ಬೈನಾ ಕಡಲತೀರದ ಕನ್ನಡಿಗರಿಗೆ ಸಾಂತ್ವನ ಹೇಳಿದ ಸೂಲಿಬೆಲೆ
ಕಾರವಾರ, ಸೆಪ್ಟೆಂಬರ್ 29 : ಗೋವಾದ ಬೈನಾ ಕಡಲತೀರದಲ್ಲಿ ಕನ್ನಡಿಗರ ಮನೆ ತೆರವು ಮಾಡಿರುವ ಸ್ಥಳಕ್ಕೆ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಕನ್ನಡಿಗರಿಗೆ ಸಾಂತ್ವನ ಹೇಳಿದರು.
ಶುಕ್ರವಾರ ಬೆಳಗ್ಗೆ ಬೈನಾ ಕಡಲ ತೀರಕ್ಕೆ ಭೇಟಿ ನೀಡಿದ ಚಕ್ರವರ್ತಿ ಸೂಲಿಬೆಲೆ ಅವರು, ಗೋವಾ ಸರ್ಕಾರದ ನಡೆಯನ್ನು ಖಂಡಿಸಿದರು. 'ಮನೋಹರ್ ಪಾರಿಕ್ಕರ್ ಅವರಿಗೆ ಪತ್ರ ಈ ಕುರಿತು ಬರೆಯುತ್ತೇನೆ. ರಾಜ್ಯಾದ್ಯಂತ ಈ ಕುರಿತು ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತೇನೆ' ಎಂದರು.

'ಗೋವಾ ಸರ್ಕಾರ ಕಡಲತೀರದಲ್ಲಿ ಮನೆ ಮಾಡಿಕೊಂಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕನ್ನಡಿಗರ ಮನೆಗಳನ್ನು ತೆರವು ಮಾಡಿರುವುದು ಅಮಾನವೀಯ. ಕಡಲತೀರದಲ್ಲಿ ಹೋಟೆಲ್, ರೆಸ್ಟೋರೆಂಟ್, ಮಳಿಗೆ ನಿರ್ಮಾಣಕ್ಕಾಗಿ ಪುನರ್ವಸತಿ ಕಲ್ಪಿಸದೇ ಕನ್ನಡಿಗರನ್ನು ಬೀದಿಗೆ ತಳ್ಳಿರುವುದು ಖಂಡನಾರ್ಹ' ಎಂದರು.
ಬೈನಾ ಕಡಲ ತೀರದ ಕನ್ನಡಿಗರೊಬ್ಬರು ಮಾತನಾಡಿ, 'ಕರ್ನಾಟಕದಲ್ಲಿ ಲಿಂಗಾಯತ, ವೀರಶೈವ ಅಂತ ಜಗಳ ಆಡಿಕೊಳ್ಳುತ್ತಾರೆ. ಆದರೆ, ನಾವು ಬೈನಾದಲ್ಲಿ ಎಲ್ಲರೂ ಒಟ್ಟಿಗೆ ಸೇರಿ, ಬಸವಣ್ಣನ ಜಾತ್ರೆ ಮಾಡುತ್ತಿದ್ದೆವು. ಆದರೀಗ ಗೋವಾ ಸರ್ಕಾರ ನಮ್ಮ ಬಸವಣ್ಣನ ಗುಡಿಯನ್ನೇ ಧ್ವಂಸ ಮಾಡಿದೆ. ಕರ್ನಾಟಕ ಸರ್ಕಾರ ನಮ್ಮ ನೆರವಿಗೆ ಬರಬೇಕು' ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಪತ್ರ : ಬೈನಾ ಬೀಚ್ನಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಬಡ ಕುಟುಂಬಗಳಿಗೆ ಪುರ್ನವಸತಿ ಕಲ್ಪಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications