ಮೋದಿ ನಾಯಕನಾಗಿ ಭಾರತವನ್ನು ವಿಫಲಗೊಳಿಸಿದರು: ಮನಮೋಹನ್ ಸಿಂಗ್
ನವದೆಹಲಿ, ಮೇ 15: ಭಾರತವು ಮೋದಿ ಸರ್ಕಾರಕ್ಕೆ ನಿರ್ಗಮನದ ದಾರಿ ತೋರಿಸಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ದೇಶ ನಿರಾಳವಾಗಲಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
'ದಿ ಟ್ರಿಬ್ಯೂನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು, ಮೋದಿ ನೇತೃತ್ವದ ಸರ್ಕಾರದ ದುರಾಡಳಿತ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಆಳವಾದ ಹತಾಶೆಯ ಸ್ಥಿತಿಯನ್ನು ನಿರ್ಮಿಸಿದೆ. ಬೃಹತ್ ನಿರುದ್ಯೋಗ, ಗ್ರಾಮೀಣ ಭಾಗಗಳಲ್ಲಿನ ಅವ್ಯವಸ್ಥೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನಷ್ಟ, ಶೋಷಿತ ವರ್ಗಗಳ ಹಕ್ಕುಗಳನ್ನು ಕಸಿದುಕೊಂಡಿರುವುದು, ಹೊಣೆಗೇಡಿತನವಿಲ್ಲದ ಸಾಲು ಸಾಲು ಭ್ರಷ್ಟಾಚಾರ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಇವೆಲ್ಲವೂ ಮೋದಿ ಸರ್ಕಾರ ನಡೆಸಿದ ಕೆಟ್ಟ ಆಡಳಿತಕ್ಕೆ ಸಾಕ್ಷಿಗಳು ಎಂದರು.
ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಾನಿ ಮಾಡಿರುವುದು ಮತ್ತು ತಮ್ಮನ್ನು ಪ್ರಶ್ನಿಸಿದವರ ಧ್ವನಿಗಳನ್ನು ಹತ್ತಿಕ್ಕಿರುವುದು ಬಿಜೆಪಿಯ ಮೂಲ ಕಾರ್ಯಸೂಚಿಯಾಗಿತ್ತು. ಅದನ್ನೇ ಅವರು 'ನವ ಭಾರತ' ಎಂದು ಬಿಂಬಿಸಿಕೊಂಡರು ಎಂದು ಟೀಕಿಸಿದರು.

ನೋಟ್ ಬ್ಯಾನ್ನಿಂದ ಭಾರಿ ಹಿನ್ನಡೆ
ಅಪನಗದೀಕರಣವೊಂದೇ ದೇಶದ ಜಿಡಿಪಿ ಮೇಲೆ ಶೇ 2ರಷ್ಟು ಹಿನ್ನಡೆ ಉಂಟುಮಾಡಿತು. ಇದರಿಂದ ಆರ್ಥಿಕತೆಗೆ 3 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಯಿತು. ಇದು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಅನೌಪಚಾರಿಕ ವಲಯ, ರೈತರು ಮತ್ತು ಗೃಹಿಣಿಯರ ಮೇಲೆ ನಡೆದ ಉದ್ದೇಶಪೂರ್ವಕ ದಾಳಿ. ಇದರಿಂದ ದೇಶಕ್ಕೆ ಸಿಕ್ಕಿದ್ದಾದರೂ ಏನು? ನವೆಂಬರ್ 10, 2016ರಂದು ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಂತೆ 2 ಲಕ್ಷ ಕೋಟಿ ರೂಪಾಯಿ ಕಪ್ಪು ಹಣವಾಗಲಿ ಅಥವಾ ನಕಲಿ ನೋಟುಗಳಾಗಲಿ ಪರಿಶೀಲನೆಗೆ ಒಳಗಾಗಲಿಲ್ಲ.

ಮೋದಿ ಭಾರತವನ್ನು ವಿಫಲಗೊಳಿಸಿದರು
ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಆದರೆ, ಒಬ್ಬ ನಾಯಕರಾಗಿ ಮೋದಿ ಭಾರತವನ್ನು ವಿಫಲಗೊಳಿಸಿದರು. ಜನರ ಆಕಾಂಕ್ಷೆಗಳನ್ನು ಮತ್ತು ಅವರ ನೋವುಗಳನ್ನು ಆಲಿಸಿ ಅವರಿಗೆ ನೆರವು ನೀಡುವುದು ನಾಯಕನ ಪಾತ್ರ ಎಂದು ನಾನು ನಂಬಿದ್ದೇನೆ. ಸಹಮತ ಎನ್ನುವುದು ಪ್ರಜಾಪ್ರಭುತ್ವದ ಎಸಳು. ನಿಮ್ಮ ಬಯಕೆಗಳನ್ನು ಮತ್ತು ನಿಮ್ಮ ಕಲ್ಪನೆಗಳನ್ನು ಏಕಪಕ್ಷೀಯವಾಗಿ ಬಲವಂತವಾಗಿ ಹೇರಿದರೆ ಹಾಗೂ ಎಲ್ಲರೂ ಅದನ್ನು ಪಾಲಿಸಬೇಕು ಎಂದು ನಿರೀಕ್ಷಿಸಿದರೆ ಗೊಂದಲ, ಕ್ಷೋಭೆಗಳು ಏಳುವುದು ಸಹಜ.

ವಿಡಿಯೋ ಗೇಮ್ ಹೋಲಿಕೆ ಅವಮಾನಕರ
ನಮ್ಮ ಭಾರತೀಯ ಸೇನಾ ಪಡೆಯ ಸಾಧನೆಯನ್ನು ವಿಡಿಯೋ ಗೇಮ್ಗೆ ಹೋಲಿಸುವುದು ನಮ್ಮ ದೇಶಕ್ಕೆ ಅವಮಾನ ಮಾಡಿದಂತೆ. ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸುವ ಮೂಲಕ ಯಶಸ್ವಿ ಸೇನಾ ಕಾರ್ಯಾಚರಣೆಗಳನ್ನು ಪ್ರಶ್ನಿಸುವವರು ಅಹಂಕಾರ ಮತ್ತು ಸ್ವಯಂ ವೈಭವೀಕರಣ ಮಾಡಿಕೊಳ್ಳಬಾರದು.

ನಾವೂ ಸ್ವಾತಂತ್ರ್ಯ ಕೊಟ್ಟಿದ್ದೆವು
ನಮ್ಮ ಸೇನಾ ಪಡೆಗಳಿಗೆ ಗಡಿಯಲ್ಲಿ ಯಾವುದೇ ಬೆದರಿಕೆಗಳಿಗೆ ಪ್ರತಿಕ್ರಿಯೆ ನೀಡಲು ಮುಕ್ತ ಸ್ವಾತಂತ್ರ್ಯ ನೀಡಲಾಗಿತ್ತು. ಹಿಂದಿನ ಸರ್ಕಾರಗಳಿದ್ದಾಗ ಅನೇಕ ನಿರ್ಣಾಯಕ ಸೇನಾ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಈ ದಾಳಿಗಳ ಕುರಿತು ಹಿಂದಿನ ಸೇನಾ ಪಡೆಗಳ ಮುಖ್ಯಸ್ಥರು ಮತ್ತು ಇತರೆ ಶ್ರೇಣಿಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಕೂಡ ಈ ಹಿಂದೆ ಸರ್ಜಿಕಲ್ ದಾಳಿಗಳನ್ನು ನಡೆಸಿರುವುದರ ದಾಖಲೆ ಹೊಂದಿದೆ.












Click it and Unblock the Notifications