ಲೋಕಸಭಾ ಚುನಾವಣೆ 2024 ರ 3 ನೇ ಹಂತದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 39.92% ಮತದಾನವಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಮಧ್ಯಾಹ್ನ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಸಂಜೆ ವೇಳೆಗೆ ಬಿರುಸು ಪಡೆಯುವ ಸಾಧ್ಯತೆ ಇದೆ.
ಮೂರನೇ ಹಂತದಲ್ಲಿ 10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 94 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ, ಕೇರಳ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸಹಿತ ಪ್ರಮುಖ ರಾಜ್ಯಗಳಲ್ಲಿ 3 ನೇ ಹಂತದಲ್ಲಿ ಮತದಾನ ನಡೆಯುತ್ತಿದೆ.
ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಬೆಳಗಾವಿ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಾಗಿವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಕಾರಣ, ಬಿಜೆಪಿ ಗೆಲುವು ಕಷ್ಟವಾಗುತ್ತಾ ಎನ್ನುವ ಕುತೂಹಲ ಇದೆ.
14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆದಿದ್ದು, ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಅತೀ ಹೆಚ್ಚು ಮತದಾನವಾಗಿದೆ. ಚಿಕ್ಕೋಡಿ-72.72%, ಹಾವೇರಿ 71.90%, ದಾವಣಗೆರೆ 70.90%, ಶಿವಮೊಗ್ಗದಲ್ಲಿ 72.02% ಮತದಾನ ಆಗಿದೆ.
May 07, 2024, 7:43 pm IST
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ಕತು ಕಲಾವಿದೆ ಮಂಜಮ್ಮ ಜೋಗತಿ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಗಮನ ಸೆಳೆದರು.
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು (ಮೇ 07) ಬೆಳಗ್ಗೆ 07ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ವೇಳಗೆ ಮುಕ್ತಾಯವಾಗಿದೆ.
May 07, 2024, 6:11 pm IST
ಒಂದೇ ಕುಟುಂಬದ 69 ಸದಸ್ಯರಿಂದ ಮತದಾನ
ಒಂದೇ ಕುಟುಂಬದ 69 ಸದಸ್ಯರು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56,57ರಲ್ಲಿ ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನ ಮೂಲಕ ಬಂದು ಮತ ಚಲಾವಣೆ ಮಾಡಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಏಕಕಾಲದಲ್ಲಿ ಬಂದು ಮತದಾನ ಮಾಡಿದ್ದಾರೆ. ಮೂರು ತಲೆಮಾರಿನ ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
May 07, 2024, 5:50 pm IST
ರಾಜ್ಯದಲ್ಲಿ 5 ಗಂಟೆ ವೇಳೆಗೆ 66.05% ಮತದಾನ
ಸಂಜೆ 5 ಗಂಟೆ ವೇಳಗೆ ಬಾಗಲಕೋಟೆ-65.55%, ಬಳ್ಳಾರಿ-68.94%, ಬೆಳಗಾವಿ-65.67%, ಬೀದರ್- 60.17%, ಚಿಕ್ಕೋಡಿ-72.75%, ದಾವಣಗೆರೆ-70.9%
ಧಾರವಾಡ-67.15%, ಹಾವೇರಿ-71.9%, ಕಲಬುರಗಿ -57.2%, ಕೊಪ್ಪಳ-66.05%, ರಾಯಚೂರು- 59.48%, ಶಿವಮೊಗ್ಗ-72.07%, ಉತ್ತರ ಕನ್ನಡ- 69.57%, ವಿಜಯಪುರದಲ್ಲಿ-60.95% ಮತದಾನ ಆಗಿದೆ.
May 07, 2024, 5:10 pm IST
ಶಾಂತಿಯುತ ಮತದಾನ ಪ್ರಕ್ರಿಯೆ
ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಗ್ರಾಮೀಣ ಭಾಗದ ಅಂಚಟಗೇರಿ, ನೂಲ್ವಿ, ಕುಂದಗೋಳ, ಬೆನಕನಹಳ್ಳಿ, ಚಿಕ್ಕನೇರ್ತಿ, ರೊಟ್ಟಿಗವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು.
