ಕಂಗನಾ ಸ್ವಲ್ಪ ಇತಿಹಾಸವನ್ನು ಓದಿ ತಿಳಿಯಬೇಕು: ಶಶಿ ತರೂರ್ ಟಾಂಗ್
ನವದೆಹಲಿ, ನವೆಂಬರ್ 18: ಭಾರತಕ್ಕೆ 1947 ರಲ್ಲಿ ದೊರೆತಿರುವ ಸ್ವಾತಂತ್ರ್ಯ ಭಿಕ್ಷೆ ಎಂಬ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿಯನ್ನು ಮುಂದುವರಿಸಿದೆ. ಈ ನಡುವೆ ಕಂಗನಾ ರಣಾವತ್ ಕಾಲೆಳೆದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, "ಕಂಗನಾ ಸ್ವಲ್ಪ ಇತಿಹಾಸವನ್ನು ಓದಬೇಕು," ಎಂದು ಟಾಂಗ್ ನೀಡಿದ್ದಾರೆ.
ಕೇರಳದ ಸಂಸದರು, ಮಾಜಿ ಕೇಂದ್ರ ಸಚಿವರು ಆದ ಶಶಿ ತರೂರ್ ಮಾಧ್ಯಮದೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಂಗನಾ ರಣಾವತ್ ಹೇಳಿಕೆಯು "ಹಾಸ್ಯಾಸ್ಪದ" ಎಂದು ಹೇಳಿದ್ದಾರೆ. "ಆಕೆ ಸ್ವಲ್ಪ ಇತಿಹಾಸವನ್ನು ಓದಿ ತಿಳಿದು ಕೊಳ್ಳಬೇಕು ಎಂದು ನನಗೆ ಅನಿಸುತ್ತದೆ," ಎಂದು ಕೂಡಾ ತರೂರ್ ಹೇಳಿದ್ದಾರೆ.
"ಇನ್ನೊಂದು ಕೆನ್ನೆ ತಿರುಗಿಸಲು ಧೈರ್ಯ ಬೇಕು: ಕಂಗನಾ ವಿರುದ್ಧ ತುಷಾರ್ ಗಾಂಧಿ ವಾಗ್ದಾಳಿ
"ಇತಿಹಾಸದ ಬಗ್ಗೆ ಯಾವುದೇ ಸುಳಿವು ಕೂಡಾ ಆಕೆಗೆ ಇಲ್ಲ ಎಂದು ನನಗೆ ಅನಿಸುತ್ತಿದೆ. ಅಪಾರವಾದ ಹೆಮ್ಮೆ ಹಾಗೂ ಘನತೆಯೊಂದಿಗೆ ಜೀವಿಸಿದ ಮಹಾತ್ಮ ಗಾಂಧಿಜಿಯವರು ಬ್ರಿಟಿಷರಲ್ಲಿ ಸ್ವಾತಂತ್ರ್ಯದ ಭಿಕ್ಷೆ ಬೇಡಿದ್ದಾರೆ ಎಂದು ನಿಜವಾಗಿಯೂ ಕಂಗನಾ ರಣಾವತ್ಗೆ ಅನಿಸಿದ್ದರೆ, ಆಕೆಯ ಹೇಳಿಕೆ ಹಾಸ್ಯಾಸ್ಪದ," ಎಂದಿದ್ದಾರೆ.
"ಬ್ರಿಟಿಷರ ಬಳಿ ನಿಮ್ಮ ಕಾನೂನಿನಲ್ಲಿ ನ್ಯಾಯವಿಲ್ಲ, ನಾನು ನಿಮ್ಮ ಕಾನೂನನ್ನು ಉಲ್ಲಂಘನೆ ಮಾಡುತ್ತೇನೆ. ನಿಮ್ಮ ಇಚ್ಛೆಯಂತೆ ನನಗೆ ಶಿಕ್ಷೆ ಕೊಡಿ. ನಾನು ನಿಮ್ಮ ಶಿಕ್ಷೆಯನ್ನು ಎದುರಿಸುತ್ತೇನೆ ಎಂದು ಅಪಾರವಾದ ಹೆಮ್ಮೆ ಮತ್ತು ಘನತೆಯ ವ್ಯಕ್ತಿಯಾಗಿದ್ದ ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಅದು ಭಿಕ್ಷುಕನ ಕೃತ್ಯವೇ," ಎಂದು ಕೂಡಾ ಶಶಿ ತರೂರ್ ಪ್ರಶ್ನೆ ಮಾಡಿದ್ದಾರೆ.
