ಕೋರ್ಟಿನೊಳಗೆ ನುಗ್ಗಲು ಜಯಾ ಬೆಂಬಲಿಗರು ಮಾಡಿದ್ದೇನು?
ಬೆಂಗಳೂರು, ಮೇ 11: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಇಂದು ಪ್ರಕಟಿಸಿದ್ದು, ಜಯಲಲಿತಾ ಅವರನ್ನು ಆರೋಪ ಮುಕ್ತವಾಗಿಸಿದೆ.
ಕೋರ್ಟ್ ಆವರಣದಲ್ಲಿ ಬೆಳಗ್ಗೆಯಿಂದಲೇ (ಮೇ 11) ಜಯಾಲಲಿತಾ ಅವರ ಅಪಾರ ಬೆಂಬಲಿಗರು ಜಮಾಯಿಸಿದ್ದರು. ಅಭಿಮಾನಿಗಳ ದಂಡೇ ಹರಿದು ಬರಬಹುದು ಎಂದು ಮೊದಲೇ ಅರಿತಿದ್ದ ಬೆಂಗಳೂರು ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದರು.
ಆದರೂ, ಜಯಾ ಬೆಂಬಲಿಗರು ಮತ್ತು ಪೊಲೀಸರ ನಡುವೆ ಕೋರ್ಟ್ ಒಳಗೆ ಪ್ರವೇಶಿಸುವ ವಿಚಾರದಲ್ಲಿ ನಿರಂತರ ವಾಗ್ಯುದ್ದ ನಡೆಯುತ್ತಲೇ ಇತ್ತು. (ಅಕ್ರಮ ಆಸ್ತಿ: ಜಯಾ ನಿರ್ದೋಷಿ)

ಕೋರ್ಟಿನೊಳಗೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಜಯಾ ಬೆಂಬಲಿಗರು ಹಠ ಹಿಡಿದಿದ್ದರು. 15 ವಕೀಲರನ್ನು ಕೋರ್ಟಿನೊಳಗೆ ಬಿಡುವಂತೆ ಜಯಲಲಿತಾ ಪರ ವಕೀಲರು ಮಾಡಿದ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು.
ಹೇಗಾದರೂ ಮಾಡಿ ಕೋರ್ಟ್ ಕಲಾಪ ನಡೆಯುವ ಜಾಗಕ್ಕೆ ಪ್ರವೇಶಿಸಬೇಕೆಂದು ಕೆಲವು ಜಯಾ ಬೆಂಬಲಿಗರು ವಕೀಲರ ಉಡುಪಿನಲ್ಲಿ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರು. ಬಾರ್ ಕೌನ್ಸಿಲ್ ಗುರುತಿನ ಪತ್ರ ಹೊಂದಿರುವ ವಕೀಲರ ಜೊತೆ ಇವರೂ ಕೋರ್ಟ್ ಪ್ರವೇಶಿಸಲು ಮುಂದಾದರು.
ಆದರೆ ಇವರು ತಮ್ಮೊಳಗೆ ಮಾತನಾಡಿಕೊಂಡು, ಮಂತ್ರ ಜಪಿಸುತ್ತಾ ಕೋರ್ಟ್ ಪ್ರವೇಶಿಸಲು ಮುಂದಾದಾಗ ಮತ್ತು ಇವರ ಚಲನವಲನ ಕಂಡು ಪೊಲೀಸರಿಗೆ ಅನುಮಾನ ಕಾಡಿತು, ಕೂಡಲೇ ಅವರನ್ನು ತಡೆದು ವಿಚಾರಣೆಗೊಳಪಡಿಸಿದರು.
ಪೊಲೀಸರ ವಿಚಾರಣೆಯ ವೇಳೆ, ನಾವು ವಕೀಲರಲ್ಲ, ಅಮ್ಮನ ಅಭಿಮಾನಿಗಳು ಎಂದು ಇವರು ತಪ್ಪೊಪ್ಪಿಕೊಂಡರು. ಕೂಡಲೇ, ಪೊಲೀಸರು ಇವರನ್ನು ಕೋರ್ಟ್ ಆವರಣದಿಂದಲೇ ಹೊರಗಟ್ಟಿದರು.












Click it and Unblock the Notifications