ಕತುವಾ ಅತ್ಯಾಚಾರ ಅವಮಾನಕರ ಘಟನೆ: ರಾಷ್ಟ್ರಪತಿ ಕೋವಿಂದ್
ಕತ್ರಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಎಂಟು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆಯ ಕುರಿತು ತೀವ್ರ ನೋವು ವ್ಯಕ್ತಪಡಿಸಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಇದು ಅವಮಾನಕರ ಘಟನೆ ಎಂದು ಹೇಳಿದ್ದಾರೆ.
'ಸ್ವಾತಂತ್ರ್ಯ ದೊರೆತು 70 ವರ್ಷಗಳಾದ ಬಳಿಕವೂ ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನಡೆಯುವುದು ಅವಮಾನಕರ. ನಾವು ಯಾವ ರೀತಿಯ ಸಮಾಜವನ್ನು ರೂಪಿಸುತ್ತಿದ್ದೇವೆ ಎಂಬ ಬಗ್ಗೆ ನಮಗೆ ನಾಚಿಕೆಯಾಗಬೇಕು. ಇಂತಹ ಕೃತ್ಯ ಯಾವ ಹೆಣ್ಣುಮಗು ಅಥವಾ ಮಹಿಳೆಯ ಮೇಲೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ' ಎಂದು ಕೋವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಮಾನವೀಯ ಕೃತ್ಯವನ್ನು ಖಂಡಿಸಿದರು.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೂ ಈ ಘಟನೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದಾರೆ.
ಮಾತಾ ವೈಷ್ಣೋದೇವಿಯ ಸ್ವರೂಪವಾದ ಆ ಪುಟ್ಟ ಬಾಲಕಿಯ ಮೇಲೆ ಅಂತಹ ಕ್ರೌರ್ಯ ಎಸಗಲು ಹೇಗೆ ತಾನೆ ಮನಸ್ಸು ಬರುತ್ತದೆ? ನಮ್ಮ ಸಮಾಜಕ್ಕೆ ಏನಾಗಿದೆ? ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
ಕತುವಾದ ಗ್ರಾಮವೊಂದರಲ್ಲಿ ಜನವರಿಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ನಿರಂತರ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು.












Click it and Unblock the Notifications