ಕೇರಳ ನರಬಲಿ: ಒಂದೇ ದೇಹದ 56 ಅಂಗಗಳನ್ನು ಬೇಯಿಸಿ ತಿಂದರೇ ಆರೋಪಿಗಳು?
ತಿರುವನಂತಪುರಂ, ಅಕ್ಟೋಬರ್ 12: ಕೇರಳದ ಪತ್ತನಂತಿಟ್ಟದಲ್ಲಿ ನಡೆದ ನರಬಲಿ ಘಟನೆಗೆ ಸಂಬಂಧಿಸಿದ ವರದಿಗಳು ದೇಶವನ್ನೇ ಬೆಚ್ಚಿಬೀಳಿಸಿವೆ.
ದಿಢೀರನೇ ಶ್ರೀಮಂತರಾಗಲು ಕೇರಳ ದಂಪತಿ ನಡೆಸಿದ ನರಬಲಿಯಲ್ಲಿ ಇಬ್ಬರು ಮಹಿಳೆಯರು ಹತರಾಗಿದ್ದಾರೆ. ಮಹಿಳೆಯರನ್ನು ವಿವಸ್ತ್ರಗೊಳಿಸಿ ಹತ್ಯೆ ಮಾಡಿರುವ ಹಂತಕರು, ಅವರ ದೇಹದ ಅಂಗಗಳನ್ನೂ ಬೇಯಿಸಿ ತಿಂದಿರಬಹುದು ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ.
ಹತರಾದ ರೋಸಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಇದಕ್ಕೂ ಮೊದಲು ಅವರನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಮಹಿಳೆಯರ ಸ್ತನಗಳನ್ನು ಕತ್ತರಿಸಲಾಗಿದೆ. ಆ ಮೂಲಕ ಅವರ ದೇಹದಿಂದ ರಕ್ತ ಹರಿಯುವಂತೆ ಮಾಡಲಾಗಿದೆ. ಪದ್ಮಾ ಎಂಬುವವರ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿದೆ. ಮೂರು ಹೊಂಡಗಳಲ್ಲಿ ಸಂತ್ರಸ್ತರ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಯನ್ನು ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಈತ 'ವಿಕೃತ ಕಾಮಿ' ಎಂದು ಆರೋಪಿಸಲಾಗಿದ್ದು, 2020ರಲ್ಲಿ 75 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈಗ ಜಾಮೀನಿನ ಮೇಲೆ ಹೊರಗಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನಿಬ್ಬರು ಆರೋಪಿಗಳಾದ ಭಗವಲ್ ಸಿಂಗ್ ಹಾಗೂ ಲೈಲಾ ಎಂಬುವವರ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಲು ನರಬಲಿ ನಡೆಸುವಂತೆ ಶಫಿ ಸಲಹೆ ನೀಡಿದ್ದನು. ಆ ಹಿನ್ನೆಲೆಯಲ್ಲಿ ಮೊದಲು ರೋಸಲಿನ್ಳನ್ನು ಭಗವಲ್ ಮನೆಗೆ ಶಫಿ ಕರೆತಂದಿದ್ದನು. ಆಕೆಯ ದೇಹವನ್ನು ಕತ್ತರಿಸಿ, ರಕ್ತವನ್ನು ಮನೆಯಲ್ಲಿ ಚಿಮುಕಿಸಲಾಗಿತ್ತು. ಇದಾದ ಕೆಲ ತಿಂಗಳ ಬಳಿಕ ಪದ್ಮಾಳನ್ನು ಮನೆಗೆ ಕರೆತಂದ ಶಫಿ, ಆಕೆಯನ್ನೂ ಕತ್ತರಿಸಿ ಕೊಂದಿದ್ದನು. ನಂತರ ಮೂವರು ಆರೋಪಿಗಳು ಪದ್ಮಾ ಅವರ ದೇಹದ ಅಂಗಗಳನ್ನು ಬೇಯಿಸಿ ತಿಂದಿರಬಹುದು ಎಂದು ಶಂಕಿಸಲಾಗಿದೆ.
