ಬಿಳಿ ಯೂನಿಫಾರ್ಮ್ ತುಂಬ ರಕ್ತ, ರಕ್ತ: ಆ ಮಕ್ಕಳ ಸಾವಿಗೆ ಹೊಣೆ ಯಾರು?
ಶುಭ್ರ ಬಿಳಿ ಬಣ್ಣದ ಯೂನಿಫಾರ್ಮ್ ತೊಟ್ಟು, ಹೊಸದೇನನನ್ನೋ ಕಲಿಯುವ ತವಕದಲ್ಲಿ ಹೊರಟಿದ್ದ ಮಕ್ಕಳು. ಬಸ್ಸಿನಲ್ಲಿ ಕೂತು ಓರಗೆಯ ಮಕ್ಕಳೊಂದಿಗೆ ಹರಟುತ್ತ, ನಗುತ್ತ ಇದ್ದ ಅವರೆಲ್ಲರ ಮುದ್ದು ಧ್ವನಿ ಇದ್ದಕ್ಕಿದ್ದಂತೆ ಚೀರಾಟವಾಗಿ ಬದಲಾಗಿತ್ತು. ಶ್ವೇತ ವರ್ಣದ ಯೂನಿಫಾರ್ಮ್ ತುಂಬ ರಕ್ತ, ರಕ್ತ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅವರಲ್ಲಿ 13 ಮಕ್ಕಳು ಇನ್ನೆಂದಿಗೂ ಮಾತನಾಡಲಾಗದ, ನಗಲಾಗದ ಸ್ಥಿತಿ ತಲುಪಿದ್ದರು! ಹೌದು, ಪುಟ್ಟ ಮಕ್ಕಳ ತಲೆ ಸವರಿ, ಮುದ್ದುಗರೆದು ಶಾಲೆಗೆ ಕಳಿಸಿದ್ದ ಅಪ್ಪ-ಅಮ್ಮಂದಿರಿಗೆ ಅವರು ಮತ್ತೆ ಸಿಕ್ಕಿದ್ದು ಕಳೇಬರವಾಗಿ!
ಕಿವಿಯಲ್ಲಿ ಈಯರ್ ಫೋನ್ ಸಿಕ್ಕಿಸಿಕೊಂಡು ಡ್ರೈವಿಂಗ್ ಮಾಡುತ್ತಿದ್ದ ಬೇಜವಾಬ್ದಾರಿ ಚಾಲಕನಿಗೆ ರೈಲ್ವೇ ಕ್ರಾಸಿಂಗ್ ಬಳಿ ಎಚ್ಚರಿಕೆಯಿಂದ ಹೋಗಬೇಕೆನ್ನುವ ಪರಿಜ್ಞಾನವೂ ಇರುವುದಿಲ್ಲವೇ? ಇಂಥವರು ಮಾಡುವ ಒಂದು ಕ್ಷಣದ ತಪ್ಪಿಗೆ ಬಲಿಯಾಗುವ ಮುಗ್ಧ ಜೀವಕ್ಕೆ ಬೆಲೆಯೇ ಇಲ್ಲವೇ? ಮಕ್ಕಳ ನೆನಪಲ್ಲಿ ಜೀವನಪರ್ಯಂತ ಕೊರಗುವ ಪಾಲಕರ ಕಣ್ಣೀರಿಗೂ ಬೆಲೆ ಇಲ್ಲವೇ?

ಈಯರ್ ಫೋನ್ ಧರಿಸಿದ್ದ ಡ್ರೈವರ್
ಸುಮಾರು 20-30 ಮಕ್ಕಳನ್ನು ಹೊತ್ತಿದ್ದ ಬಸ್ಸಿನ ಚಾಲಕನಿಗೆ ತನ್ನ ಒಂದು ಕ್ಷಣದ ಮೈಮರೆವು ಅಷ್ಟೂ ಜನರ ಪ್ರಾಣ ತೆಗೆದೀತು ಎಂಬ ಅಲ್ಪಸ್ವಲ್ಪ ಯೋಚನೆಯಾದರೂ ಇದ್ದಿದ್ದರೆ ಹೀಗೆ ಕಿವಿಗೆ ಈಯರ್ ಫೋನ್ ಸಿಕ್ಕಿಸಿಕೊಂಡು ರೈಲ್ವೇ ಹಳಿ ದಾಟುವ ಪ್ರಯತ್ನ ಮಾಡುತ್ತಿರಲಿಲ್ಲ. ಸರ್ಕಾರ ಆತನ ವಿರುದ್ಧ ತನಿಖೆ ನಡೆಸಬಹುದು, ಆತ ಶಿಕ್ಷೆ ಅನುಭವಿಸಬಹುದು, ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ(ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಮೃತ ಮಕ್ಕಳ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದೆ) ನೀಡಬಹುದು. ಆದರೆ ಈ ಎಲ್ಲವೂ ಆ ಮಕ್ಕಳ ಪ್ರಾಣಕ್ಕೆ ಕಟ್ಟುವ ಬೆಲೆಯೇ? ಅಥವಾ ಈ ಎಲ್ಲವುಗಳಿಂದ ದುಃಖತಪ್ತ ತಂದೆತಾಯಿಗಳನ್ನು ಸಂತೈಸುವುದಕ್ಕೆ ಸಾಧ್ಯವೇ?

