Love Story: ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿಗೆ ಮರಣ ದಂಡನೆ
ಆಕೆ ನೋಡಲು ಸುಂದರಿ, ಅವನಿಗೆ ಅವಳೇ ಪ್ರಪಂಚ, ಅವಳಿಗೂ ಅವನಂದ್ರೆ ಪ್ರೀತಿ. ಆದರೆ ಆಕೆಗೆ ಅವನ ಪ್ರೀತಿ ಸಾಕಾಗಿತ್ತು, ಮನೆಯಲ್ಲಿ ತೋರಿಸಿದ ಹುಡುಗನ ಮದುವೆಯಾಗುವ ನಿರ್ಧಾರ ಮಾಡಿದ್ದಳು. ಆದರೆ ಅವನಿಗೆ ಆಕೆಯನ್ನು ಬಿಡಲು ಮನಸ್ಸಿಲ್ಲ, ಅವಳೇ ತನ್ನ ಪ್ರಪಂಚ ಅಂದುಕೊಂಡಿದ್ದವನನ್ನು ಆಕೆ ಉಪಾಯ ಮಾಡಿ ಪ್ರಪಂಚದಿಂದಲೇ ದೂರವಾಗಿಸಿದಳು. 2 ವರ್ಷದ ಪ್ರೀತಿಗೆ ಆಕೆ ವಿಷವಿಕ್ಕಿದ್ದಳು, ಪ್ರೀತಿಸಿದವನ ಕೊಂದ ಪ್ರಿಯತಮೆಗೆ ಕಾನೂನು ಮರಣ ದಂಡನೆ ಎನ್ನುವ ಶಿಕ್ಷೆ ಕೊಟ್ಟಿದ್ದು ಈ ಪ್ರಕರಣ ಇದೀಗ ದೇಶದ ಗಮನ ಸೆಳೆಯುತ್ತಿದೆ.
ಕೇರಳದ 24 ವರ್ಷದ ಮಹಿಳೆ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪ ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಇಬ್ಬರನ್ನು ದೋಷಿ ಎಂದು ತೀರ್ಪು ನೀಡಿರುವ ಸ್ಥಳೀಯ ನ್ಯಾಯಾಲವು ಗ್ರೀಷ್ಮಾಗೆ ಮರಣ ದಂಡನೆ ವಿಧಿಸಿ ಆದೇಶ ನೀಡಿದೆ. 2 ವರ್ಷದ ಹಿಂದೆ ಗ್ರೀಷ್ಮಾ ತನ್ನ ಪ್ರಿಯಕರ 23 ವರ್ಷದ ಶರೋನ್ ರಾಜ್ಗೆ ವಿಷವುಣಿಸಿದ್ದರು.

ಆರೋಪಿ ಗ್ರೀಷ್ಮಾ ಶೈಕ್ಷಣಿಕ ಸಾಧನೆ, ಆಕೆಯ ಅಪರಾಧ ಇತಿಹಾಸದ ಕೊರತೆ ಮತ್ತು ಆಕೆ ಹೆತ್ತವರಿಗೆ ಒಬ್ಬಳೇ ಮಗಳು ಎನ್ನುವ ಅಂಶವನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರಲಾಗಿತ್ತು. ಆದರೆ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲವು, ಅಪರಾಧದ ತೀವ್ರತೆಗಿಂತ ಆರೋಪಿಯ ವಯಸ್ಸನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಂದರ್ಭಿಕ, ಡಿಜಿಟಲ್ ಮತ್ತು ವೈಜ್ಞಾನಿಕ ಸಾಕ್ಷಿಗಳನ್ನು ನೀಡಿದೆ ಎಂದು ನ್ಯಾಯಾಲಯ ಹೇಳಿದೆ. ಕೇರಳದಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಅತ್ಯಂತ ಕಿರಿಯ ಮಹಿಳೆ ಗ್ರೀಷ್ಮಾ.
