ಇಂಡಿಯಾ ಟುಡೆ ಸಮೀಕ್ಷೆ: ಕೇರಳದಲ್ಲಿ ಅರಳುತ್ತಿದೆ ಕಮಲ, ಆದರೆ ಪ್ರಧಾನಿ ರೇಸಲ್ಲಿ ಈಗಲೂ ಮುಂದೆ ರಾಹುಲ
Recommended Video
ನವದೆಹಲಿ, ಜನವರಿ 12: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದ ದಕ್ಷಿಣ ಭಾರತದಲ್ಲಿನ ಎಡಪಕ್ಷದ ಆಡಳಿತವಿರುವ ರಾಜ್ಯವಾದ ಕೇರಳದಲ್ಲಿ ಕೆಲವೇ ತಿಂಗಳಿನಲ್ಲಿ ಬಿಜೆಪಿಯನ್ನು ಪ್ರಭಾವಶಾಲಿ ಪಕ್ಷವಾಗಿ ಮುಂಚೂಣಿಗೆ ತರಲು ನೆರವಾಗಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಹಿಂದೂ ಸಾಂಪ್ರದಾಯಿಕ ಆಚರಣೆಗಳ ಸುತ್ತ ವಿವಾದ ಗಿರಕಿ ಹೊಡೆಯುತ್ತಿದೆ. ಇದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ.
2016ರಲ್ಲಿ ಕೇರಳ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 140 ಸೀಟುಗಳ ಪೈಕಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಆದರೆ, ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎನ್ನುವುದು ಸಮೀಕ್ಷೆಗಳ ಅಭಿಪ್ರಾಯ.
ಎಡಪಕ್ಷ, ಕಾಂಗ್ರೆಸ್ ಪ್ರಭಾವಳಿಯ ನಡುವೆ ಬಿಜೆಪಿ ದಕ್ಷಿಣ ಭಾರತದ ಮತ್ತೊಂದು ರಾಜ್ಯದಲ್ಲಿ ತನ್ನ ಪ್ರಭಾವ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಕೇರಳದ ಶಬರಿಮಲೆ ವಿವಾದ ಅದಕ್ಕೆ ಪ್ರಮುಖ ಅಸ್ತ್ರವಾಗಿ ದೊರೆತಿದೆ.
ಕಟ್ಟಾ ಎಡಪಂಥೀಯ ನಿಲುವನ್ನು ಹೊಂದಿರುವವರಲ್ಲಿಯೂ ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರದ ನಡೆ ಕೆರಳಿಸಿದೆ. ಸರ್ಕಾರ ವಿರುದ್ಧ ಧಾರ್ಮಿಕ ನೆಲೆಗಟ್ಟಿನಲ್ಲಿ ಸೃಷ್ಟಿಯಾಗಿರುವ ಭಾವನಾತ್ಮಕ ಆಕ್ರೋಶ ಹಿಂದೂ ಸಮುದಾಯದ ಕೋಪವಾಗಿ ಪ್ರಕಟವಾಗುತ್ತಿದೆ. ಇದು ರಾಜಕೀಯವಾಗಿಯೂ ಭಾರಿ ಚಟುವಟಿಕೆಗಳಿಗೆ ಅವಕಾಶ ನೀಡಿದೆ.
ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು?
ಕೇರಳದಲ್ಲಿ ವಿವಾದ ಭುಗಿಲೆದ್ದ ಬಳಿಕ ಇಂಡಿಯಾ ಟುಡೆ ವಾಹಿನಿಗಾಗಿ ಆಕ್ಸಿಸ್-ಮೈ-ಇಂಡಿಯಾ ನಡೆಸಿದ ಸಮೀಕ್ಷೆ ಕುತೂಹಲಕಾರಿ ಸಂಗತಿಗಳನ್ನು ಹೊರಹಾಕಿದೆ. ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ದೂರವಾಣಿ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 2,078 ಮಂದಿ ಭಾಗವಹಿಸಿದ್ದಾರೆ.