May 07, 2024, 5:08 pm IST
ವಿನಯ್ ಕುಲಕರ್ಣಿಗೆ ಮತ ಹಾಕಲು ಅನುಮತಿ
ಶಾಸಕ ವಿನಯ್ ಕುಲಕರ್ಣಿಗೆ ಮತ ಹಾಕಲು ಅನುಮತಿ ಹಿನ್ನೆಲೆ, ಧಾರವಾಡದ ಶಾರದಾ ಶಾಲೆಯಲ್ಲಿನ ಮತಗಟ್ಟೆ 75ಕ್ಕೆ ಅವರು ಆಗಮಿಸಲಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಭಾರೀ ಬಿಗಿಭದ್ರತೆ, ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಮತ್ತೊಂದರೆಡೆ ಅಭಿಮಾನಿಗಳು ಸ್ಥಳದತ್ತ ಆಗಮಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟಿದ್ದಾರೆ.
May 07, 2024, 3:55 pm IST
ಸೈಕಲ್ ಸವಾರಿಯಲ್ಲಿ ಮತಗಟ್ಟೆಗೆ ಬಂದ ದಂಪತಿ
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 68 ವರ್ಷದ ಸುರೇಶ್ ಹಾಗೂ ಅವರು 54 ವರ್ಷದ ಲಕ್ಷ್ಮೀದೇವಿ ದಂಪತಿ ತಮ್ಮ ಸೈಕಲ್ ರಿಕ್ಷಾದ ಸವಾರಿ ಮೂಲಕ ಮತಗಟ್ಟೆಗೆ ಆಗಮಿಸಿ ವಿಶೇಷ ರೀತಿಯಲ್ಲಿ ಮತದಾನಕ್ಕೆ ಸಾಕ್ಷಿಯಾದರು.
May 07, 2024, 3:46 pm IST
ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಶೇಕಡಾ 55ರಷ್ಟು ಮತದಾನವಾಗಿದೆ. ನವಲಗುಂದ ಶೇಕಡಾ 56.06, ಕುಂದಗೋಳ ಶೇ.54.54, ಧಾರವಾಡ ಶೇ.57.2, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ.55.2, ಹು-ಧಾ ಸೆಂಟ್ರಲ್ ಶೇ.52.61, ಹು-ಧಾ ಪಶ್ಚಿಮ 51.58, ಕಲಘಟಗಿ ಶೇ.60.1, ಶಿಗ್ಗಾವಿಯಲ್ಲಿ ಶೇ.54.57ರಷ್ಟು ಮತದನಾವಾಗಿದೆ.
May 07, 2024, 3:09 pm IST
ಕುಸಿದುಬಿದ್ದ ಚುನಾವಣಾ ಸಿಬ್ಬಂದಿ
ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಧಾರವಾಡದ ಗಾಂಧಿನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಬಂದಿದ್ದ ಮೇಲಿಮನಿ ಎಂಬುವವರು ಏಕಾಏಕಿ ತಲೆ ಸುತ್ತು ಬಂದು ಕುಸಿದು ಬಿದ್ದ ಘಟನೆ ನಡೆದಿದೆ.
May 07, 2024, 2:42 pm IST
ಬಿಹಾರ
ಮತಗಟ್ಟೆಯಲ್ಲಿ ಅಧಿಕಾರಿ ಸಾವು
2024 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ನಡೆಯುತ್ತಿರುವ ಸಂದರ್ಭದಲ್ಲಿ ಬಿಹಾರದ ಸುಪೌಲ್ನಲ್ಲಿರುವ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತಪಟ್ಟವರನ್ನು ಶೈಲೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
May 07, 2024, 2:40 pm IST
ಕರ್ನಾಟಕ
ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ
ಬಿಜೆಪಿ ಫೋನ್ ಪೇ ಮೂಲಕ ಹಣ ಹಂಚಿಕೆ ಮಾಡಿತಾ?
