ಕೇರಳ ಜಲಪ್ರಳಯ: ಚಿತ್ರಗಳ ಜೊತೆ ಸಂಪೂರ್ಣ ಮಾಹಿತಿ
ಕೊಚ್ಚಿ, ಆಗಸ್ಟ್ 18: 'ದೇವರ ಸ್ವಂತ ರಾಜ್ಯ' ಕೇರಳದ ಮೇಲೆ ಯಾಕೋ ದೇವರಿಗೆ ಸಿಟ್ಟು ಬಂದಿದೆ. ಜಲ ಪ್ರಳಯಕ್ಕೆ ಸಿಕ್ಕು ಕೇರಳ ತತ್ತರಿಸಿ ಹೋಗಿದೆ. ಜೀವ ಜಲ ಎನಿಸಿಕೊಳ್ಳುವ ನೀರು ಏರಿ ಬಂದು ಜೀವ ತೆಗೆಯುತ್ತಿದೆ.
ರಣ ಭೀಕರ ಮಳೆಗೆ ಕೇರಳ ತತ್ತರಿಸಿ ಹೋಗಿದೆ. ಎತ್ತ ನೋಡಿದರೂ ನೀರು, ಈ ಭೀಕರ ಮಳೆ ಈಗಾಗಲೇ 324ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮನೆ, ಜಾನುವಾರುಗಳನ್ನು ಕಳೆದುಕೊಂಡವರಂತೂ ಲಕ್ಷಾಂತರ.
ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ
ರಕ್ಷಣಾ ಪಡೆಗಳು ರಕ್ಷಿಸಿರುವ ಜನಗಳ ಸಂಖ್ಯೆಯೇ 85000 ದಾಟಿದೆ, ನಿರಾರ್ಶರಿತರ ಶಿಬಿರದಲ್ಲಿ ಆಶ್ರಯ ಪಡೆದಿರುವವ ಕೇರಳಿಗರ ಸಂಖ್ಯೆ 3.15 ಲಕ್ಷ, ಮಳೆ ಹೀಗೆ ಮುಂದುವರೆದದ್ದೇ ಆದರೆ ಈ ಸಂಖ್ಯೆ ದ್ವಿಗುಣವಾಗುವ ಸಂಭವ ಇದೆ.
ಗಾಬರಿ ಹುಟ್ಟಿಸುವ ಸಾವಿನ ಅಂಕಿ-ಸಂಖ್ಯೆ
ಆಗಸ್ಟ್ ಪ್ರಾರಂಭವಾದಾಗಿ 18 ದಿನ ಆಗಿದೆ. ಈ 18 ದಿನದಲ್ಲಿ 164 ಮಂದಿ ಮಳೆಗೆ ಅಸುನೀಗಿದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ. ಇನ್ನು ಮುಗಾರು ಪ್ರಾರಂಭವಾದಾಗಿನಿಂದ ಮಳೆಗೆ ಜೀವ ತೆತ್ತವರ ಸಂಖ್ಯೆ 324 ಅಂತೆ.
ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ
ತುಂಬಿ ತುಳುಕುತ್ತಿರುವ ನಿರಾಶ್ರಿತರ ಶಿಬಿರಗಳು
ಕೇರಳದಲ್ಲಿ ಪ್ರವಾಹ ಪೀಡಿತರಿಗಾಗಿ 2094 ನಿರಾಶ್ರಿತ ಶಿಬಿರಗಳನ್ನು ತೆರೆಯಲಿದೆ. ಈ ನಿರಾಶ್ರಿತ ಶಿಬಿರಗಳಲ್ಲಿ 3.14 ಲಕ್ಷಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ಆದರೆ ಈ ಶಿಬಿರಗಳು ಕಿಕ್ಕಿರಿದು ತುಂಬಿದ್ದು ನಿರಾಶ್ರಿತರ ನಿಯಂತ್ರಣವೇ ಕಷ್ಟಕರವಾಗಿದೆ. ಈ 2094 ಶಿಬಿರಗಳಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿವೆಯಂತೆ.
ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್ಪೋರ್ಟ್ ಬಂದ್
ಶಾಸಕರು ಸಚಿವರುಗಳೇ ಪ್ರವಾಹದಲ್ಲಿ
ರಾಜಕಾರಣಿಗಳು, ಸಚಿವರು, ಶಾಸಕರ ಪರಿಸ್ಥಿತಿಯೂ ಸಾಮಾನ್ಯ ಜನದ ಪರಿಸ್ಥಿತಿಗಿಂತಲೂ ಹೆಚ್ಚಿಗೇನು ಉತ್ತಮವಾಗಿಲ್ಲ. ಪ್ರವಾಹ ಪೀಡಿತ ಸ್ಥಳಗಳಲ್ಲಿನ ಶಾಸಕರು, ಸಚಿವರುಗಳು ನೀರಿನ ಬೇಲಿಯಲ್ಲಿ ಸಿಲುಕಿ ಒದ್ದಾಡಿದ್ದಾರೆ. ಸಾಜಿ ಚೇರನ್ ಎಂಬ ಶಾಸಕರು, ದಯಾಡಿ ಹೆಲಿಕಾಪ್ಟರ್ ಕಳಿಸಿಕೊಡಿ, ನಾನು ಸೇರಿದಂತೆ ನಮ್ಮ ಊರಿನ ಜನ ಸತ್ತು ಹೋಗುತ್ತೇವೆ ಬೇಗ ಹೆಲಿಕಾಪ್ಟರ್ ಕಳಿಸಿಕೊಡಿ ಎಂದ ಅಂಗಲಾಚಿದ್ದಾರೆ.