ರಾಜಕೀಯವಾಗಿ ಬೆಳೆಯುತ್ತಿದೆ ಬಿಜೆಪಿ
ಶಬರಿಮಲೆ ದೇವಸ್ಥಾನದೊಳಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಕೇರಳದೆಲ್ಲೆಡೆ ವ್ಯಾಪಕ ಪ್ರತಿಭಟನೆಗಳು, ಗಲಾಟೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಎಡಪಂಥೀಯ ವಿಚಾರಧಾರೆಯುಳ್ಳ ಪಕ್ಷಗಳ ನಡುವೆ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೇಸರಿ ಪಕ್ಷ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮತೊಡಗಿದೆ. ರಾಜ್ಯದಲ್ಲಿ ಬಿಜೆಪಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಶೇ 45ರಷ್ಟು ಮಂದಿ ಅಭಿಪ್ರಾಯಪಟ್ಟದ್ದಾರೆ.
ಶಬರಿಮಲೆ ವಿವಾದದ ಕಾರಣಕ್ಕೆ ಬಿಜೆಪಿ ರಾಜಕೀಯ ಪಕ್ಷವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ. ಕೇರಳದಲ್ಲಿ ಅದು ತನ್ನ ಅಸ್ತಿತ್ವ ಕಂಡುಕೊಳ್ಳಲು ಅದು ಸಾಕಷ್ಟು ಕೆಲಸ ಮಾಡಿದೆ ಎಂಬುದನ್ನು ಶೇ 33ರಷ್ಟು ಮಂದಿ ನಿರಾಕರಿಸಿದ್ದಾರೆ.
'ಬ್ಯಾಡ್ ಸಿಎಂ' ಎಂದು ಗೂಗಲ್ ನಲ್ಲಿ ಟೈಪ್ ಮಾಡಿದ್ರೆ ಇವ್ರ ಹೆಸರಾ ಬರೋದು!
ಅಪವಿತ್ರ ಮತ್ತು ಲಿಂಗ ಸಮಾನತೆ
ಶಬರಿಮಲೆ ಅಯ್ಯಪ್ಪ ದೇವಸ್ಥಾನದೊಳಗೆ ವ್ಯಾಪಕ ವಿರೋಧ ಪ್ರತಿಭಟನೆಯ ನಡುವೆಯೂ ಮಹಿಳೆಯರು ಪ್ರವೇಶಿಸಿರುವುದು ದೇವಸ್ಥಾನವನ್ನು ಅಪವಿತ್ರಗೊಳಿಸಿದೆ ಎಂದು ಶೇ 42ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ 23 ಮಂದಿ ಇದು ಲಿಂಗ ಸಮಾನತೆಯ ಸಂಕೇತದ ನಡೆ ಎಂದು ಸಮರ್ಥಿಸಿಕೊಂಡಿದ್ದಾರೆ. ಶೇ 16ರಷ್ಟು ಮಂದಿ ಸುಪ್ರೀಂಕೋರ್ಟ್ ತೀರ್ಪನ್ನು ಎತ್ತಿಹಿಡಿಯುವುದರ ಪರವಾಗಿ ಒಲವು ತೋರಿಸಿದ್ದಾರೆ.
ಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನ
ಎಲ್ಡಿಎಫ್ ಜನಪ್ರಿಯತೆ ಕುಸಿತ
ಕೇರಳದಲ್ಲಿನ ಪಿಣರಾಯಿ ವಿಜಯನ್ ಸರ್ಕಾರದ ಜನಪ್ರಿಯತೆ ಇಳಿಕೆಯಾಗಿದೆ. ಅಕ್ಟೋಬರ್ ವೇಳೆ ನಡೆದ ಸಮೀಕ್ಷೆಯಲ್ಲಿ ಶೇ 42ರಷ್ಟು ಮಂದಿ ಪಿಣರಾಯಿ ಸರ್ಕಾರವನ್ನು ಬೆಂಬಲಿಸಿದ್ದರು. ಜನವರಿಯಲ್ಲಿ ಶೇ 39ರಷ್ಟು ಮಂದಿ ಮಾತ್ರ ಎಲ್ಡಿಎಫ್ ಸರ್ಕಾರವನ್ನು ಬೆಂಬಲಿಸಿದ್ದು, ಮೂರು ತಿಂಗಳಿನಲ್ಲಿ ಜನಪ್ರಿಯತೆಯಲ್ಲಿ ಕುಸಿತವಾಗಿದೆ.