May 07, 2024, 2:28 pm IST
ಕರ್ನಾಟಕ
ಮತದಾರರಿಗೆ ಬಿಜೆಪಿ ಆಮಿಷ
ಕರ್ನಾಟಕ ಬಿಜೆಪಿ ನಾಯಕರು ಡಿಜಿಟಲ್ ಪಾವತಿ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸೇಡಂ ಮತ್ತು ಚಿತ್ತಾಪುರ ಕ್ಷೇತ್ರಗಳಲ್ಲಿ ಬಿಜೆಪಿ ನೇರವಾಗಿ ಫೋನ್ಪೇ ಬಳಸಿ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಿರುವ ಅವರು, ಸಾಕ್ಷ್ಯಾಧಾರಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದು ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.
. @BJP4Karnataka are indeed taking PM @narendramodi’s digital payment mission to the next level. BJP is bribing voters directly using PhonePe in Sedam and Chittapur constituencies.
We are filing a complaint with more evidence of such transactions to the Election Commission.… pic.twitter.com/DErP48Yhkp
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 7, 2024
May 07, 2024, 2:24 pm IST
93 ಕ್ಷೇತ್ರಗಳಲ್ಲಿ ಶೇ 39.92 ಮತದಾನ
ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯೊಳಗೆ ಶೇ 39.92 ಮತದಾನವಾಗಿದೆ. ಅಸ್ಸಾಂ ಶೇ 45.88, ಬಿಹಾರ ಶೇ 36.69, ಛತ್ತೀಸ್ಗಢ ಶೇ 46.14, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಶೇ 39.94, ಗೋವಾ ಶೇ 49.04, ಗುಜರಾತ್ ಶೇ 37.83, ಕರ್ನಾಟಕ ಶೇ 41.59, ಮಧ್ಯ ಪ್ರದೇಶ ಶೇ 44.67, ಮಹಾರಾಷ್ಟ್ರ ಶೇ 31.55, ಉತ್ತರ ಪ್ರದೇಶ ಶೇ 38.12, ಪಶ್ಚಿಮ ಬಂಗಾಳ ಶೇ 49.27 ಮತದಾನವಾಗಿದೆ.
May 07, 2024, 2:09 pm IST
ಮಧ್ಯಪ್ರದೇಶದಲ್ಲಿ 44.67% ಮತದಾನ
ಮಧ್ಯಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 44.67% ಮತದಾನವಾಗಿದೆ. ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಒಂಭತ್ತು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮೊರೆನಾ, ಭಿಂಡ್, ಗ್ವಾಲಿಯರ್, ಗುಣ, ಸಾಗರ್, ವಿದಿಶಾ, ಭೋಪಾಲ್, ರಾಜ್ಗಢ್ ಮತ್ತು ಬೆತುಲ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
May 07, 2024, 1:48 pm IST
ಕರ್ನಾಟಕ
ಹಳ್ಳಿಯಂತೆ ಸಿದ್ಧವಾದ ಮತಗಟ್ಟೆ
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಹಳ್ಳಿ ಜೀವನದ ವಿಷಯಾಧಾರಿತ ಮತಗಟ್ಟೆ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು ಮತದಾರರನ್ನು ಸೆಳೆಯುತ್ತಿದೆ. ಚುನಾವಣಾಧಿಕಾರಿಗಳು ವಿನೂತನ ಐಡಿಯಾ ಕಂಡು ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
May 07, 2024, 1:36 pm IST
ಕರ್ನಾಟಕ
ಕರ್ನಾಟಕದಲ್ಲಿ 41.59% ಮತದಾನ
ಮಧ್ಯಾಹ್ನ 1 ಗಂಟೆ ವೇಳೆಗೆ ಕರ್ನಾಟಕದ 14 ಕ್ಷೇತ್ರಗಳಲ್ಲಿ 41.59% ಮತದಾನವಾಗಿದೆ. ಬಾಗಲಕೋಟೆ 41.91%, ಬಳ್ಳಾರಿ 44.36%, ಬೆಳಗಾವಿ 40.57%, ಬೀದರ್ 37.97%, ಚಿಕ್ಕೋಡಿ 45.69%, ದಾವಣಗೆರೆ 42.32%, ಧಾರವಾಡ 40.61%, ಹಾವೇರಿ 43.26%, ಕಲಬುರಗಿ 37.48%, ಕೊಪ್ಪಳ 42.74%, ರಾಯಚೂರು 38.06%, ಶಿವಮೊಗ್ಗ 44.98%, ಉತ್ತರ ಕನ್ನಡ 44.22%, ವಿಜಯಪುರ 39.87% ಮತದಾನವಾಗಿದೆ.