ಗ್ರೀಷ್ಮಾಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದಕ್ಕೆ ವಿಶೇಷ ಸಾರ್ವಜನಿಕ ಅಭಿಯೋಜಕ ವಿ.ಎಸ್. ವಿನೀತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯವು ತಾವು ಕೊಟ್ಟಿರುವ ಸಾಕ್ಷಿಯನ್ನು ಸ್ವೀಕರಿಸುತ್ತದೆ ಎಂದು ವಿಶ್ವಾಸವಿತ್ತು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದ್ದು ಮರಣದಂಡನೆ ವಿಧಿಸಬೇಕು ಎಂದು ನಾನು ವಾದಿಸಿದ್ದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಹೇಳಿದ್ದಾರೆ.
ಬೇರೆ ಮದುವೆಯಾಗಲು ಪ್ರಿಯಕರನಿಗೆ ವಿಷ
ಗ್ರೀಷ್ಮಾ ಮತ್ತು ಶರೋನ್ ರಾಜ್ ಎರಡು ವರ್ಷ ಪರಸ್ಪರ ಪ್ರೀತಿಸಿದ್ದರು. ಆದರೆ ಗ್ರೀಷ್ಮಾಗೆ ತಮಿಳುನಾಡಿನ ಸೇನಾಧಿಕಾರಿಯೊಬ್ಬರ ಜೊತೆ ಮದುವೆ ನಿಶ್ಚಯವಾಗಿದ್ದರಿಂದ ಆಕೆ ರಾಜ್ ಜೊತೆ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದರು. ಆದರೆ ಪ್ರಿಯಕರ ಇದಕ್ಕೆ ಒಪ್ಪದೇ ಇದ್ದಾಗ ಕೊಲೆಗೆ ಸಂಚು ರೂಪಿಸಿದ್ದರು.
ಗ್ರೀಷ್ಮಾ ಶರೋನ್ ರಾಜ್ಗೆ ಕಳೆನಾಶಕವನ್ನು ಆಯುರ್ವೇದ ಟಾನಿಕ್ಗೆ ನೀಡಿ ಸೇವಿಸುವಂತೆ ಮಾಡಿದ್ದಳು, ಅದಾದ 11 ದಿನಗಳ ನಂತರ ರಾಜ್ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಗ್ರೀಷ್ಮಾ ಒಂದು ಬಾರಿ ಹಣ್ಣಿನ ರಸದಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ರಾಜ್ಗೆ ವಿಷ ನೀಡಲು ಪ್ರಯತ್ನಿಸಿದ್ದರು, ಆದರೆ ಅದು ಕಹಿ ಇದ್ದ ಕಾರಣ ರಾಜ್ ಅದನ್ನು ಕುಡಿಯಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದಾರೆ.
ರಾಜ್ ತಿರುವನಂತಪುರಂ ಜಿಲ್ಲೆಯ ಪರಸ್ಸಲ ಮೂಲದವರಾಗಿದ್ದು ಬಿಎಸ್ಸಿ ರೇಡಿಯಾಲಜಿ ಓದುತ್ತಿದ್ದರು. ಗ್ರೀಷ್ಮಾ ಜೊತೆಗಿನ ಪ್ರೀತಿ ಆತನ ಜೀವಕ್ಕೆ ಮಾರಕವಾಯಿತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರೀಷ್ಮಾ ತಪ್ಪಿತಸ್ಥೆಯೆಂದು ಕೋರ್ಟ್ ಹೇಳಿದ್ದು, ಸಾಕ್ಷಿ ನಾಶ ಆರೋಪದಲ್ಲಿ ಆಕೆಯ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ತಪ್ಪಿತಸ್ಥನೆಂದು ತೀರ್ಪುಕೊಟ್ಟಿದೆ. ಗ್ರೀಷ್ಮಾ ತಾಯಿ ಮೇಲೆ ಕೂಡ ಆರೋಪ ಇತ್ತಾದರೂ ಸಾಕ್ಷಿಗಳ ಕೊರತೆಯಿಂದ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.












Click it and Unblock the Notifications