ಆ ಘಟನೆ ಇನ್ನೂ ಮರೆತಿರಲಿಲ್ಲ!
ಏಪ್ರಿಲ್ 9 ರಂದು ಹಿಮಾಚಲ ಪ್ರದೇಶ ಕಾಂಗ್ರಾ ಎಂಬಲ್ಲಿ ಸುಮಾರು ಮೂವತ್ತು ಜನ ವಿದ್ಯಾರ್ಥಿಗಳಿದ್ದ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮ 26 ನ ಮೃತರಾಗಿದ್ದರು. ಮಕ್ಕಳನ್ನು ಹೊತ್ತಿದ್ದ ವಾಹನವನ್ನು ನಿಧಾನವಾಗಿ ಓಡಿಸಬೇಕು ಎಂಬ ಪರಿಜ್ಞಾನವಿಲ್ಲದೆ ಬೇಕಾಬಿಟ್ಟಿ ಓಡಿಸಿದ್ದರಿಂದಲೇ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿತ್ತು. ಆ ದುರ್ಘಟನೆ ಇನ್ನೂ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೆ ಇಂದು ಸಹ ಅಂಥದೇ ದುರಂತ ನಡೆದಿದೆ.
ತೆಲಂಗಾಣದಲ್ಲಿ ಜುಲೈ 24, 2014 ರಲ್ಲಿ ನಾಂದೇಡ್ ಪ್ಯಾಸೆಂಜರ್ ಟ್ರೈನಿಗೆ ಇಲ್ಲಿನ ಕಾಕಟಿಯಾ ಟೆಕ್ನೋ ಸ್ಕೂಲ್ ಬಸ್ಸು ಡಿಕ್ಕಿ ಹೊಡೆದ ಪರಿಣಾಮ 25 ವಿದ್ಯಾರ್ಥಿಗಳು ಮೃತರಾಗಿದ್ದರು.
|
ಮಕ್ಕಳ ಸಾವಿಗಿಂದ ದುರಂತ ಬೇರೆ ಇಲ್ಲ
ಈ ಜಗತ್ತಿನಲ್ಲಿ ಮುಗ್ಧ ಮಕ್ಕಳ ಸಾವಿಗಿಂದ ದುರಂತ ಬೇರೆ ಇಲ್ಲ. ಅವರನ್ನೆಂದಿಗೂ ಮತ್ತೆ ಹಿಂಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ ಸಬಾ ಎಂಬುವವರು. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ದುರಂತದ ಕುರಿತು ಸಾಕಷ್ಟು ಜನ ಪ್ರತಿಕ್ರಿಯೆ ನೀಡಿ, ಸಂತಾಪವನ್ನೂ, ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಮಕ್ಕಳ ರಕ್ತಸಿಕ್ತ ಚಿತ್ರವನ್ನು ನೋಡಿದರಂತೂ ಕರುಳು ಕಿವುಚಿದಂತಾಗುತ್ತದೆ.
|
ಇದು ಅಪಘಾತವಲ್ಲ, ನಿರ್ಲಕ್ಷ್ಯ
ಖುಷಿನಗರದಲ್ಲಿ ಸಂಭವಿಸಿದ್ದು ಅಪಘಾತವಲ್ಲ. ಅದು ನಿರ್ಲಕ್ಷ್ಯದಿಂದ ಸಂಭವಿಸಿದ ಘಟನೆ. ಭದ್ರತಾ ವೈಫಲ್ಯವೂ ಇದಕ್ಕೆ ಕಾರಣ ಎಂದಿದ್ದಾರೆ ಜೂಹಿ ಸಿಂಗ್. ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಟ್ವಿಟ್ಟರ್ ನಲ್ಲಿ ಹಲವರು ಸಾಂತ್ವನ ನೀಡಿದ್ದಾರೆ.
|
ಯೋಗಿ ಆದಿತ್ಯನಾಥ್ ಭೇಟಿ
ಘಟನೆಯಾದ ಸ್ಥಳಕ್ಕೆ ಆಗಮಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಂತರ ಗಾಯಗೊಂಡ ಮಕ್ಕಳನ್ನು ದಾಖಲಿಸಿರುವ ಇಲ್ಲಿನ ಬಿಆರ್ ಡಿ ಆಸ್ಪತ್ರೆಗೂ ಭೇಟಿ ನೀಡಿದ್ದರು. ಮೃತರೆಲ್ಲರೂ ಇಲ್ಲಿನ ಡಿವೈನ್ ಪಬ್ಲಿಕ್ ಸ್ಕೂಲಿನ ಮಕ್ಕಳು ಎನ್ನಲಾಗಿದೆ. ಈಗಾಗಲೇ ಮೃತ ಮಕ್ಕಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.












Click it and Unblock the Notifications