May 07, 2024, 1:26 pm IST
ಉತ್ತರ ಪ್ರದೇಶ
ಅಖಿಲೇಶ್ ಯಾದವ್ ಮತದಾನ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ, ಮೈನ್ಪುರಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಅವರು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫಾಯ್ನಲ್ಲಿ ಮೂರನೇ ಹಂತದ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು.
May 07, 2024, 1:06 pm IST
ಗುಜರಾತ್
ಗೌತಮ್ ಅದಾನಿ ಮತದಾನ
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅಹಮದಾಬಾದ್ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಎಕ್ಸ್ನಲ್ಲಿ ಮತ ಹಾಕಿದ ಬಳಿಕ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತದ ಭವಿಷ್ಯ ರೂಪಿಸಲು ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
May 07, 2024, 12:35 pm IST
ಕರ್ನಾಟಕ
ಸಂತೋಷ್ ಲಾಡ್ ಮತದಾನ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಮತ ಚಲಾಯಿಸಿದರು. ಕಲಘಟಗಿಯ ಮಡಕಿಹೊನ್ನಳ್ಳಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
May 07, 2024, 12:32 pm IST
ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು
ಬೆಳಗಾವಿಯ ನಿಟ್ಟೂರಿನ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆ, ಬೂತ್ ಸಂಖ್ಯೆ 125 ರ ಎದುರು ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಶಾಲ್ ಮತ್ತು ಬ್ಯಾಡ್ಜ್ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತದಾರರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುವುದರೊಂದಿಗೆ ಕಾನೂನು ಉಲ್ಲಂಘನೆ ಮಾಡಿರುವ ಕ್ರಮವನ್ನು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
May 07, 2024, 12:28 pm IST
25.4% ಮತದಾನ
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 93 ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆಗೆ 25.4% ಮತದಾನವಾಗಿದೆ.
May 07, 2024, 11:37 am IST
ಕರ್ನಾಟಕ
ರಾಜ್ಯದಲ್ಲಿ 24.48% ಮತದಾನ
ಕರ್ನಾಟಕದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ 24.48% ಮತದಾನವಾಗಿದೆ.
ಬಾಗಲಕೋಟೆ - 23.80%
ಬೆಳಗಾವಿ - 23.91%
ಬಳ್ಳಾರಿ - 26.45%
ಬೀದರ್ - 22.33%
ಬಿಜಾಪುರ - 23.91%
ಚಿಕ್ಕೋಡಿ - 27.23%
ದಾವಣಗೆರೆ - 23.73%
ಧಾರವಾಡ - 24.00%
ಗುಲ್ಬರ್ಗ - 22.64%
ಹಾವೇರಿ - 24.24%
ಕೊಪ್ಪಳ - 24.64%
ರಾಯಚೂರು - 22.05%
ಶಿವಮೊಗ್ಗ - 27.22%
ಉತ್ತರ ಕನ್ನಡ - 27.65%
May 07, 2024, 11:32 am IST
ಕರ್ನಾಟಕ
ಧನ್ಯವಾದ ತಿಳಿಸಿದ ಶಿವರಾಜ್ಕುಮಾರ್
ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
May 07, 2024, 11:05 am IST
ಕರ್ನಾಟಕ
ಮಲ್ಲಿಕಾರ್ಜುನ ಖರ್ಗೆ ಮತದಾನ
ಕಲಬುರಗಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮೂರನೇ ಹಂತದ ಲೋಕಸಭೆ ಚುನಾವಣೆಯ ಮತದಾನದಲ್ಲಿ ಮತ ಚಲಾಯಿಸಿದರು.