ಹೆಲಿಕಾಪ್ಟರ್ಗೆ ಕಾಯುತ್ತಿರುವ ಜನ
ಸೇನಾ ಹೆಲಿಕಾಪ್ಟರ್ಗಳು ಬಂದು ನಮ್ಮನ್ನು ಕಾಪಾಡುತ್ತವೆ, ಸುರಕ್ಷಿತ ಸ್ಥಳಕ್ಕೆ ಎತ್ತಕೊಂಡು ಹೋಗುತ್ತವೆ ಎಂದು ಹಲವು ಜನ ಗುಡ್ಡಗಳ ಮೇಲೆ ಕಾಯುತ್ತಿರುವ ದೃಶ್ಯ ಕೇರಳದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ. ಹಗಲು ರಾತ್ರಿ ಹೆಲಿಕಾಪ್ಟರ್ ಏರ್ಲಿಫ್ಟ್ ಮಾಡಿದರೂ ಸಹ ಇನ್ನೂ ರಕ್ಷಣಾ ಕಾರ್ಯ ಮುಗಿಯುತ್ತಲೇ ಇಲ್ಲ.
ಸಂಕಷ್ಟದಲ್ಲಿ ಪ್ರವಾಸಿಗರು
ಸುಂದರ ಕೇರಳಕ್ಕೆ ಪ್ರವಾಸಕ್ಕೆಂದು ತೆರಳಿರುವ ಪ್ರವಾಸಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುನ್ನಾರ್, ತೇಕಡಿಯಂತ ಪ್ರವಾಸಿ ಸ್ಥಳಗಳಲ್ಲಿ ಸಿಲುಕಿದವರಂತೂ ಭಾರಿ ಸಮಸ್ಯೆ ಎದರುಸುತ್ತಿದ್ದಾರೆ. ನೆರೆ ಇಳಿಯುವ ವರೆಗೆ ಅವರಾರೂ ಕೇರಳ ಬಿಟ್ಟು ಕದಲಲಾರರು. ಎಷ್ಟೂ ಮಂದಿ ಪ್ರವಾಸಿಗರು ನಿರಾಶ್ರಿತರ ಶಿಬಿರಗಳಲ್ಲಿ ದಿನ ದೂಡುತ್ತಾ ಮಳೆ ನಿಲ್ಲಲು ಪ್ರಾರ್ಥಿಸುತ್ತಿದ್ದಾರೆ.
ಹಲವು ವರ್ಷಗಳ ಬಳಿಕ ಅಣೆಕಟ್ಟೆ ಓಪನ್
ಕೇರಳದಲ್ಲಿ 26-27 ವರ್ಷಗಳಿಂದ ತೆರೆಯದಿದ್ದ ಕುಲಮಾವು, ಚೆರತೋನಿ, ನಿಡುಕ್ಕಿ, ಡ್ಯಾಂಗಳಿಂದ ಮೊದಲ ಬಾರಿಗೆ ನೀರು ಹೊರಬಿಡಲಾಗಿದೆ. ಈ ಹೊರಬಿಟ್ಟ ನೀರು ಸಹ ಪ್ರವಾಹಕ್ಕೆ ಕಾರಣವಾಗಿದೆ. ಕೋಥಮಂಗಲಂ ಡ್ಯಾಂ, ತಮಿಳುನಾಡಿನ ಕುಂಬಂ ತುಂಬಿವೆ. ಮೀನ್ಮಟ್ಟಿ ಅಣೆಕಟ್ಟೆಗೆ ಹಾನಿಯಾಗಿದ್ದು, ಅಣೆಕಟ್ಟೆ ಒಡೆಯುವ ಭಯದಲ್ಲಿ ಸ್ಥಳೀಯರಿದ್ದಾರೆ.
