ಕಿಸಾನ್ ಮಹಾಪಂಚಾಯತ್: ಹರಿಯಾಣದಲ್ಲಿ ರೈತರ ಪ್ರತಿಭಟನಾ ಮೆರವಣಿಗೆ ಸುತ್ತಲಿನ ಸುದ್ದಿ
ನವದೆಹಲಿ, ಸೆಪ್ಟೆಂಬರ್ 7: ಹರಿಯಾಣ ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ಈ ಹಿಂದೆ ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಸಂಘರ್ಷ ನಡೆಯುತ್ತಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ ರಾಷ್ಟ್ರ ರಾಜಧಾನಿ ನವದೆಹಲಿ ಮೂರು ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಕಳೆದ ಆಗಸ್ಟ್ 28ರ ಲಾಠಿ ಚಾರ್ಜ್ ಅನ್ನು ವಿರೋಧಿಸಿ ಹರಿಯಾಣದ ಕರ್ನಾಲ್ನಲ್ಲಿರುವ ಧಾನ್ಯ ಮಾರುಕಟ್ಟೆಯಿಂದ ಘೇರಾವ್ ಜಿಲ್ಲಾ ಕಚೇರಿಗೆ ಮೆರವಣಿಗೆ ಆರಂಭಿಸಿದ್ದಾರೆ. ಈ ಮಾರ್ಗಮಧ್ಯೆದಲ್ಲಿ ರೈತರನ್ನು ತಡೆ ಹಿಡಿಯುವ ಪ್ರಯತ್ನವೂ ನಡೆದಿದೆ. ರೈತರ ಪ್ರತಿಭಟನೆ ಮತ್ತು ಪೊಲೀಸರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದಿನ ಬೆಳವಣಿಗೆಗಳ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಹರಿಯಾಣದಲ್ಲಿ ಪ್ರತಿಭಟನಾನಿರತ 'ರೈತರ ತಲೆ ಒಡಿಯಿರಿ' ಎಂದ ಅಧಿಕಾರಿ ವಿರುದ್ಧ ಕ್ರಮ
ಹರಿಯಾಣದ ರೈತರ ಹೋರಾಟದ ಪ್ರಮುಖಾಂಶಗಳನ್ನು ಓದಿ
* ಹರಿಯಾಣದಲ್ಲಿ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ 11 ರೈತ ಮುಖಂಡರು ಮತ್ತು ಜಿಲ್ಲಾ ಅಧಿಕಾರಿಗಳ ನಡುವೆ ನಡೆಸಿದ ಮಾತುಕತೆ ವಿಫಲವಾಗಿದೆ. ರಾಕೇಶ್ ಟಿಕೈಟ್ ಮತ್ತು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸೇರಿದಂತೆ ಹಲವು ಮುಖಂಡರು ಈ ಸಭೆಯಲ್ಲಿ ಹಾಜರಿದ್ದರು. ರೈತರ ಪ್ರತಿಭಟನಾ ಮೆರವಣಿಗೆ ಬಗ್ಗೆ ಯಾವುದೇ ರೀತಿ ಅನುಮತಿ ಕೇಳುವ ಪ್ರಶ್ನೆಯೇ ಇಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
* ಹರಿಯಾಣ ಸರ್ಕಾರವು ಈ ಮೆರವಣಿಗೆಗೆ ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಹೇಳಿದ್ದು, 40ಕ್ಕೂ ಹೆಚ್ಚು ಕಂಪನಿಯ ಪೊಲೀಸ್ ಸಿಬ್ಬಂದಿ ಮತ್ತು ಇತರ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಮತ್ತು ಎಸ್ಎಂಎಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಬ್ಯಾರಿಕೇಟ್ ಹಾಕಲಾಗಿದೆ. ಭದ್ರತಾ ದೃಷ್ಟಿಯಿಂದ ಕ್ಯಾಮರಾಗಳ ಜೊತೆಗೆ ಡ್ರೋನ್ ಕ್ಯಾಮರಾವನ್ನು ಬಳಸಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
* ಹರಿಯಾಣದಲ್ಲಿ ಪೊಲೀಸರು ನಡೆಸಿದ ಲಾಠಿಪ್ರಹಾರದಿಂದ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟ ರೈತ ಸುಶೀಲ್ ಕೈಜ್ಲಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದಿನ ಕಿಸಾನ್ ಪಂಚಾಯತ್ ನಡೆಸಲಾಗುತ್ತಿದೆ ಎಂದು ಭಾರತೀಯ ಕಿನಾಸ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.
