Tirupati: ಚಿರತೆ ಮೂಗಿಗೂ ಬಡಿದ ತಿರುಪತಿ ಲಡ್ಡುವಿನಲ್ಲಿದ್ದ ಪ್ರಾಣಿಕೊಬ್ಬು ವಾಸನೆ- ತಿರುಮಲದಲ್ಲಿ ಕಾಡು ಪ್ರಾಣಿಗಳ ಕಳ್ಳ ನಡಿಗೆ!
ತಿರುಪತಿ ಲಡ್ಡುವಿನಲ್ಲಿದ್ದ ಪ್ರಾಣಿಕೊಬ್ಬು ವಾಸನೆ ಚಿರತೆ ಮೂಗಿಗೂ ತಾಗಿದಂತೆ ಕಾಣಿಸುತ್ತಿದೆ. ತಿರುಪತಿಯಲ್ಲಿ ಕಾಡುಪ್ರಾಣಿಗಳ ಓಡಾಟ ಇತ್ತೀಚೆಗೆ ಹೆಚ್ಚಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ದಿನ ತಿರುಮಲದಲ್ಲಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದ್ದು ಸಂಚಲನ ಮೂಡಿಸಿದೆ. ಚಿರತೆ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶನಿವಾರ ರಾತ್ರಿ ಶ್ರೀವಾರಿ ಮೆಟ್ಟು ಮಾರ್ಗದ ನಿಯಂತ್ರಣ ಕೊಠಡಿಗೆ ಚಿರತೆ ಆಗಮಿಸಿದೆ. ಕಳ್ಳ ನಡಿಗೆಯಲ್ಲಿ ಬಂದ ಚಿರತೆಯನ್ನ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಭಯದಿಂದ ಕಂಟ್ರೋಲ್ ರೂಂ ಒಳಗೆ ಹೋಗಿ ಅವಿತುಕೊಂಡಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದರಿಂದ ಭಾನುವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಈ ವೇಳೆ ಚಿರತೆ ರಾತ್ರಿಯಲ್ಲಿ ಬಂದು ಹೋಗಿರುವುದು ಸ್ಪಷ್ಟವಾಗಿದೆ. ಸದ್ಯ ಅರಣ್ಯಾಧಿಕಾರಿಗಳು ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಚಿರತೆ ಪತ್ತೆಯಾಗಿಲ್ಲ. ಅದೃಷ್ಟವಶಾತ್ ಚಿರತೆ ರಾತ್ರಿಯಲ್ಲಿ ಬಂದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರು ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಮೂಲಕ ಸಾಗುತ್ತಾರೆ. ಆದರೆ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಮಾತ್ರ ಭಕ್ತರಿಗೆ ಸಾಗಲು ಅವಕಾಶ ಕಲ್ಪಿಸಲಾಗಿದೆ. ನಂತರ ಈ ಮಾರ್ಗದಲ್ಲಿ ಸಾಗಲು ಭಕ್ತರಿಗೆ ಅನುಮತಿ ಇಲ್ಲ.

ಆ ಭಾಗದಲ್ಲಿ ರಾತ್ರಿ ವೇಳೆ ಪ್ರಾಣಿಗಳು ಸಂಚರಿಸುವುದರಿಂದ ಯಾವುದೇ ಅಪಾಯವಾಗಬಾರದು ಎಂಬ ಉದ್ದೇಶದಿಂದ ಭಕ್ತರಿಗೆ ಶ್ರೀವಾರಿ ಮೆಟ್ಟು ಮಾರ್ಗದಿಂದ ಸಾಗಲು ರಾತ್ರಿ ಅಂದರೆ ಸಂಜೆ ಬಳಿಕ ಪ್ರವೇಶ ನಿಷೇಧಿಸಲಾಗಿದೆ. ಆದರೆ ವಾರ್ಷಿಕ ಗರುಡ ಸೇವಾ ದಿನ, ವೈಕುಂಠ ಏಕಾದಶಿಯಂತಹ ವಿಶೇಷ ದಿನಗಳಲ್ಲಿ ಈ ಮಾರ್ಗವು 24 ಗಂಟೆಗಳ ಕಾಲ ತೆರೆದಿರುತ್ತದೆ.
ಸಂಪೂರ್ಣ 2.1 ಕಿಮೀ ಉದ್ದದ ಈ ಮಾರ್ಗದ ಮೂಲಕ ಭಕ್ತರು ತಿರುಪತಿ ದೇವಸ್ಥಾನ ತಲುಪಲು ಸುಮಾರು 2ಗಂಟೆ 30 ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕಳೆದ ದಿನ ರಾತ್ರಿ ಕಂಡು ಬಂದ ಚಿರತೆ ಬಗ್ಗೆ ಸದ್ಯ ಆತಂಕ ಶುರುವಾಗಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಚಿರತೆ ಪತ್ತೆಗೆ ಮುಂದಾಗಿದ್ದಾರೆ.

ಇತ್ತೀಚೆಗೆ ತಿರುಮಲದಲ್ಲಿ ಚಿರತೆಗಳು ಭಕ್ತರಿಗೆ ಕಿರುಕುಳ ನೀಡುತ್ತಿವೆ. ಕಳೆದ ವರ್ಷ ಚಿರತೆ ದಾಳಿಗೆ ಮಗುವೊಂದು ಪ್ರಾಣ ಕಳೆದುಕೊಂಡಿತ್ತು. ಭಕ್ತಾದಿಗಳ ಮೇಲಿನ ದಾಳಿಯಿಂದಾಗಿ ಕೆಲ ವರ್ಷಗಳಿಂದ ಅಲಿಪಿರಿ ಮಾರ್ಗವಾಗಿ ರಾತ್ರಿ ವೇಳೆ ಭಕ್ತರಿಗೆ ಸಂಜೆ ಬಳಿಕ ಪ್ರವೇಶ ನಿಷೇಧಿಸಲಾಗಿದೆ.
ಆಂಧ್ರಪ್ರದೇಶದ ತಿರುಪತಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಿರುತ್ತದೆ. ತಿಮ್ಮಪ್ಪನ ಭಕ್ತರಲ್ಲಿ ಕೆಲವರು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ಶ್ರೀವಾರಿ ದರ್ಶನ ಪಡೆಯುತ್ತಾರೆ.
ಅಲ್ಲದೆ ಇದೇ ಅಕ್ಟೋಬರ್ 4 ರಿಂದ 12 ರವರೆಗೆ ನಡೆಯುವ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದ್ದು ಇದರಲ್ಲಿ ಭಾಗಿಯಾಗಲು ಸಾವಿರಾರು ಭಕ್ತರು ಆಗಮಿಸುವ ನೀರಿಕ್ಷೆ ಇದೆ. ಹೀಗಾಗಿ ಅಲಿಪಿರಿಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ನಿಗಾ ವಹಿಸಿದ್ದಾರೆ.
ಕಾಡು ಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದಿರಲು ಭಕ್ತರಲ್ಲಿ ಮನವಿ ಮಾಡಿದ್ದಾರೆ. ವಿಶೇಷವಾಗಿ ಮೆಟ್ಟಿಲುಗಳ ಮೂಲಕ ತಿರುಮಲಕ್ಕೆ ಸಾಗುವ ಭಕ್ತರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.












Click it and Unblock the Notifications