ಯಾವ ಯಾವ ಜಿಲ್ಲೆಗಳಿಗೆ ಹಾನಿ ಹೆಚ್ಚು
ಪೂರ್ವ ಕೇರಳದ ಜಿಲ್ಲೆಗಳಲ್ಲಿ ಪ್ರವಾಹ ತೀವ್ರವಾಗಿದೆ. ಇಲ್ಲಿನ ಬಹುತೇಕ ಜಿಲ್ಲೆಗಳ ಎಲ್ಲ ರಸ್ತೆಗಳು ನೀರಿನಂದ ಆವೃತವಾಗಿದ್ದು, ಮಳೆಯ ರಭಸಕ್ಕೆ ಮನೆ, ಜಮೀನು, ಜಾನುವಾರುಗಳು ಕೊಚ್ಚಿ ಹೋಗಿವೆ. ಆಲುವಾ ಪಟ್ಟಣವಂತೂ ಪೂರ್ಣ ಮುಳುಗಿಯೇ ಹೋಗಿದೆ. ಎರ್ನಾಕುಲಂ, ಕೊಚ್ಚಿ, ಕಾಡುನಗಲೂರು, ತೊಟ್ಟಕತ್ತುಕರ, ಕಾರುಮಲ್ಲೂರು, ತುರುತ್ತು, ದೆಸೋಮ್, ಕಾಲಾಡಿ, ಕೋಂಪನಿಪಾಂಡೆ, ಮಂಜಾಲಿ, ವಿಲಯತ್ತುನಾಡ್, ಮಾಲಿಕಾಂಬಿದೀಕಾ, ಪರವೂರ್ ಕವಲಾ , ಚೋವರ್, ಉತ್ತರ ಪರವೂರ್, ಇಲ್ಲೂರುಗಳು ಸಂಪೂರ್ಣ ಪ್ರವಾಹ ಪೀಡಿತವಾಗಿದ್ದು, ಇಲ್ಲಿ ಮನೆಗಳೇ ಮುಳುಗಿಹೋಗಿವೆ.
ಯಾವ ಯಾವ ತಂಡಗಳು ಕಾರ್ಯ ನಿರ್ವಹಿಸುತ್ತಿವೆ
ಕೇರಳದಲ್ಲಿ ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆ, ಭಾರತೀಯ ಸೇನೆ, ನೌಕಾ ದಳ, ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ, ಹಲವು ಸ್ವಯಂ ಸೇವಾ ಸಂಘಟನೆಗಳು, ಕಡಲು ಕಾವಲು ಸೇನೆ, ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು ಇನ್ನೂ ಹಲವು ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರಕೃತಿ ವಿಕೋಪದಿಂದಾಗಿ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.
ಮೋದಿ ತುರ್ತು ಸಭೆ, 500 ಕೋಟಿ ಅನುದಾನ
ಇಂದು ಬೆಳಿಗ್ಗೆ ಕೇರಳಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ, ಕೇರಳ ಸಚಿವರ ಜೊತೆ ತುರ್ತು ಸಭೆ ನಡೆಸಿ ಪ್ರವಾಹದ ಬಗ್ಗೆ ಮಾಹಿತಿ ಪಡೆದರು. ಆ ನಂತರ ವೈಮಾನಿಕ ಸಮೀಕ್ಷೆಯನ್ನು ನಡೆಸಿ ಕೇರಳಕ್ಕೆ 500 ಕೋಟಿ ಅನುದಾನ ಬಿಡುಗಡೆ ಮಾಡಿದರು. ಆಗಿರುವ ನಷ್ಟ 20000 ಕೋಟಿ ಕೇಂದ್ರ ನೀಡಿರುವುದು ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿವೆ.
19,850 ಕೋಟಿ ಈವರೆಗಿನ ನಷ್ಟ
ಕೇರಳದಲ್ಲಿ ಈ ವರೆಗೆ ಆಗಿರುವ ನಷ್ಟ 19,850 ಕೋಟಿ ಎಂದು ಮುಖ್ಯಮಂತ್ರಿ ಕಚೇರಿ ಲೆಕ್ಕ ಹೇಳಿದೆ. ಹಾನಿಗೊಳಗಾಗಿರುವ ಭಾಗವನ್ನು ಪುನರ್ ಸ್ಥಾಪಿಸಲು ಬಹಳ ವರ್ಷವೇ ಬೇಕು, ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರ ಜೀವನ ಮರಳಿ ಹಾದಿಗೆ ಬರುವುದು ಸುಲಭವಲ್ಲ. ಎಲ್ಲರ ಸಹಾಯ ಹಸ್ತ ಕೇರಳಕ್ಕೆ ಈಗ ಬೇಕಿದೆ. ಆಸಕ್ತರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ವರ್ಗಾಯಿಸಬಹುದು.
|
ಬ್ಯಾಂಕ್ ಖಾತೆ ವಿವರ
Donee:
Chief
Ministers
Distress
Relife
fund
Account
no:
67319948232
Bank:
State
Bank
of
India
IFCS
code:
SBIN0070028
Branch:
City
branch,
Thiruvananthapuram
SWIFT
CODE
:
SBININBBT08