* ರೈತರು ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ರೈತರಿಗೆ ಕರೆ ನೀಡಿದ್ದಾರೆ. ನಿಮ್ಮ ಶಿಸ್ತನ್ನು ತಪ್ಪಿಸುವುದೇ ಈ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ರೈತರನ್ನು ಎಚ್ಚರಿಸಿದರು. ಚಳವಳಿಯನ್ನು ಒಡೆಯುವುದೇ ಸರ್ಕಾರದ ಉದ್ದೇಶವಾಗಿದ್ದು, ಅದನ್ನು ಸಾಕಾರಗೊಳಿಸದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
* 40 ಪ್ರಮುಖ ರೈತ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಹರಿಯಾಣದಲ್ಲಿ ರೈತರ ಮೇಲೆ ಲಾಠಿಪ್ರಹಾರ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದೆ. ರೈತರ ಮೇಲೆ ಕ್ರೌರ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ರೈತರ ತಲೆಗಳನ್ನು ಒಡೆಯಿರಿ ಎಂದು ಆಯುಷ್ ಸಿನ್ಹಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
* "ಆಯುಷ್ ಸಿನ್ಹಾ ಬಳಸಿದ ಪದಗಳು ಸರಿಯಾಗಿಲ್ಲ, ಆದರೆ ಕಟ್ಟುನಿಟ್ಟಾಗಿ ಭದ್ರತೆಯನ್ನು ಕಾಯ್ದುಕೊಳ್ಳಬೇಕಿತ್ತು," ಎಂದು ಖಟ್ಟರ್ ಹೇಳಿದ್ದರು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಈ ಹಿಂದೆ ಸಿನ್ಹಾ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
* ದೇಶದ ಯಾವ ಕಾನೂನು ಒಬ್ಬ ವ್ಯಕ್ತಿಯ ತಲೆಯನ್ನು ಒಡೆಯಬೇಕು ಎಂದು ಹೇಳುತ್ತದೆ, ರೈತರು ಕೇಂದ್ರ ಸರ್ಕಾರವನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕಿದೆ, ಎಂದು ಯೋಗೇಂದ್ರ ಯಾದವ್ ಹೇಳಿಕೆ ನೀಡಿದ್ದರು. ರೈತರ ತಲೆಯನ್ನು ಒಡೆದು ಹಾಕಿರಿ ಎಂದ ಅಧಿಕಾರಿ ಆಯುಷ್ ಸಿನ್ಹಾರನ್ನು ಕಳೆದ ವಾರವಷ್ಟೇ ಮಾನವ ಸಂಪನ್ಮೂಲ ಮಾಹಿತಿ ಇಲಾಖೆಗೆ ವರ್ಗಾಯಿಸಲಾಗಿತ್ತು.
* ಹರಿಯಾಣದಲ್ಲಿ ರೈತರ ಮೇಲೆ ನಡೆಸಿದ ಹಿಂಸಾಚಾರವನ್ನು ಖಂಡಿಸಿ ಭಾನುವಾರ ಮಧ್ಯಾಹ್ನ ಎರಡು ಗಂಟೆವರೆಗೂ ಜಲಂಧರ್ ಮತ್ತು ದೆಹಲಿಯ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು. ಇದರ ಜೊತೆ ಜಲಂಧರ್ ಪಿಎಪಿ ಚೌಕ್ ಪ್ರದೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸಿದ್ದು, ಇದೇ ಅವಧಿಯಲ್ಲಿ ಅಮೃತಸರ್ ಮತ್ತು ಲೂಧಿಯಾನ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ನೆರೆಯ ಪಂಜಾಬ್ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿಗಳನ್ನು ಎರಡು ಗಂಟೆಯ ಅವಧಿ ಬಂದ್ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಜೋಗಿಂದರ್ ಉಗ್ರಾಹನ್ ತಿಳಿಸಿದ್ದಾರೆ.