'ಸಂತ್ರಸ್ತರನ್ನು ಕೊಂದ ನಂತರ ಆರೋಪಿಗಳು ದೇಹದ ಅಂಗಗಳನ್ನು ತಿಂದಿರುವ ಸಾಧ್ಯತೆಯಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಇದು ಇನ್ನೂ ದೃಢಪಟ್ಟಿಲ್ಲ' ಎಂದು ನಾಗರಾಜು ಹೇಳಿದ್ದಾರೆ.
ಆರೋಪಿ ಭಗವಲ್ ಸಿಂಗ್, ಮಸಾಜ್ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಸದಸ್ಯನೆಂದು ವರದಿಯಾಗಿದೆ. ಆದರೆ, ಈ ವರದಿಯನ್ನು ಸಿಪಿಎಂ ನಿರಾಕರಿಸಿದೆ.
'ಭಗವಲ್ ನಮ್ಮೊಂದಿಗೆ ಕೆಲಸ ಮಾಡಿದ್ದಾನೆ. ಆದರೆ, ನಮ್ಮ ಪಕ್ಷದ ಸದಸ್ಯನಾಗಿರಲಿಲ್ಲ. ಆತ ಮೂಢನಂಬಿಕೆಗಳನ್ನು ನಂಬದ ಪ್ರಗತಿಪರ ವ್ಯಕ್ತಿಯಾಗಿದ್ದ. ಎರಡನೇ ಮದುವೆಯಾದ ನಂತರ ಧಾರ್ಮಿಕ ವ್ಯಕ್ತಿಯಾಗಿ ಬದಲಾಗಿದ್ದ. ಇದು ಆತನ ಪತ್ನಿಯ ಪ್ರಭಾವವಿರಬಹುದು' ಎಂದು ಪೋಲಿಸ್ ಅಧಿಕಾರಿ ಪಿ.ಆರ್. ಪ್ರದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.
ಜೂನ್ 6 ರಂದು ರೋಸಲಿನ್ ಹಾಗೂ ಸೆಪ್ಟೆಂಬರ್ 26ರಂದು ಪದ್ಮಾರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ಹತ್ಯೆಗಳು ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಶಫಿಯ ದೂರವಾಣಿ ಕರೆಗಳನ್ನು ಪರಿಶೀಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಶಫಿ ಬಿಟ್ಟು ಹೋಗಿದ್ದ ಕಾರಿನ ಸಹಾಯದಿಂದ ಆತನನ್ನು ಪತ್ತೆ ಹಚ್ಚಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಭಗವಲ್ ಸಿಂಗ್ ಹಾಗೂ ಆತನ ಪತ್ನಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ಆರೋಪಿ ಶಫಿ ವಿಕೃತ ಕಾಮಿ, ಮನೋರೋಗಿ ಹಾಗೂ ನರಹಂತಕನಾಗಿದ್ದಾನೆ. ಬಾಲಕನಿದ್ದಾಗಲೇ ಶಾಲೆ ತೊರೆದಿದ್ದ ಈತ ಹಲವು ಲೈಂಗಿಕ ವಿಕೃತಿಗಳಲ್ಲಿ ತೊಡಗಿಕೊಂಡಿದ್ದ ಹಿಂಸಾವಿನೋದಿ ಎಂದು ನಾಗರಾಜು ಹೇಳಿದ್ದಾರೆ.
ಹತ್ಯೆಯಾಗಿರುವ ರೋಸಲಿನ್ ಹಾಗೂ ಪದ್ಮಾ ಅವರು ಲಾಟರಿ ಟಿಕೆಟ್ಗಳನ್ನು ಮಾರುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಶಫಿ ಅವರನ್ನು ಸಂಪರ್ಕಿಸಿದ್ದ. ಆ ನಂತರ ಅವರನ್ನು ಅಪಹರಿಸಿ, ಭಗವಲ್ ಸಿಂಗ್ ಮನೆಗೆ ಕರೆದೊಯ್ದಿದ್ದ ಎಂದು ಹೇಳಲಾಗಿದೆ.