Jharkhand Election 2024: 'ಈಗ ಬಂದಿದ್ದಾರೆ ಭರವಸೆ ಕೊಡಲು.. ಇಷ್ಟು ದಿನ ಏನ್ ಮಾಡಿದ್ರಿ...?' ಜಾರ್ಖಂಡ್ ಮತದಾರರ ಪ್ರಶ್ನೆ..
ರಾಂಚಿ ನವೆಂಬರ್ 8: ಜಾರ್ಖಂಡ್ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಜನ ತಮ್ಮ ಮನದಾಳದ ಮಾತಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಸರ್ಕಾರವನ್ನು ಹಾಡಿ ಹೊಗಳಿದರೆ ಇನ್ನೂ ಕೆಲವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಹಾಗಾದರೆ ಸರ್ಕಾರದಿಂದ ಜನರಿಗೆ ಇರುವ ನಿರೀಕ್ಷೆಗಳು ಏನು ಎಂದು ತಿಳಿಯೋಣ.
ಜಾರ್ಖಂಡ್ ರಾಜಧಾನಿ ರಾಂಚಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಮಂದರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಂಡರಾ ಪ್ರದೇಶದ ಜನರು ಈ ಚುನಾವಣೆಯಲ್ಲಿ ಕೆಲವು ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಕೋಪಗೊಂಡಿದ್ದಾರೆ. ಚುನಾವಣೆ ವೇಳೆಯಲ್ಲಿ ಮಾತ್ರ ಸರ್ಕಾರ ವಿಭಿನ್ನ ಹಾಗೂ ಆಕರ್ಷಕ ಯೋಜನೆಗಳನ್ನು ತರುತ್ತದೆ. ಕಳೆದ 10-15 ವರ್ಷಗಳಿಂದ ಏನು ಮಾಡುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದು ಕೆಲವರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಮಂದರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತನಾಡಿದ ಕೋಕಿಲಾ ದೇವಿ, ಸರಕಾರ ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಿದೆ. ನಾನು ಈ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. ವಾಸ್ತವವಾಗಿ ಹಿಂದಿನ ಎಲ್ಲ ಸರಕಾರಗಳು ನಮ್ಮನ್ನು ಮೂರ್ಖರನ್ನಾಗಿಸಿವೆ. ಚುನಾವಣೆ ವೇಳೆಗಷ್ಟೇ ಪ್ರಣಾಳಿಕೆ ಬಿಡುಗಡೆ ಮಾಡಿ ಅದು ಮಾಡುತ್ತೇನೆ ಇದು ಮಾಡುತ್ತೇನೆ ಎನ್ನುತ್ತಾರೆ. ನೀವು ಇಷ್ಟು ವರ್ಷಗಳ ಕಾಲ ಆಡಳಿತ ನಡೆಸುತ್ತಿರುವುದರಿಂದ ಆ ಸಮಯದಲ್ಲಿ ಈ ಎಲ್ಲ ಕೆಲಸಗಳನ್ನು ಏಕೆ ಮಾಡಲಿಲ್ಲ ಎಂದು ಕೇಳಿದ್ದಾರೆ.
ಅಧ್ಯಯನ ಮತ್ತು ಉದ್ಯೋಗಗಳಿಗಾಗಿ ವಲಸೆ
ಪ್ರದೀಪ್ ಎಂಬುವವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿ, 'ಜಾರ್ಝಂಡ್ನಲ್ಲಿ ಶಿಕ್ಷಣ ತುಂಬಾ ದುಬಾರಿಯಾಗಿದೆ. ಉದ್ಯೋಗದಲ್ಲಿರುವ ನಮ್ಮಂತಹವರು ಯೋಚಿಸಬೇಕಾಗಿದೆ. ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಾಂಚಿಯಿಂದ ಹೊರಗೆ ಹೋಗಬೇಕು, ಏಕೆ? ರಾಂಚಿಯಲ್ಲಿ ಇಷ್ಟೊಂದು ನಿಧಿ, ಜಾರ್ಖಂಡ್ನಲ್ಲಿ ಇಷ್ಟೊಂದು ಖನಿಜ ಇರುವಾಗ ಅದನ್ನು ಏಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇಲ್ಲಿನ ಜನರಿಗೆ ಉತ್ತಮ ಉದ್ಯೋಗಾವಕಾಶ ಯಾಕೆ ಸಿಗುತ್ತಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ.

