ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಿಗೆ ಸಿದ್ಧವಾಗಿದೆ ಸೂತ್ರ
ನವದೆಹಲಿ, ಏಪ್ರಿಲ್ 08 : ಕೊರೊನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 14ರಂದು ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಮುಂದೇನು? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಲಾಕ್ ಡೌನ್ ಅನ್ನು ಹೇಗೆ ತೆರವುಗೊಳಿಸಬೇಕು ಎಂದು ಸೂತ್ರವೊಂದನ್ನು ಸಿದ್ಧಪಡಿಸಲಾಗಿದೆ. ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವುಗೊಳಿಸಿದರೂ ಕೆಲವು ಪ್ರದೇಶಗಳ, ಚಟುವಟಿಕೆಗಳ ಮೇಲಿನ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ.
ದೇಶದಲ್ಲಿ ಕೊರೊನಾ ಪೀಡಿತ ಜಿಲ್ಲೆಗಳ ಪಟ್ಟಿಯನ್ನು ಮಾಡಲಾಗಿದೆ. ಆ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಪ್ರಕರಣಗಳ ಆಧಾರದ ಮೇಲೆ ಹಂತ-ಹಂತವಾಗಿ ಲಾಕ್ ಡೌನ್ ತೆರವುಗೊಳ್ಳಲಿದೆ. ಎಲ್ಲಾ ಪ್ರದೇಶಗಳಲ್ಲಿಯೂ ಒಟ್ಟಿಗೆ ಲಾಕ್ ಡೌನ್ ನಿಯಮ ಸಡಿಲಗೊಳಿಸುವ ಉದ್ದೇಶ ಸರ್ಕಾರದ ಮುಂದಿಲ್ಲ.
65 ವರ್ಷ ಮೀರಿದವರು ಮನೆಯಲ್ಲಿಯೇ ಇರಬೇಕು ಎಂಬ ನಿಯಮ ಜಾರಿಯಲ್ಲಿರುತ್ತದೆ. ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಸಮಾವೇಶ ಹೀಗೆ ಜನ ಹೆಚ್ಚಾಗಿ ಸೇರುವ ಕಾರ್ಯಕ್ರಮಗಳ ಮೇಲಿನ ನಿರ್ಬಂಧ ಹಾಗೆಯೇ ಮುಂದುವರೆಯುವ ಸಾಧ್ಯತೆ ಇದೆ.

ಹೇಗಿರಲಿದೆ ಲಾಕ್ ಡೌನ್ ತೆರವು?
ಕೋವಿಡ್ -19 ಲಾಕ್ ಡೌನ್ ತೆರವು ಎಂಬ ಮಾರ್ಗಸೂಚಿ ಸಿದ್ಧವಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿರುವ ಭಾರತೀಯ ರೈಲ್ವೆಯ ವಿಪತ್ತು ನಿರ್ವಹಣಾ ಕೇಂದ್ರ ಈ ಮಾರ್ಗಸೂಚಿ ರಚನೆ ಮಾಡಿದೆ. ಭಾರತೀಯ ರೈಲ್ವೆ ಮತ್ತು ನೀತಿ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಇದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮೂರು ಅಂಶಗಳ ಮಾರ್ಗಸೂಚಿ
ಒಟ್ಟು ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. 7 ದಿನದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ, ಜನಸಂದ್ರಿತ ಪ್ರದೇಶಗಳು ಮತ್ತು ಸಕ್ರಿಯ ಪ್ರಕರಣಗಳ ಸಂಚಾರ, ಹೆಚ್ಚು ಪ್ರಕರಣಗಳು ಇಲ್ಲದ ರಾಜ್ಯಗಳು ಎಂಬ ಅಂಶಗಳ ಆಧಾರದ ಮೇಲೆ ಮಾರ್ಗಸೂಚಿ ತಯಾರಾಗಿದೆ.

ಅಗತ್ಯ ವಸ್ತುಗಳು ಮಾತ್ರ ಸಿಗಲಿವೆ
ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 7 ದಿನಗಳಲ್ಲಿ 50 ಇದ್ದರೆ ಅಂತಹ ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವುದಿಲ್ಲ. ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮಾತ್ರ ಅವಕಾಶ ನೀಡಲಾಗುತ್ತದೆ. ಹೆಚ್ಚು ಪ್ರಕರಣಗಳು ದಾಖಲಾಗಿರುವ ಜಿಲ್ಲೆಗಳನ್ನು ಐಸೋಲೇಷನ್ನಲ್ಲಿ ಇಡಲಾಗುತ್ತದೆ. ಅಂತಹ ಜಿಲ್ಲೆಗಳಿಗೆ ಹೋಗುವಂತಿಲ್ಲ, ಹೊರಬರುವಂತಿಲ್ಲ.

ಸಾರ್ವಜನಿಕ ಸ್ಥಳಗಳು ಬಂದ್
ಹೆಚ್ಚು ಜನಸಂದಣಿ ಸೇರುವ ಶಾಪಿಂಗ್ ಮಾಲ್, ಚಿತ್ರಮಂದಿರ, ಪಾರ್ಕ್, ಬೀಚ್, ಪ್ರವಾಸಿ ತಾಣಗಳು ಮುಂದಿನ ಆದೇಶದ ತನಕ ಬಂದ್ ಆಗಿರುತ್ತದೆ. ರೆಸ್ಟೋರೆಂಟ್ಗಳು ಬಂದ್ ಆಗಿರಲಿದ್ದು, ಹೋಂ ಡೆಲಿವರಿ ವ್ಯವಸ್ಥೆ ಮಾತ್ರ ಇರಲಿದೆ. ಚಿಕ್ಕ ಹೋಟೆಲ್ಗಳಿಗೆ ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿದ್ದರೆ ಬಾಗಿಲು ತೆರೆಯಬಹುದು, ಹೊರಗಿನಿಂದ ಯಾರೂ ಕೆಲಸಕ್ಕೆ ಬರುವಂತಿಲ್ಲ.

ಕಾರ್ಮಿಕರ ಸ್ಥಿತಿ ಏನು?
ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸಬೇಕು. ಬೇರೆ ಜಿಲ್ಲೆಯಿಂದ ವಲಸೆ ಕಾರ್ಮಿಕರು ಇಲ್ಲಿಗೆ ಬರುವಂತಿಲ್ಲ. ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿದ್ದರೆ ಕೆಲಸಗಳನ್ನು ಮುಂದುವರೆಸಬಹುದಾಗಿದೆ.

ಸಾರಿಗೆ ವ್ಯವಸ್ಥೆ ಹೇಗಿರಲಿದೆ?
ಸಮೂಹ ಸಾರಿಗೆ ವ್ಯವಸ್ಥೆ ಶೇ 50ರಷ್ಟು ಮಾತ್ರ ಕಾರ್ಯ ನಿರ್ವಹಣೆ ಮಾಡಬೇಕು. ಕಡಿಮೆ ಪ್ರಕರಣ ದಾಖಲಾದ ಜಿಲ್ಲೆಗಳಿಂದ ದೇಶಿಯ ವಿಮಾನ ಸೇವೆಗಳನ್ನು ಆರಂಭಿಸಬಹುದಾಗಿದೆ. ಅಂತರರಾಜ್ಯಗಳ ಸಂಚಾರಕ್ಕೆ ರೈಲನ್ನು ಬಳಸಬೇಕಿದೆ ಎಂದು ಮಾರ್ಗಸೂಚಿ ಹೇಳಿದೆ.











Click it and Unblock the Notifications