ಫೆ 27ರ ಸಭೆಯಲ್ಲಿ ಅಡ್ವಾಣಿ,ಮೋದಿ ಮಧ್ಯೆ ನಡೆದಿದ್ದೇನು?
ನವದೆಹಲಿ, ಮಾ 5: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡುವಣ ಶೀತಲ ಸಮರ ಚುನಾವಣೆ ಮುಗಿಯುವ ವೇಳೆಗೆ ಯಾವ ಹಂತಕ್ಕೆ ಬಂದು ನಿಲ್ಲತ್ತದೋ ಕಾಲವೇ ನಿರ್ಧರಿಸಲಿದೆ. ಈ ಮಧ್ಯೆ, ಫೆಬ್ರವರಿ 27ರಂದು ನಡೆದ ಪಕ್ಷದ ಸಭೆಯಲ್ಲಿ ಅಡ್ವಾಣಿ ತನಗಿರುವ ಅಸಮಾಧಾನವನ್ನು ಮಗುದೊಮ್ಮೆ ಹೊರ ಹಾಕಿದ್ದಾರೆ.
ಚುನಾವಣಾ ಸಭೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ಕಡೆಗಣಿಸಿ ನರೇಂದ್ರ ಮೋದಿ ಏಕ ಚಕ್ರಾಧಿಪತ್ಯ ಸ್ಥಾಪಿಸುತ್ತಿದ್ದಾರೆಂದು ಅಡ್ವಾಣಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯಲ್ಲಿ ಮೋದಿಯವರದ್ದು 'ಒನ್ ಮ್ಯಾನ್ ಶೋ' ಎನ್ನುವ ಹೇಳಿಕೆಗೆ ಅಡ್ವಾಣಿ ಕೂಡಾ ಈಗ ಪರೋಕ್ಷವಾಗಿ ಧ್ವನಿಗೂಡಿಸಿದಂತಾಗಿದೆ. (ಅಡ್ವಾಣಿ,ಮೋದಿ:ಬಿಜೆಪಿ ಗೆಲುವಿಗೆ ಕಾರಣರಾರು)
ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ. ಹಿರಿಯ ಮುಖಂಡರೂ ಚುನಾವಣಾ ಸಭೆಗಳಲ್ಲಿ ಭಾಗವಹಿಸ ಬೇಕು. ಆದರೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರದ ಭರಾಟೆ ಬರೀ ಮೋದಿ ಮಯವಾಗಿದೆ.
ರಾಜನಾಥ್ ಸಿಂಗ್ ಹೊರತು ಪಡಿಸಿ ಪಕ್ಷದ ಹಿರಿಯ ಮುಖಂಡರನ್ನು ಚುನಾವಣಾ ಪ್ರಚಾರದಲ್ಲಿ ಕಡೆಗಣಿಸಲಾಗುತ್ತಿದೆ. ಲೋಕಸಭೆಯಲ್ಲಿನ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೂ ಸಭೆಗಳಗೆ ಆಹ್ವಾನಿಸದೇ ನಿರ್ಲಕ್ಷಿಸಲಾಗುತ್ತಿದೆ ಎಂದು ಅಡ್ವಾಣಿ ಬೇಸರ ವ್ಯಕ್ತ ಪಡಿಸಿದ್ದಾರೆಂದು ಇಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಮುಂದೆ ಓದಿ..

ಮೋದಿ ಸಭೆಗೆ ವಿನಂತಿ
ಎಲ್ಲಾ ಬಿಜೆಪಿ ರಾಜ್ಯ ಘಟಕಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಮೋದಿ ಸಭೆ ನಡೆಸ ಬೇಕೆಂದು ವಿನಂತಿಸಿ ಕೊಳ್ಳುತ್ತಿರುವುದರಿಂದ ಮೋದಿ ಸಾರ್ವಜನಿಕ ಸಭೆ ಆಯೋಜಿಸಲಾಗುತ್ತಿದೆ ಎಂದು ಪಕ್ಷದ ಮುಖಂಡರೊಬ್ಬರ ಹೇಳಿಕೆಗೆ ಅಡ್ವಾಣಿ ಸಹಮತ ವ್ಯಕ್ತ ಪಡಿಸಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಮೋದಿ ಬಗ್ಗೆ ಬೇಸರ
ಫೆಬ್ರವರಿ 27ರಂದು ನಡೆದ ಸಭೆಯಲ್ಲಿ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ಕಳೆದ ಕೆಲವು ವಾರಗಳಿಂದ, ಚುನಾವಣಾಪೂರ್ವ ಸಭೆಗಳಲ್ಲಿ ಮೋದಿ ಏಕಸ್ವಾಮ್ಯದ ಬಗ್ಗೆ ಅಡ್ವಾಣಿ ಕೂಡಾ ಬೇಸರ ವ್ಯಕ್ತ ಪಡಿಸಿದ್ದಾರೆಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖನ
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸೇರಿದ್ದ ಸಭೆಯಲ್ಲಿ ರಾಜನಾಥ್ ಸಿಂಗ್, ಅಡ್ವಾಣಿ, ಮೋದಿ ಮತ್ತಿತರು ಭಾಗವಹಿಸಿದ್ದರು. ಸಭೆಯಲ್ಲಿ ಸೇರಿದ್ದ ಮುಖಂಡರೊಬ್ಬರು ಹರ್ಯಾಣದಲ್ಲಿ ಫೆಬ್ರವರಿ 24ರಂದು ನಡೆದ ಸಭೆಯಲ್ಲಿ ರಾಹುಲ್ ಗಾಂಧಿ 'ಬಿಜೆಪಿಯಲ್ಲಿ ಮೋದಿ ಒನ್ ಮ್ಯಾನ್ ಶೋ' ಎನ್ನುವ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನಾವು ತಿರುಗೇಟು ನೀಡಬೇಕೆನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮೌನಕ್ಕೆ ಶರಣಾದ ಮೋದಿ
ಆಗ ಮಧ್ಯ ಪ್ರವೇಶಿಸಿದ ಅಡ್ವಾಣಿ, ರಾಹುಲ್ ಹೇಳಿಕೆಯಲ್ಲಿ ನನಗೆ ತಪ್ಪು ಕಾಣಿಸುವುದಿಲ್ಲ. ವಾಸ್ತವಾಂಶವನ್ನೇ ಅವರು ಹೇಳಿದ್ದಾರೆ ಅಂದಾಗ ಪಕ್ಕದಲ್ಲೇ ಕೂತಿದ್ದ ನರೇಂದ್ರ ಮೋದಿ ಮೌನಕ್ಕೆ ಶರಣಾದರು ಎಂದು ಹೆಸರು ಹೇಳಲು ಇಚ್ಚಿಸದ ಪಕ್ಷದ ಮುಖಂಡರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಮೋದಿ ಬೆಂಬಲಕ್ಕೆ ಹಲವರು
ಅಡ್ವಾಣಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗ ಬೇಕೆಂದು ಬಯಸಿದ್ದವರು. ಹಾಗಾಗಿ, ಮೋದಿ ಮೇಲೆ ಅವರಿಗೆ ಬೇಸರ ಸಹಜ ಎನ್ನುವ ಮಾತನ್ನು ಮೋದಿ ಬೆಂಬಲಿಗರು ಆಡುತ್ತಿದ್ದಾರೆ.












Click it and Unblock the Notifications