ಪಾಕ್ ಕುತಂತ್ರದ ಬಗ್ಗೆ ಮೊದಲು ಮಾಹಿತಿ ನೀಡಿದ ವ್ಯಕ್ತಿ
ದ್ರಾಸ್ (ಜಮ್ಮು ಮತ್ತು ಕಾಶ್ಮೀರ), ಜು. 23 : ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.
ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್ಇಂಡಿಯಾದ ಪ್ರತಿನಿಧಿ ರೀಚಾ ಬಾಜಪೈ ಬರೆಯುತ್ತಿದ್ದು ಈ ಸರಣಿಯ ಲೇಖನ ಇಲ್ಲಿದೆ.

ಕಾರ್ಗಿಲ್ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಹತ್ತಿರದಿಂದ ಕಂಡು ಭಾರತೀಯ ಸೇನೆಗೆ ಪ್ರಥಮವಾಗಿ ಮಾಹಿತಿ ನೀಡಿದ ವ್ಯಕ್ತಿ ತಾಶಿ ನಬಿಯಾಲ್. ಆತ ಹೇಳಿದ ಕಾರ್ಗಿಲ್ ಕಥೆಯನ್ನು ಆತನ ಬಾಯಿಯಿಂದಲೇ ಕೇಳಿ
ಸೈನ್ಯಕ್ಕೆ ಮಾಹಿತಿ ನೀಡಿದೆ:
ನನ್ನ ಕುರಿ ಕಳೆದು ಹೋಗಿತ್ತು. ಕುರಿಯನ್ನು ಹುಡುಕುತ್ತಾ ನಾನು ಬಟಾಲಿಕ್ ವಲಯದ ಬೆಟ್ಟದ ಮೇಲೆ ಬಂದೆ. ಆ ಸಂದರ್ಭದಲ್ಲಿ ಕೆಲ ಸೈನಿಕರು ಪ್ಯಾಟ್ರೋಲಿಂಗ್ ಮಾಡುತ್ತಿರುವುದು ಗಮನಿಸಿದೆ. ಆದರೆ ಅವರ ಮತ್ತಷ್ಟು ಚಲನವಲನ ಗಮನಿಸಿದಾಗ ಅವರ ಚಟುವಟಿಕೆಯ ಬಗ್ಗೆ ಅನುಮಾನ ಮೂಡತೊಡಗಿತು. ಭಾರತೀಯ ಸೈನಿಕರ ಪ್ಯಾಟ್ರೋಲಿಂಗ್ನ್ನು ಗಮನಿಸಿದ್ದೇನೆ. ಆದರೆ ಇಲ್ಲಿ ಕೆಲವರು ಕದ್ದು ಮುಚ್ಚಿ ಕಲ್ಲನ್ನು ಓಡೆಯುತ್ತಿದ್ದರು. ಈ ದೃಶ್ಯ ನೋಡುತ್ತಿದ್ದಂತೆ ಇದು ಪಾಕಿಸ್ತಾನದ ಸೇನೆಯವರು ಏನೋ ಮಾಡಲು ಸಂಚು ರೂಪಿಸಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂತು.
ಈ ದೃಶ್ಯ ನೋಡಿದ ಕೂಡಲೇ ನಾನು ಸೈನ್ಯದ ಕ್ಯಾಂಪ್ ಇರುವ ಸುರಾ ರಿವಾಲೆಟ್(Surah rivulet) ಪ್ರದೇಶಕ್ಕೆ ತೆರಳಿ ಹವಾಲ್ದಾರ್ ನಂದು ಸಿಂಗ್ ಅವರಲ್ಲಿ ವಿಚಾರ ತಿಳಿಸಿದೆ. ಈ ಬಗ್ಗೆ ಅವರು ಮತ್ತು ಇಬ್ಬರು ಮಿಲಿಟರಿ ಅಧಿಕಾರಿಗಳು ನನ್ನನ್ನು ಮತ್ತಷ್ಟು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಏನೋ ಅಪಾಯವಿದೆ ಎನ್ನುವುದನ್ನು ಅರಿತ ಅವರು ಸೈನಿಕರಿಗೆ ನಾನು ಹೇಳಿದ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆದೇಶ ನೀಡಿದರು.
ಕೂಡಲೇ 25 ಸೈನಿಕರು ನಾನು ತಿಳಿಸಿದ ಪ್ರದೇಶಕ್ಕೆ ಪ್ಯಾಟ್ರೋಲಿಂಗ್ಗೆ ತೆರಳಿದರು. ಕೆಲ ಸಮಯದ ಬಳಿಕ ಅವರು ಮರಳಿ ಹಿರಿಯ ಅಧಿಕಾರಿಗಳಿಗೆ ಆ ಪ್ರದೇಶದಲ್ಲಿ ಅಹಿತಕರ ಘಟನೆ ಏನೂ ನಡೆಯುತ್ತಿಲ್ಲ ಎಂದು ಮಾಹಿತಿ ನೀಡಿದರು.
ಇದಾದ ಬಳಿಕ ಹವಾಲ್ದಾರ್ ನನ್ನನ್ನು ಮನೆಗೆ ಕಳುಹಿಸಿದರು ಜೊತೆಗೆ ಪಾಕಿಸ್ತಾನದ ಸೈನಿಕರ ಚಲನವಲನ ಕಂಡಲ್ಲಿ ಮಾಹಿತಿ ನೀಡುವಂತೆ ಹೇಳಿದರು.
ಎಂಟು ದಿನದ ಬಳಿಕ ಯುದ್ದ:
ತಾಶಿ ನಬಿಯಾಲ್ ಪಾಕ್ ಸೇನೆಯ ಕುತಂತ್ರದ ಬಗ್ಗೆ ಮಾಹಿತಿ ನೀಡಿದ ಮರುದಿನ ಭಾರತೀಯ ಸೇನೆಗೆ ಬಟಾಲಿಕ್ ವಲಯದ ಎತ್ತರದಲ್ಲಿ ಪಾಕ್ ಸೇನೆ ಇರುವುದು ಖಚಿತವಾಯಿತು. ಈ ಸಂದರ್ಭದಲ್ಲಿ ಕಾರ್ಗಿಲ್ ಪ್ರದೇಶದಲ್ಲಿ ಸಂವಹನ ನಡೆಸುವುದು ಸಹ ಕಷ್ಟವಾಗಿತ್ತು. ಆದರೂ ಸೇನೆಯ ಅಧಿಕಾರಿಗಳು ತಮ್ಮ ವೈರ್ಲೆಸ್ ಸಾಧನದ ಮೂಲಕ ಪಾಕ್ ದೇಶದ ಗಡಿ ದಾಟಿ ಬಂದ ವಿಚಾರವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಇದಾದ ಎಂಟು ದಿನದ ಬಳಿಕ ಕಾರ್ಗಿಲ್ ಯುದ್ದ ಆರಂಭವಾಯಿತು.
ಇದನ್ನೂ ಓದಿ: 'ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ಜವಾನ ತಡೆಗಟ್ಟಿದ್ದ'












Click it and Unblock the Notifications