May 07, 2024, 10:56 am IST
ಗುಜರಾತ್
ರಿವಾಬ ಜಡೇಜಾ ಮತದಾನ
ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಜಾಮ್ನಗರ ಉತ್ತರ ಕ್ಷೇತ್ರದ ಶಾಸಕಿ ರಿವಾಬ ಜಡೇಜಾ ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಮತದಾನ ಮಾಡಿದ್ದಾರೆ.
May 07, 2024, 10:51 am IST
ಕರ್ನಾಟಕ
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು
ಬಿಜೆಪಿ ಸದಸ್ಯರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಿಸಲಿದ್ದಾರೆ. ಮತದಾನ ಮಾಡಿದ ಬಳಿಕ ಮತಗಟ್ಟೆಯೊಳಗೆ ಪೋಸ್ ನೀಡಿದ್ದಕ್ಕಾಗಿ ಮತ್ತು ಅಭ್ಯರ್ಥಿಯಾಗಿರುವ ಅವರ ಪುತ್ರ ಮೃಣಾಲ್ ಅವರ ಕ್ರಮಸಂಖ್ಯೆಯನ್ನು ಸೂಚಿಸಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
May 07, 2024, 10:47 am IST
ಗುಜರಾತ್
ಆಟೋಗ್ರಾಫ್ ಕೊಟ್ಟ ಮೋದಿ
ಮೂರನೇ ಹಂತದ ಲೋಕಸಭಾ ಚುನಾವಣೆಯ ವೇಳೆ ಅಹಮದಾಬಾದ್ನ ಅಹಮದಾಬಾದ್ನಲ್ಲಿ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ ನಂತರ ಬೆಂಬಲಿಗರಿಗೆ ಹಸ್ತಾಕ್ಷರ ನೀಡಿದ ಪ್ರಧಾನಿ ನರೇಂದ್ರ ಮೋದಿ.
May 07, 2024, 10:44 am IST
ಗುಜರಾತ್
ಅಮಿತ್ ಶಾ ಕುಟುಂಬದಿಂದ ಮತದಾನ
ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ನಿ ಸೋನಾಲ್ ಶಾ, ಮಗ ಜಯ್ ಶಾ ಮತ್ತು ಸೊಸೆ ರಿಷಿತಾ ಪಟೇಲ್ ಅವರೊಂದಿಗೆ ತಮ್ಮ ಫೋಟೊಗೆ ಫೋಸ್ ಕೊಟ್ಟರು.
May 07, 2024, 10:41 am IST
ಕರ್ನಾಟಕ
ದೇಶದ ರಕ್ಷಣೆಗೆ ಮತದಾನ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದೆ. ಪ್ರತಿಯೊಬ್ಬರು ತಪ್ಪದೆ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
READ MORE
11:22 PM, 6 May
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.
11:22 PM, 6 May
ಕರ್ನಾಟಕ
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು, ಈಗ ಉಳಿದ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ.
11:22 PM, 6 May
ಕರ್ನಾಟಕ
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.
5:47 AM, 7 May
93 ಕ್ಷೇತ್ರಗಳಿಗೆ ಇಂದು ಮತದಾನ
10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, ಏಳು ಹಂತಗಳ ಚುನಾವಣೆಯಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದ ಚುನಾವಣೆಯನ್ನು ಮೇ 25 ಕ್ಕೆ ಮುಂದೂಡಲಾಗಿದೆ.
6:12 AM, 7 May
ಪ್ರಮುಖ ಬಿಜೆಪಿ ಅಭ್ಯರ್ಥಿಗಳು
ಗುಜರಾತ್ನ ಗಾಂಧಿನಗರದಿಂದ ಕೇಂದ್ರ ಸಚಿವ ಅಮಿತ್ ಶಾ, ಮಧ್ಯಪ್ರದೇಶದ ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ, ಕರ್ನಾಟಕದ ಧಾರವಾಡದಿಂದ ಪ್ರಲ್ಹಾದ್ ಜೋಶಿ ಮತ್ತು ಮಧ್ಯಪ್ರದೇಶದ ವಿದಿಶಾದಿಂದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಮುಖ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.
6:15 AM, 7 May
ಉತ್ತರ ಪ್ರದೇಶದ ಮೈನ್ಪುರಿಯಿಂದ ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ಪಶ್ಚಿಮ ಬಂಗಾಳದ ಬರ್ಹಾಂಪೋರ್ನಿಂದ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ, ಮಧ್ಯಪ್ರದೇಶದ ರಾಜ್ಗಢದಿಂದ ದಿಗ್ವಿಜಯ ಸಿಂಗ್, ಮಹಾರಾಷ್ಟ್ರದ ಬಾರಾಮತಿಯಿಂದ ಎನ್ಸಿಪಿಯ ಸುಪ್ರಿಯಾ ಸುಳೆ ಗಮನ ಸೆಳೆದ ಅಭ್ಯರ್ಥಿಗಳಾಗಿದ್ದಾರೆ.
6:22 AM, 7 May
ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ರಾಜ್ಯದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.
ಚಿಕ್ಕೋಡಿ, ಶಿವಮೊಗ್ಗ, ಹಾವೇರಿ, ಧಾರವಾಡ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ರಾಯಚೂರು, ಕೊಪ್ಪಳ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಸ್ಫರ್ದೆ ಮಾಡಿದ್ದು, ಮತದಾರರು ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.
6:47 AM, 7 May
ಕರ್ನಾಟಕ
ಚುನಾವಣಾ ಆಯೋಗ ಸಜ್ಜು
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ ಚುನಾವಣಾ ಆಯೋಗ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿದೆ. ನೆರಳಿಗೆ ಶಾಮಿಯಾನ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳಲ್ಲಿ ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.
6:57 AM, 7 May
ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಲಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 6 ಗಂಟೆಯ ಒಳಗೆ ಮಗತಟ್ಟೆಗೆ ಬಂದವರಿಗೆ ಮಾತ್ರ ಮತದಾನಕ್ಕೆ ಅವಕಾಶ ದೊರೆಯಲಿದೆ.
7:04 AM, 7 May
ಮತ ಚಲಾಯಿಸಲಿರುವ ಮೋದಿ
ಇಂದು ನಡೆಯಲಿರುವ ಮೂರನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಲಿದ್ದಾರೆ. ಈಗಾಗಲೇ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
7:08 AM, 7 May
ಕರ್ನಾಟಕ
ಮತದಾನ ಆರಂಭ
ಸರಿಯಾಗಿ 7 ಗಂಟೆಗೆ ರಾಜ್ಯದಲ್ಲಿ ಮತದಾನ ಆರಂಭವಾಗಿದೆ. ಬಿಸಿಲು ಹೆಚ್ಚಾಗುವ ಮುನ್ನವೇ ಮತಹಾಕಲು ಮತದಾರರು ಮತಗಟ್ಟೆಗಳತ್ತ ಬರುತ್ತಿದ್ದಾರೆ, ಕೆಲಸಕ್ಕೆ ತೆರಳುವವರು ಕೂಡ ಮತ ಹಾಕಿ ಕೆಲಸಕ್ಕೆ ತೆರಳಲು ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ.
7:11 AM, 7 May
ಮತದಾನ ಮಾಡಲು ಪ್ರಧಾನಿ ಮೋದಿ ಮನವಿ
ಇಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ಎಲ್ಲರೂ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಮತದಾರರ ಸಕ್ರಿಯ ಭಾಗವಹಿಸುವಿಕೆ ಚುನಾವಣೆಯನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ ಎಂದು ಹೇಳಿದ್ದಾರೆ.
