ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ತರಬೇತಿ ಅನಿವಾರ್ಯ: ಸುಪ್ರೀಂ ಕೋರ್ಟ್
ನವದೆಹಲಿ, ಮಾರ್ಚ್ 23: ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ಕೌಶಲ್ಯ ವೃದ್ಧಿ ತರಬೇತಿ ಅನಿವಾರ್ಯ ಎಂದು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಜನರನ್ನು ಅನಗತ್ಯವಾಗಿ ಕಸ್ಟಡಿಗೆ ಕಳುಹಿಸುವಂತಹ ಮ್ಯಾಜಿಸ್ಟ್ರೇಟ್ಗಳ ನ್ಯಾಯಾಂಗ ಕೆಲಸವನ್ನು ಹಿಂಪಡೆಯಬೇಕು. ಅವರನ್ನು ನ್ಯಾಯಾಂಗ ಅಕಾಡೆಮಿಗಳಿಗೆ ತರಬೇತಿಗಾಗಿ ಕಳುಹಿಸಬೇಕು ಎಂದು ಪೀಠವು ತಿಳಿಸಿದೆ.

'ಅಗತ್ಯವಿಲ್ಲದ ಕಡೆಗೆ ಜನರನ್ನು ಕಸ್ಟಡಿಗೆ ಕಳುಹಿಸುವುದು ಕರ್ತವ್ಯ ಲೋಪವಾಗಿದೆ. ಇದು ಮತ್ತಷ್ಟು ಮೊಕದ್ದಮೆಗಳನ್ನು ಸೃಷ್ಟಿಸುತ್ತದೆ. ಇದರಿಂದ ವಿಚಾರಣೆಯ ಸಮಯವೂ ಹಾಳಾಗುತ್ತಿದೆ. ತಮ್ಮ ಮೇಲ್ವಿಚಾರಣೆಯಲ್ಲಿರುವ ಅಧೀನ ನ್ಯಾಯಾಂಗವು ನೆಲದ ಕಾನೂನನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಹೈಕೋರ್ಟ್ಗಳ ಕರ್ತವ್ಯವಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮ್ಯಾಜಿಸ್ಟ್ರೇಟ್ಗಳು ಅನಗತ್ಯ ಆದೇಶಗಳನ್ನು ಜಾರಿಗೊಳಿಸಿದರೆ, ಅಂತವರನ್ನು ನ್ಯಾಯಾಂಗದ ಕೆಲಸದಿಂದ ಹೊರಹಾಕಬೇಕು. ಆ ಮ್ಯಾಜಿಸ್ಟ್ರೇಟ್ಗಳನ್ನು ಕೌಶಲ್ಯಗಳ ಉನ್ನತೀಕರಣಕ್ಕಾಗಿ ನ್ಯಾಯಾಂಗ ಅಕಾಡೆಮಿಗಳಿಗೆ ಕಳುಹಿಸಬೇಕು ಎಂದು ಪೀಠ ಹೇಳಿದೆ.
ಅಧೀನ ನ್ಯಾಯಾಂಗವು ದೇಶದ ಕಾನೂನನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೈಕೋರ್ಟ್ಗಳ ಕರ್ತವ್ಯವಾಗಿದೆ ಎಂದು ಪೀಠವು ತಿಳಿಸಿದೆ.

ಇಂತಹ ಆದೇಶಗಳನ್ನು ಉತ್ತರ ಪ್ರದೇಶ ರಾಜ್ಯದ ನ್ಯಾಯಾಲಯಗಳು ಹೆಚ್ಚಾಗಿ ನೀಡುತ್ತವೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಅಲಹಾಬಾದ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗೆ ಅದರ ಬಗ್ಗೆ ತಿಳಿಸುವಂತೆ ಆದೇಶಿಸಿದೆ.
'ಹೆಚ್ಚಿನ ಸಂಖ್ಯೆ ಪ್ರಕರಣಗಳು ಉತ್ತರ ಪ್ರದೇಶದಿಂದ ಬಂದಿದೆ. ವಿಶೇಷವಾಗಿ ಹತ್ರಾಸ್, ಗಾಜಿಯಾಬಾದ್ ಮತ್ತು ಲಕ್ನೋ ನ್ಯಾಯಾಲಯಗಳಲ್ಲಿ ಹೊರಡಿಸಲಾದ ಆದೇಶಗಳು ಅಜ್ಞಾನದಿಂದ ಕೂಡಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜುಲೈ 2022 ರ ತೀರ್ಪಿನ ( ಸತೇಂದರ್ ಕುಮಾರ್ ಆಂಟಿಲ್ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ ). ಅನುಸರಣೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅಲ್ಲಿ ಇತರ ವಿಷಯಗಳ ಜೊತೆಗೆ, ಬಂಧನಗಳು ಮತ್ತು ವಿಚಾರಣೆಗಳಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ನಿಬಂಧನೆಗಳನ್ನು ಜಾರಿಗೊಳಿಸುವ ಅಗತ್ಯವನ್ನು ಕೋರ್ಟ್ ಒತ್ತಿ ಒತ್ತಿಹೇಳಿದೆ.
ಈ ತೀರ್ಪಿನಲ್ಲಿ ಪೀಠವು ಹೊಸ ಜಾಮೀನು ಶಾಸನಕ್ಕೆ ಕರೆ ನೀಡಿದೆ. ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ಎರಡು ವಾರಗಳಲ್ಲಿ ನಿರ್ಧರಿಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 41 ಮತ್ತು 41 ಎ ಅಡಿಯಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸದಿದ್ದಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ಅರ್ಹತೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಈ ನಿರ್ದೇಶನಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲು ಆದೇಶಿಸಲಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಅಫಿಡವಿಟ್ಗಳು / ಸ್ಥಿತಿಯ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 170 ರ ತಪ್ಪು ವ್ಯಾಖ್ಯಾನದ ಕುರಿತು ಅಂತಿಮ ವರದಿಯನ್ನು ಸಲ್ಲಿಸಲಾಗಿದೆ. ಮಂಗಳವಾರ, ದೆಹಲಿ, ತೆಲಂಗಾಣ, ಮೇಘಾಲಯ ಮತ್ತು ಉತ್ತರಾಖಂಡದ ಹೈಕೋರ್ಟ್ಗಳ ರಿಜಿಸ್ಟ್ರಾರ್ಗಳು ಅನುಸರಣೆ ವರದಿಗಳನ್ನು ಸಲ್ಲಿಸದ ಕಾರಣ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಈ ಪ್ರಕರಣದ ಕುರಿತು ವರದಿ ನೀಡಲು ವಿಳಂಬ ಮಾಡಿದ್ದ 4 ಹೈಕೋರ್ಟ್ಗಳು, CBI ಹಾಗೂ ರಾಜ್ಯ ಸರ್ಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ಫೆಬ್ರುವರಿಯಲ್ಲಿ ಬೇಸರ ವ್ಯಕ್ತಪಡಿಸಿತ್ತು. ಸಿದ್ಧಾರ್ಥ್ ಪ್ರಕರಣ ಮತ್ತು ಅಂಟಿಲ್ ಪ್ರಕರಣಗಳಲ್ಲಿ ನೀಡಲಾದ ತೀರ್ಪುಗಳನ್ನು ಕಾನೂನಿನ ಪಠ್ಯಕ್ರಮದಲ್ಲಿ ಅಳವಡಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.












Click it and Unblock the Notifications