'ಎಲ್ಲರೂ ರಾಜಕಾರಣಿಗಳು ಅಂಥವರೇ...'
ಇದೇ ವೇಳೆ ಕೂಲಿ ಕಾರ್ಮಿಕ ಮುಖೇಶ್ ಮಾತನಾಡಿ, 'ನಾನು ಪ್ರತಿದಿನ ದುಡಿದು ತಿನ್ನುತ್ತೇನೆ. ಅನೇಕ ಬಾರಿ ಬರಿಗೈಯಲ್ಲಿ ಹಿಂತಿರುಗಬೇಕಾದ ಸ್ಥಿತಿ ಎದುರಾಗುತ್ತದೆ. ಈಗ ನನಗೆ ಮತ ಹಾಕಲು ಕೂಡ ಮನಸ್ಸಾಗುತ್ತಿಲ್ಲ. ಅಷ್ಟಕ್ಕೂ ನಾನು ಯಾರಿಗೆ ಮತ ಹಾಕಬೇಕು? ಪ್ರತಿಯೊಂದು ಸರ್ಕಾರವೂ ಒಂದೇ ರೀತಿಯದ್ದು. ಚುನಾವಣೆ ಸಂದರ್ಭದಲ್ಲಿ ಒಂದಿಲ್ಲೊಂದು ಭರವಸೆ ನೀಡಿ ನಂತರ ಮರೆತು ಬಿಡುತ್ತಾರೆ. ಹೀಗಿರುವಾಗ ನಮ್ಮ ಮತದಿಂದ ಏನು ಪ್ರಯೋಜನ?' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಸರಕಾರ!
ಜೊತೆಗೆ ನಿಧಿ ಎಂಬ ಮಹಿಳೆ ಮಾತನಾಡುತ್ತಾ, ಇದುವರೆಗಿನ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಏನನ್ನೂ ಮಾಡಿಲ್ಲ. ನೀವು ಅಲ್ಲಿಗೆ ಹೋಗಿ ಸರ್ಕಾರಿ ಶಾಲೆಗಳ ಸ್ಥಿತಿ ನೋಡಿ. ತುಂಬಾ ಕೆಟ್ಟು ಹೋಗಿದೆ ಶಿಕ್ಷಣ ವ್ಯವಸ್ಥೆ. ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲೇ ಜಾರ್ಖಂಡ್ನಲ್ಲೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರಬೇಕು, ಮಕ್ಕಳು ಇರಬೇಕು, ಮಧ್ಯಾಹ್ನದ ಊಟ ನೀಡಬೇಕು, ಪಠ್ಯಕ್ರಮ ಪೂರ್ಣವಾಗಿರಬೇಕು ಮತ್ತು ಪರೀಕ್ಷೆಗಳು ಪೂರ್ಣಗೊಳ್ಳಬೇಕು. ಈ ಎಲ್ಲಾ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸಬೇಕು. ಆದರೆ ಇದೆಲ್ಲ ಎಲ್ಲಿ ನಡೆಯುತ್ತದೆ? ಸರ್ಕಾರಿ ಶಾಲೆ ಸುಸ್ಥಿತಿಯಲ್ಲಿದ್ದರೆ ಇಷ್ಟೊಂದು ತೊಂದರೆ ಅನುಭವಿಸಬೇಕಾಗುತ್ತಿರಲಿಲ್ಲ ಎಂದು ಕಿಡಿ ಕಾರಿದರು.
ಪ್ರಸ್ತುತ ಕಾಂಗ್ರೆಸ್ನ ಶಿಲ್ಪಿ ನೇಹಾ ಟಿರ್ಕಿ ಮಂದರ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಇವರು 2022ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2019 ರಲ್ಲಿ ನಡೆದ ಚುನಾವಣೆಯಲ್ಲಿ ಜೆವಿಎಂ (ಪಿ) ನ ಬಂಧು ಟಿರ್ಕಿ ಗೆದ್ದಿದ್ದರು. 2024 ರ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಮಾತನಾಡುವುದಾದರೆ, ಬಿಜೆಪಿಯು ಸನ್ನಿ ಟೊಪ್ಪೊ ಅವರನ್ನು ಕಣಕ್ಕಿಳಿಸಿದೆ. ಕೀರ್ತಿ ಸಿಂಗ್ ಮುಂಡಾ ಸಿಪಿಐ ಅಭ್ಯರ್ಥಿ ಮತ್ತು ಶಿಲ್ಪಿ ನೇಹಾ ತುರ್ಕಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications