'ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂದು ಮಂಡಿಸಿದ್ದು ವಂಚನೆ'
ನವದೆಹಲಿ, ಸೆಪ್ಟೆಂಬರ್ 26: ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂಬಂತೆ ಮಂಡಿಸಿದ್ದು ಸಂವಿಧಾನಕ್ಕೆ ಮಾಡಿದ ವಂಚನೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಮೂರ್ತಿ ಸಿಕ್ರಿ ಅವರು ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಭಾರತದ ಒಟ್ಟಾರೆ ಅನುದಾನದಿಂದ ಪಡೆಯುವ ಸವಲತ್ತಿಗೆ ಮಾತ್ರ ಇದನ್ನು ಅನ್ವಯ ಮಾಡಬಹುದು ಎಂದಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್, ಅನುಚ್ಛೇದ 110ರಲ್ಲಿ ಹಣಕಾಸು ಮಸೂದೆಗೆ ಕೆಲ ನಿರ್ದಿಷ್ಟ ಆಧಾರ ಇದೆ. ಆದರೆ ಆಧಾರ್ ಕಾನೂನು ಇದರ ಆಚೆಗೆ ಇದೆ. ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ತಂದರೆ ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಆಗುತ್ತದೆ. ಆದರೆ ಇದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟಕ್ಕೆ ರಾಜ್ಯ ಸಭೆಯಲ್ಲಿ ಬಹುಮತವಿಲ್ಲ. ಹಣಕಾಸು ಮಸೂದೆ ಎಂದು ಮಂಡಿಸಿದರೆ ಅದಕ್ಕೆ ರಾಜ್ಯ ಸಭೆಯಲ್ಲಿ ಒಪ್ಪಿಗೆ ಪಡೆಯುವ ಅಗತ್ಯ ಬರುವುದಿಲ್ಲ ಎಂದು ಹೀಗೆ ಮಾಡಲಾಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ಆಧಾರ್ ಕುರಿತಾದ ತೀರ್ಪಿನಲ್ಲಿ ಚಂದ್ರಚೂಡ್ ಅವರು ಮಾತ್ರ ಭಿನ್ನವಾದ ಅಭಿಪ್ರಾಯ ಹೊಂದಿದ್ದಾರೆ. ಆಧಾರ್ ನ ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ತನ್ನ ತೀರ್ಪಿನಲ್ಲಿ ತಿಳಿಸಿದರೂ ಹಲವು ಯೋಜನೆಗಳಿಗೆ ಆಧಾರ್ ಬೇಕೆಂದು ಸೂಚಿಸಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಮ್.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ರನ್ನು ಒಳಗೊಂಡ ಪೀಠವು ತೀರ್ಪು ನೀಡಿದೆ.












Click it and Unblock the Notifications