Urging all those who are voting in today’s phase to vote in record numbers. Their active participation will certainly make the elections more vibrant.
ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬಸ್ಥರು ಮತದಾನ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮತದಾನ ಮಾಡಿದರು.
7:22 AM, 7 May
ಕರ್ನಾಟಕ
28 ಕ್ಷೇತ್ರಗಳಲ್ಲಿ ಗೆಲ್ತೇವೆ ಎಂದ ಬಿಎಸ್ವೈ
ಮತದಾನದ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
7:24 AM, 7 May
ಕರ್ನಾಟಕ
ಈ ಬಾರಿಯೂ ಗೆಲುವು ನಮ್ಮದೆ
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು, ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲುವು ಸಾಧಿಸಲಿದೆ. ದೇಶದ ಜನ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿ ಮಾಡಲು ಬಯಸಿದ್ದಾರೆ ಎಂದು ಹೇಳಿದರು. 20 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ನವರು ಭ್ರಮೆಯಲ್ಲಿದ್ದು, ಜೂನ್ 4ರಂದು ಅವರಿಗೆ ಆಘಾತ ಕಾದಿದೆ ಎಂದರು.
7:29 AM, 7 May
ಅಮಿತ್ ಶಾ ಮತದಾನ
ಅಹಮದಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತದಾನ ಮಾಡಲು ಆಗಮಿಸಿದ್ದಾರೆ. ಗುಜರಾತ್ನ ಗಾಂಧಿನಗರ ಕ್ಷೇತ್ರದಿಂದ ಅಮಿತ್ ಶಾ ಸ್ಪರ್ಧೆ ಮಾಡಿದ್ದಾರೆ.
7:34 AM, 7 May
ಹಲವು ಕಡೆ ಕೈಕೊಟ್ಟ ಮತಯಂತ್ರ
ಬೆಳಗಾವಿ, ಕಾರವಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಮತ ಹಾಕಲು ಬಂದವರಿಗೆ ನಿರಾಸೆಯಾಗಿದೆ.
7:45 AM, 7 May
ಮತದಾನ ಮಾಡಲು ಆಗಮಿಸಿದ ಮೋದಿ, ಅಮಿತ್ ಶಾ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತಹಾಕಲು ಮತಗಟ್ಟೆಗೆ ಆಗಮಿಸಿದ್ದಾರೆ. ಅಹಮದಾಬಾದ್ನ ನಿಶಾನ್ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಇಬ್ಬರೂ ಕೂಡ ಮತ ಹಾಕಲಿದ್ದಾರೆ.
7:59 AM, 7 May
ಮತ ಚಲಾಯಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ನ ರಾನಿಪ್ನಲ್ಲಿರುವ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಿದರು. ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಗೃಹ ಸಚಿವ ಅಮಿತ್ ಶಾ ಅವರನ್ನು ಕಣಕ್ಕಿಳಿಸಿದೆ.
8:03 AM, 7 May
ಮತದಾನ ಮಾಡುವಂತೆ ಮನವಿ
ಮತದಾನದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಎಲ್ಲರೂ ಮತದಾನ ಮಾಡಬೇಕು ಎಂದು ದೇಶದ ಜನರಿಗೆ ಮನವಿ ಮಾಡಿದರು. ಮತದಾನ ಮಾಡುವುದು ಎಲ್ಲರ ಕರ್ತವ್ಯ, ಎಲ್ಲರೂ ಕೂಡ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
8:05 AM, 7 May
ಮಳೆ ನಡುವೆಯೂ ಮತದಾನ
ಅಸ್ಸಾಂನ ಗುವಾಹಟಿಯಲ್ಲಿ ಕೂಡ ಮೂರನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಮಳೆಯ ನಡುವೆಯೂ ಜನ ಕೊಡೆ ಹಿಡಿದು ಮತ ಚಲಾಯಿಸಲು ಆಗಮಿಸಿದ್ದರು.
