ಲಡಾಖ್ ಗಡಿ ವಿವಾದ: ಚೀನಾಗೆ ಸೇನಾ ಮುಖ್ಯಸ್ಥರ ಖಡಕ್ ಸಂದೇಶ
ನವದೆಹಲಿ, ಮೇ 28: ಭಾರತ ಮತ್ತು ಚೀನಾದ ನಡುವಿನ ಪೂರ್ವ ಲಡಾಖ್ ಗಡಿಯ ಎಲ್ಲ ವಿವಾದಿತ ಪ್ರದೇಶಗಳಿಂದ ಸೇನೆಯನ್ನು ಹಿಂತೆಗೆದುಕೊಳ್ಳದೇ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂ ಎಂ ನಾರವಣೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಭಾರತ-ಚೀನಾ ಗಡಿ ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ. ಭಾರತವು ಪೂರ್ವ ಲಡಾಖ್ನಲ್ಲಿ ತನ್ನ ಹಕ್ಕುಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ದೃಢ ಮತ್ತು ಸಮಸ್ಯೆ ಉಲ್ಬಣಿಸದ ರೀತಿಯಲ್ಲಿ ವ್ಯವಹರಿಸುತ್ತಿದೆ. ಇದರ ಜೊತೆಗೆ ಸೇನಾ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಕ್ತವಾಗಿದೆ ಎಂದರು.
45 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ನಡುವೆ ದೊಡ್ಡ ಮಟ್ಟದ ಸಂಘರ್ಷ ನಡೆಯಿತು. ಮೇ 5ರಂದು ನಡೆದ ಮುಖಾಮುಖಿಯಲ್ಲಿ ಎರಡೂ ಕಡೆಯ ಯೋಧರು ಪ್ರಾಣ ಬಿಟ್ಟಿರುವುದು ವರದಿಯಾಗಿದ್ದು, ಈ ಘಟನೆಗೆ ಒಂದು ವರ್ಷವಾಗಿದೆ. ಪ್ಯಾಂಗಾಂಗ್ ಲೇಕ್ ಬಳಿ ಸೇನಾಪಡೆ ತೆರವುಗೊಳಿಸುವ ನಿಟ್ಟಿನಲ್ಲಿ ಉತ್ತಮ ಪ್ರಕ್ರಿಯೆ ನಡೆದಿದೆ ಎಂದು ಎಂ ಎಂ ನಾರವಣೆ ಹೇಳಿದ್ದಾರೆ.

ಭಾರತ-ಚೀನಾ ನಡುವೆ ಒಪ್ಪಂದಗಳಿಗೆ ಅಂಕಿತ:
ಭಾರತೀಯ ಸೇನೆಯು ಪ್ರಸ್ತುತ ಎತ್ತರ ಪ್ರದೇಶದಲ್ಲಿರುವ ಎಲ್ಲಾ ಪ್ರಮುಖ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡಿದೆ. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ನಿರ್ವಹಿಸಲು ಸೇನಾಪಡೆ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಎಂ ಎಂ ನಾರವಣೆ ತಿಳಿಸಿದರು. ಎಲ್ಲಾ ವಿವಾದಿತ ಪ್ರದೇಶಗಳಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸಿದ್ದಲ್ಲಿ ಯಾವುದೇ ಸಮಸ್ಯೆ ಉಲ್ಬಣವುದಿಲ್ಲ ಎಂಬ ಅರವಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಉಲ್ಲಂಘಿಸಿರುವ ಹಲವಾರು ಗಡಿ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸಹಿ ಹಾಕಿವೆ ಎಂದು ಜನರಲ್ ನಾರವಾನೆ ಹೇಳಿದ್ದಾರೆ.
ಭಾರತ-ಚೀನಾ ಸೇನಾಪಡೆಗಳು ಮುಖಾಮುಖಿ:
ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ ವರ್ಷದಿಂದ ಗಸ್ತು-ರಹಿತ ವಲಯವನ್ನು ರಚಿಸಲಾಗಿತ್ತು. ಎರಡು ಕಡೆ ಸೈನಿಕರು ಗಡಿರೇಖೆ ಉಲ್ಲಂಘಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳಲು ಆಗಾಗ ವಿಚಕ್ಷಣ ದಳದ ಸಿಬ್ಬಂದಿಯು ಗಡಿ ಪ್ರದೇಶಕ್ಕೆ ತೆರಳುತ್ತಿದ್ದರು. ಇದೇ ರೀತಿ ಮೇ ತಿಂಗಳ ಮೊದಲ ವಾರದಲ್ಲಿ ಗಡಿಗೆ ತೆರಳಿದ ಸಂದರ್ಭದಲ್ಲಿ ಎರಡು ಸೇನಾಪಡೆಗಳ ಯೋಧರು ಮುಖಾಮುಖಿಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಸಂಘರ್ಷಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.
ಗಡಿಯಲ್ಲಿ ಸೇನಾ ಪ್ರಮಾಣ ತಗ್ಗಿಸದ ಚೀನಾ:
ಗಲ್ವಾನ್ ಕಣಿವೆಯ ಗಸ್ತು-ರಹಿತ ಪ್ರದೇಶದಲ್ಲೇ ಇಂದಿಗೂ ಚೀನಾ ತನ್ನ ಸೈನಿಕರ ನೆಲೆಗಳನ್ನು ಸ್ಥಾಪಿಸಿಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ಸಂಧಾನ ಮಾತುಕತೆ ನಂತರದಲ್ಲೂ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಅನುಮಾನದ ಮೇಲೆ ಭಾರತೀಯ ಸೇನಾಪಡೆ ಕೂಡಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಗಡಿಯಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಲಾಗಿದೆ.












Click it and Unblock the Notifications