯನಾಡ್ ಲೋಕಸಭಾ ಕ್ಷೇತ್ರವೂ ಸೇರಿದೆ. ಈ ಕ್ಷೇತ್ರದಿಂದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು. ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿ ಅಲ್ಲಿಯೂ ಗೆದ್ದರು. ಎರಡೂ ಸ್ಥಾನಗಳನ್ನು ಗೆದ್ದ ನಂತರ ಅವರು ವಯನಾಡ್ ಸ್ಥಾನವನ್ನು ತೆರವು ಮಾಡಿದರು. ವಯನಾಡ್ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳ ಸಿದ್ಧತೆ
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಸೇರಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯು ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎನ್ಸಿಪಿ-ಎಸ್ಪಿ) ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿಯೊಂದಿಗೆ ಸ್ಪರ್ಧಿಸಲಿದೆ.
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಆಯೋಗದ ತಂಡ ಜಾರ್ಖಂಡ್ಗೆ ಭೇಟಿ ನೀಡಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳಿಂದಲೂ ಪ್ರತಿಕ್ರಿಯೆ ಪಡೆಯಲಾಗಿದೆ. ದೀಪಾವಳಿ ಹಬ್ಬ ಉಲ್ಲೇಖಿಸಿ ನವೆಂಬರ್ 15 ರ ನಂತರ ಚುನಾವಣೆ ನಡೆಸುವಂತೆ ಮುಖಂಡರು ಮನವಿ ಮಾಡಿದ್ದರು.












Click it and Unblock the Notifications