8:12 AM, 7 May
ಗಮನ ಸೆಳೆದಿರುವ ಕ್ಷೇತ್ರಗಳು
ಗುಜರಾತ್ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ವಿರುದ್ಧ ಕಾಂಗ್ರೆಸ್ನಿಂದ ಸೋನಲ್ ಪಟೇಲ್ ಸ್ಪರ್ಧೆ ಮಾಡಿದ್ದು, ಗಮನ ಸೆಳೆಯುತ್ತಿದೆ.
8:23 AM, 7 May
ಅಜಿತ್ ಪವಾರ್ ಮತದಾನ
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಬೆಳಗ್ಗೆಯೇ ಮತದಾನ ಮಾಡಿದರು. ಅಜಿತ್ ಅವರ ಪತ್ನಿ ಸುನೇತ್ರಾ ಮತ್ತು ತಾಯಿ ಬಾರಾಮತಿಯ ಕಾಟೇವಾಡಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
8:25 AM, 7 May
ಕರ್ನಾಟಕ
ಬೆಳಗ್ಗೆಯೇ ಬಿರುಸುಗೊಂಡ ಮತದಾನ
ಉತ್ತರ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನದ ಬಳಿಕ ಬಿಸಿಲು ಹೆಚ್ಚಾಗುವ ಕಾರಣ, ಜನ ಬೆಳಗ್ಗೆಯೇ ಮತ ಚಲಾಯಿಸಲು ಮುಂದಾಗಿದ್ದಾರೆ. ಹಲವು ಮತಗಟ್ಟೆಗಳಲ್ಲಿ 7 ಗಂಟೆಯಿಂದಲೇ ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.
8:28 AM, 7 May
ಮತದಾನ ಮಾಡಲು ಬಿಎಸ್ವೈ ಮನವಿ
ಎಲ್ಲ ಮತದಾರರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸುವಂತೆ ಮಾಜಿ ಸಿಎಂ, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. "ಭವ್ಯ ಭಾರತದ ಬಲಿಷ್ಠ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಕರ್ತವ್ಯವನ್ನು ನಾವೆಲ್ಲರೂ ಹೆಮ್ಮೆಯಿಂದ ನಿರ್ವಹಿಸೋಣ." ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ನನ್ನ ಆತ್ಮೀಯ ಮತದಾರ ಬಂಧುಗಳೇ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಬಹುದೊಡ್ಡ ಶಕ್ತಿ ಎಂದರೆ ಮತದಾನ. ಇದು ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು. ಇಂದು ಮತದಾನ ನಡೆಯಲಿರುವ ಕ್ಷೇತ್ರಗಳ ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸಿ. ಭವ್ಯ ಭಾರತದ ಬಲಿಷ್ಠ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ…
— B.S.Yediyurappa (Modi Ka Parivar) (@BSYBJP) May 7, 2024
8:49 AM, 7 May
ಕರ್ನಾಟಕ
ಮಂಗಳವಾರ ಅದೃಷ್ಟ ಎಂದ ಉಮೇಶ್ ಯಾದವ್
ಕಲಬುರಗಿಯ ಜಾರ್ಜ್ ಶಾಲೆಯಲ್ಲಿ ಮತ ಚಲಾಯಿಸಿದವರಲ್ಲಿ ನಾನೇ ಮೊದಲಿಗ, ಮಂಗಳವಾರ ನನಗೆ ಯಾವಾಗಲೂ ಅದೃಷ್ಟ. ಕಲಬುರಗಿಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಉಮೇಶ್ ಯಾದವ್ ಹೇಳಿದ್ದಾರೆ.
8:54 AM, 7 May
ಕನ್ನಡದಲ್ಲಿ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಕೂಡ ಟ್ವೀಟ್ ಮಾಡಿದ್ದು ಎಲ್ಲರಿಗೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿದರೆ ಚುನಾವಣೆ ಮತ್ತಷ್ಟು ರೋಮಾಂಚನಕಾರಿಯಾಗುತ್ತದೆ ಎಂದು ಹೇಳಿದರು.
ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ.