RSS ಇಲ್ಲದಿದ್ರೆ ಕಾಶ್ಮೀರ, ಪಾಕಿಸ್ತಾನದ ಪಾಲಾಗುತ್ತಿತ್ತು: ಯೋಗಿ
ಪಾಟ್ನಾ, ಮೇ 20: ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಇಲ್ಲದಿದ್ದರೆ ಇಂದು ಕಾಶ್ಮೀರ, ಪಂಜಾಬ್ ಹಾಗೂ ಪಶ್ಚಿಮ ಬಂಗಾಳಗಳು ಭಾರತದಲ್ಲಿ ಇರುತ್ತಿರಲಿಲ್ಲ. ಆ ರಾಜ್ಯಗಳು ನಮ್ಮಲ್ಲಿ ಉಳಿಯುವುದಕ್ಕೆ ಕಾರಣ ಆರೆಸ್ಸೆಸ್ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಶನಿವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆರೆಸ್ಸೆಸ್ ಪಕ್ಷದ ಬಗ್ಗೆ ವಿರೋಧ ಪಕ್ಷಗಳು ಮಾಡಿದ ಟೀಕೆಗಳಿಗೆ ಅವರು ಉತ್ತರಿಸುತ್ತಿದ್ದರು. ಯೋಗಿ ಸರ್ಕಾರ ಕೇವಲ ಗೋ ಸಂರಕ್ಷಣೆ, ಗೋ ಮಾಂಸ ನಿಷೇಧವೊಂದಕ್ಕೇ ಮಾತ್ರ ಸೀಮಿತವಾಗಿ ಎಂದು ವಿರೋಧ ಪಕ್ಷಗಳು ಹುಯಿಲೆಬ್ಬಿಸಿದವು. ಆಗ, ಆರೆಸ್ಸೆಸ್ ವಿಚಾರ ಪ್ರಸ್ತಾವನೆಯಾಯಿತು. ಆಗ, ಸಿಎಂ ಯೋಗಿ ಹೀಗೆ ಉತ್ತರಿಸಿದರು.
'' ದೇಶದ ರಕ್ಷಣೆಗೆ ಆರೆಸ್ಸೆಸ್ ಕಟಿಬದ್ಧವಾಗಿದೆ. ಹಾಗೊಂದು ವೇಳೆ, ಆರೆಸ್ಸೆಸ್ ಹಾಗೂ ಡಾ. ಶ್ಯಾಮ ಪ್ರಕಾಶ ಮುಖರ್ಜಿ ಇಲ್ಲದೇ ಹೋಗಿದ್ದಿದ್ದರೆ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಕಾಶ್ಮೀರ ರಾಜ್ಯಗಳನ್ನು ಪಾಕಿಸ್ತಾನ ಒತ್ತುವರಿ ಮಾಡಿಕೊಳ್ಳುತ್ತಿತ್ತು'' ಎಂದು ಯೋಗಿ ಪ್ರತಿಪಕ್ಷಗಳಿಗೆ ಉತ್ತರಿಸಿದರು.
ಅಷ್ಟೇ ಅಲ್ಲ, ಆರೆಸ್ಸೆಸ್ ಇರದಿದ್ದರೆ, ಶಾಲೆಗಳಲ್ಲಿ ವಿದ್ಯಾರ್ಥಿಗಳು ವಂದೇ ಮಾತರಂ ಹಾಡುವುದನ್ನೂ ಮರೆಯುತ್ತಿದ್ದರು ಎಂದು ಅವರು ಬಣ್ಣಿಸಿದರು.