ಸ್ವಾತಂತ್ರ್ಯ ಚಳುವಳಿಯ ಬಗ್ಗೆ ವಿವರಿಸಿದ ಶಶಿ ತರೂರ್
"ನನ್ನ ಪ್ರಕಾರ ಬ್ರಿಟಿಷರಿಂದ ಭಿಕ್ಷೆ ಬೇಡಿ ಪಡೆಯಲಾಗಿದೆ ಎಂದು ಆಕೆ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಹೇಳುವುದು ಹಾಸ್ಯಾಸ್ಪದ. ವಾಸ್ತಾವವಾಗಿ ಒಂದು ದೇಶದ ಸ್ವಾತಂತ್ರ್ಯ ಚಳುವಳಿಯು ಪ್ರಚಂಡ ಧೈರ್ಯ, ನೈತಿಕ ನಿಷ್ಠೆ ಆಗಿದೆ. ಹಾಗೆಯೇ ಇದು ಮಹಾನ್ ಸ್ಥೈರ್ಯ. ಸ್ವಾತಂತ್ರ್ಯ ಎಂಬುವುದು ಜನರಿಗೆ ಬೇಕಾದ ಶಕ್ತಿಯಾಗಿದೆ. ರಕ್ಷಣೆಯಿಲ್ಲದೆಯೇ ನೀವು ಹೋರಾಟಕ್ಕೆ ಇಳಿದು ನಿಮ್ಮ ಮೇಲೆ ಲಾಠಿಗಳ ಪ್ರಹಾರ ಆಗುವುದನ್ನು ನೀವು ನೆನಪಿಸಿಕೊಳ್ಳಿ. ಲಾಲಾ ಲಜಪತ್ ರಾಯ್ ಅವರು ಲಾಠಿ ಚಾರ್ಜ್ನಿಂದ ಸತ್ತರು. ಅಹಿಂಸಾತ್ಮಕವಾಗಿ ಅವರ ತಲೆಗೆ ಹೊಡೆದಿದ್ದಾರೆ. ಗುಂಡುಗಳನ್ನು ಕೂಡಾ ಹಾರಿಸಲಾಗುತ್ತಿತ್ತು. ಅಂತಹ ಸ್ವಾತಂತ್ರ್ಯ ಹೋರಾಟ ನಡೆದಿದೆ," ಎಂದು ಕೂಡಾ ಶಶಿ ತರೂರ್ ಉಲ್ಲೇಖ ಮಾಡಿದ್ದಾರೆ.
ಕಂಗನಾ ಪದ್ಮಶ್ರೀ ಹಿಂಪಡೆಯಿರಿ: ರಾಷ್ಟ್ರಪತಿಗೆ ಪತ್ರ ಬರೆದ ಮಹಿಳಾ ಆಯೋಗ
"ಕಂಗನಾ ರಣಾವತ್ ನಿಜವಾಗಿಯೂ ತಮ್ಮ ಇತಿಹಾಸವನ್ನು ಓದಬೇಕು ಎಂದು ನನಗೆ ಅನಿಸುತ್ತದೆ. ಜೈಲಿನಿಂದ ಬಿಡುಗಡೆ ಮಾಡಲು ಬೇಡಿಕೊಂಡವರನ್ನು ನೀವು ವೀರ ಎಂದು ಕರೆಯುತ್ತೀರಿ. ಆದರೆ ನಿಜವಾಗಿ ನಮ್ಮ ವೀರರು ಜೈಲಿನಲ್ಲಿ ಅಧಿಕ ಸಮಯ ಯಾವುದೇ ಬಿಡುಗಡೆಯನ್ನು ಬೇಡದೆ ಇದ್ದವು," ಎಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧಿಯವರ ಅಹಿಂಸಾ ತತ್ವವನ್ನು ಅಣಕಿಸಿದ ಕಂಗನಾ
ಕಂಗನಾ ರಣಾವತ್ಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಈಗಾಗಲೇ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಕಂಗನಾ ರಣಾವತ್ ಈ ಪ್ರಶಸ್ತಿ ಪ್ರಧಾನದ ಬೆನ್ನಲ್ಲೇ 1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸಿಕ್ಕಿದ್ದು ಸ್ವಾತಂತ್ರವಲ್ಲ ಭಿಕ್ಷೆ ಎಂದು ಹೇಳಿದ್ದರು. ಇದಾದ ಬಳಿಕ ನಿನ್ನಯಷ್ಟೇ ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವವನ್ನು ಅಣಕಿಸಿದ್ದಾರೆ. ತನ್ನ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಿನ್ನೆ ಇನ್ಸ್ಸ್ಟಾಗ್ರಾಂನಲ್ಲಿ ಸರಣಿ ಪೋಸ್ಟ್ ಮಾಡಿರುವ ಕಂಗನಾ ರಣಾವತ್, "ಗಾಂಧಿಜಿ ಅವರು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ಗೆ ಬೆಂಬಲವೇ ನೀಡಿಲ್ಲ. ಗಾಂಧಿಜಿ ಹೇಳುವ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ತೋರಿಸು ಎಂಬ ತತ್ವವನ್ನು ಅನುಸರಿಸಿದರೆ ನಿಮಗೆ ಸ್ವಾತಂತ್ರ್ಯ ದೊರಕುವುದಿಲ್ಲ. ಭಿಕ್ಷೆ ಮಾತ್ರ ಸಿದುತ್ತದೆ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)