ಮಿಗ್ 21ರಿಂದ ಜಿಗಿಯುವ ಮುನ್ನ ಅಭಿನಂದನ್ ರೇಡಿಯೋ ಸಂದೇಶವೇನು?
"ಆರ್ 73 ಸೆಲೆಕ್ಟೆಡ್" ಎಂಬುದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್ 21 'ಬೈಸನ್'ಯುದ್ಧ ವಿಮಾನದಿಂದ ನೀಡಿದ ಕೊನೆಯ ರೇಡಿಯೋ ಸಂದೇಶವಾಗಿತ್ತು. ಇದಾದ ಬಳಿಕ ಪಾಕಿಸ್ತಾನದ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಲು ಮುಂದಾದರು. ವೈಪೆಲ್ ಆರ್ 73 air to air ಕ್ಷಿಪಣಿಯನ್ನು ಪಾಕಿಸ್ತಾನದ ಎಫ್ 16 ಯುದ್ಧ ವಿಮಾನದತ್ತ ಕಳಿಸಿದರು. ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದ ಮಟ್ಟದಲ್ಲಿ ಈ ಎರಡು ವಿಮಾನಗಳ ಕಾದಾಟ ಆರಂಭವಾಗಿತ್ತು.
ಫೆಬ್ರವರಿ 27ರಂದು 10 ಗಂಟೆ ಸುಮಾರಿಗೆ ಭಾರತದ ವಾಯು ಪ್ರದೇಶದ ರಜೌರಿಯ ಸುಂದರ್ ಬನಿ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಪಾಕಿಸ್ತಾನಿ ವಿಮಾನವನ್ನು ಉರುಳಿಸುವಲ್ಲಿ ಭಾರತದ ಮಿಗ್ 21 ಬೈಸನ್ ಯಶಸ್ವಿಯಾಗಿತ್ತು. ಆದರೆ, ವಿಮಾನದಿಂದ ಜಿಗಿಯುವುದು ಅನಿವಾರ್ಯವಾದಾಗ ಪ್ಯಾರಾಚೂಟ್ ಮೂಲಕ ಕೆಳಗಿಳಿದ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಖೈಬಲ್ ಪಖ್ತುಂಕ್ವಾದ ಬಾಲಕೋಟ್ ನಲ್ಲಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆ ಮೇಲೆ ಮಿರಾಜ್ 2000 ಬಳಸಿ ದಾಳಿ ನಡೆಸಿದ ಬಳಿಕ, ಪಾಕಿಸ್ತಾನವು ಎಫ್ 16, ಜೆಎಫ್ 17ಎಸ್ ಹಾಗೂ ಮಿರಾಜ್ -5 ಜೆಟ್ಸ್ ಬಳಸಿ ಭಾರತೀಯ ಸೇನೆ ಗುರಿಯನ್ನಾಗಿಸಲು ಯತ್ನಿಸಿತ್ತು. ಭಿಂಬರ್ ಗಲಿಯ ಬ್ರಿಗೇಡ್ ಕೇಂದ್ರ ಕಚೇರಿಯಿಂದ ನಾರಿಯನ್ ನಲ್ಲಿದ್ದ ಶಸ್ತ್ರಾಸ್ತ್ರ ಕೇಂದ್ರದ ತನಕ ಗುರಿಯನ್ನು ಹೊಂದಿತ್ತು. ಆದರೆ, ಎಲ್ಲವೂ ವಿಫಲಗೊಂಡಿತು.

ವಾಯುಸೇನೆಯ ಪ್ರಮುಖ 6 ಮಿಗ್ 21 ಪೈಲಟ್ ಗಳ ಪೈಕಿ ವರ್ಧಮಾನ್ ಕೂಡಾ ಒಬ್ಬರು. ಸುಖೋಯ್ 30ಎಂಕೆಐ, ಮಿರಾಜ್ 2000 ಹಾಗೂ ಮಿಗ್ 29ಗಳನ್ನು ವಿವಿಧ ವಾಯುನೆಲೆಯಲ್ಲಿ ನಿಲ್ಲಿಸಿದ್ದ ಭಾರತವು, ತಕ್ಕ ಉತ್ತರ ನೀಡಲು ಮುಂದಾಗಿತ್ತು. 60ರ ದಶಕದ ವಿನ್ಯಾಸ ಹೊಂದಿರುವ ಮಿಗ್ 21 ಯುದ್ಧ ವಿಮಾನದಲ್ಲಿದ್ದ ಅಭಿನಂದನ್ ಅವರು ಯುಎಸ್ ವಿನ್ಯಾಸದ ಅತ್ಯಾಧುನಿಕ ಎಫ್ 16 ಹೊಡೆದುರುಳಿಸಿದ್ದು, ಅದರಲ್ಲೂ ಅತಿ ಸಮೀಪದ ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಮೆರಿಕ ಕೂಡಾ ಪಾಕಿಸ್ತಾನದ ವೈಫಲ್ಯದ ಬಗ್ಗೆ ಪ್ರಶ್ನಿಸಿದೆ.ಎಫ್ 16 ಬಳಕೆ ಬಗ್ಗೆ ಮುನ್ಸೂಚನೆ ನೀಡಿಲ್ಲ ಏಕೆ ಎಂದು ವರದಿ ಕೇಳಿದೆ.












Click it and Unblock the Notifications