ಈ ವಿವಾದ ವೈಯಕ್ತಿಕವಾಗಿಯೂ ಪಿಣರಾಯಿ ವಿಜಯನ್ ಅವರ ವರ್ಚಸ್ಸಿನ ಮೇಲೆ ಪರಿಣಾಮ ಬೀರಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಮೂರು ತಿಂಗಳ ಹಿಂದೆ ಶೇ 27ರಷ್ಟು ಮತ ಪಡೆದಿದ್ದ ಪಿಣರಾಯಿ, ಈ ಬಾರಿ ಶೇ 25ರಷ್ಟು ಜನರ ಮತ ಪಡೆದುಕೊಂಡಿದ್ದಾರೆ.
ಅಕ್ಟೋಬರ್ನಲ್ಲಿ ಶೇ 20ರಷ್ಟು ಜನರ ಒಲವು ಪಡೆದಿದ್ದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಊಮ್ಮನ್ ಚಾಂಡಿ ಅವರ ಪರ ಮತರಾದರರ ಒಲವು ಶೇ 2ರಷ್ಟು ಹೆಚ್ಚಾಗಿದ್ದು, ಶೇ 22ರಷ್ಟು ಮಂದಿ ಊಮ್ಮನ್ ಅವರ ಆಯ್ಕೆ ಬಯಸಿದ್ದಾರೆ.
ಆದರೆ, ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು ತನ್ನ ನಿಲವಿಗೆ ಬದ್ಧವಾಗಿ ವರ್ತಿಸಿದೆ ಎಂದು ಶೇ 58ರಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಕಳವಳಗಳು
ರಾಜ್ಯದಲ್ಲಿ ಹೆಚ್ಚು ಕಳವಳಕ್ಕೆ ಕಾರಣವಾಗಿರುವ ಸಮಸ್ಯೆಗಳಲ್ಲಿ ಉದ್ಯೋಗದ ಕೊರತೆ (ಶೇ 29) ಮುಂಚೂಣಿಯಲ್ಲಿದೆ. ಶೇ 22ರಷ್ಟು ಮಂದಿ ಭ್ರಷ್ಟಾಚಾರದ ಬಗ್ಗೆ ಅಸಾಮಧಾನಗೊಂಡಿದ್ದಾರೆ. ಶೇ 18ರಷ್ಟು ಮಂದಿ ರೈತರ ಸಮಸ್ಯೆಯೇ ಪ್ರಮುಖವಾಗಿದ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಅಥವಾ ರಾಹುಲ್ ಗಾಂಧಿ
ಪ್ರಧಾನಿ ಹುದ್ದೆಗೆ ಯಾರು ಅರ್ಹರು ಎಂಬ ಲೆಕ್ಕಾಚಾರದಲ್ಲಿ ಮಾತ್ರ ಈಗಲೂ ಕೇರಳಿಗರು ತಮ್ಮ ನಿಲುವು ಬದಲಿಸಿಲ್ಲ. ಶಬರಿಮಲೆ ವಿವಾದ ಸ್ಥಳೀಯವಾಗಿ ಬಿಜೆಪಿಗೆ ಲಾಭವಾದರೂ ಕೇರಳಿಗರಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕೀಯದಲ್ಲಿ ಬಿಜೆಪಿ ಪರವಾದ ಪ್ರೀತಿ ಮೂಡಿಸುವುದು ಸಾಧ್ಯವಾಗಿಲ್ಲ. ಅಕ್ಟೋಬರ್ಗೆ ಹೋಲಿಸಿದರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಒಲವು ಹೆಚ್ಚಾಗಿದೆ. ಶೇ 38ರಷ್ಟಿದ್ದ ರಾಹುಲ್ ಜನಪ್ರಿಯತೆ ಜನವರಿ ವೇಳೆಗೆ ಶೇ 41ಕ್ಕೆ ಏರಿದೆ.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕಳೆದ ಮೂರು ತಿಂಗಳಿನಲ್ಲಿ ಶೇ 31ರಿಂದ ಶೇ 30ಕ್ಕೆ ಇಳಿದಿದೆ.