ರೈತರ ಮೇಲಿನ ಲಾಠಿಚಾರ್ಜ್ ಬಳಿಕ ಚಿತ್ರಣ ಹೇಗಿತ್ತು?
ಕಳೆದ ಶನಿವಾರವಷ್ಟೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಮುಖ್ಯಸ್ಥ ಓಂಪ್ರಕಾಶ್ ಧಂಕಾರ್ ಮತ್ತು ಹಿರಿಯ ಮುಖಂಡರು ಭಾಗಿಯಾದ ಸಭೆಗೆ ರೈತರು ವಿರೋಧ ವ್ಯಕ್ತಪಡಿಸಿದರು. ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ರೈತರ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ರೈತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿಯಂತ್ರಿಸಲು ಅತ್ಯಂತ ಕಡಿಮೆ ಪ್ರಮಾಣದ ಭದ್ರತಾ ಪಡೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು ಎಂದು ಕರ್ನಾಲ್ ಪೊಲೀಸ್ ಐಜಿ ಮಮತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಘಟನೆ ನಂತರ ಆ ಪ್ರದೇಶದಲ್ಲಿನ ಚಿತ್ರಣ ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ರೈತರ ಬಟ್ಟೆಗಳಿಗೆ ನೆತ್ತರು ಅಂಟಿಕೊಂಡಿದ್ದರೆ, ಹಲವು ಬ್ಯಾಂಡೆಜ್ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಗಂಭೀರವಾಗಿ ಗಾಯಗೊಂಡಿರುವುದರ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈತರು ಹಾಗೂ ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಯಾವುದೇ ರೀತಿ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ದೂಷಿಸಲಾಗುತ್ತಿದೆ.
ರೈತರು ನಿಯಮ ಉಲ್ಲಂಘಿಸಿದರೆ ತಲೆಗಳನ್ನೇ ಒಡೆಯಿರಿ
ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ, "ಬ್ಯಾರಿಕೇಡ್ ಹಾಕಿರುವ ಪ್ರದೇಶದಿಂದ ಒಬ್ಬರೇ ಒಬ್ಬ ಪ್ರತಿಭಟನಾನಿರತ ರೈತರು ಒಳಗೆ ಬರುವಂತಿಲ್ಲ. ಇದು ತುಂಬಾ ಸರಳ ಮತ್ತು ಸ್ಪಷ್ಟವಾದ ಸಂದೇಶವಾಗಿದೆ. ಅಲ್ಲಿಗೆ ತಲುಪಲು ಯಾರೊಬ್ಬರಿಗೂ ಅನುಮತಿ ಅಥವಾ ಅವಕಾಶ ನೀಡಬಾರದು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಗಡಿಯನ್ನು ದಾಟಿ ಪ್ರವೇಶಿಸಿದರೆ ನಿಮ್ಮ ಲಾಠಿಗಳನ್ನು ಕೈಗೆತ್ತಿಕೊಳ್ಳಿ ಹಾಗೂ ಅವರಿಗೆ ಬಲವಾಗಿ ಹೊಡೆಯಿರಿ. ಇದು ಬಹಳ ಸ್ಪಷ್ಟವಾಗಿದ್ದು, ಯಾವುದೇ ನಿರ್ದೇಶನಕ್ಕಾಗಿ ಎದುರು ನೋಡುವ ಅಗತ್ಯವಿಲ್ಲ. ಅವರ ಮೇಲೆ ಬಲವಾಗಿ ಹೊಡೆಯಿರಿ. ಒಂದು ವೇಳೆ ನಾನು ಇಲ್ಲಿ ಪ್ರತಿಭಟನಾನಿರತರನ್ನು ನೋಡಿದರೆ, ಅವರ ತಲೆಯನ್ನು ಒಡೆದುಕೊಂಡಿರಬೇಕು. ಅವರ ತಲೆಯನ್ನು ಒಡೆಯುವಷ್ಟು ಬಲವಾಗಿ ನೀವು ಹೊಡೆಯಬೇಕು," ಎಂದು ಸಿನ್ಹಾ ಹೇಳಿಕೆ ನೀಡಿದರೆ ಪೊಲೀಸ್ ಸಿಬ್ಬಂದಿ ಅದಕ್ಕೆ ಸರಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಹೋರಾಟ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.