ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ: ಕಾರಣ ತಿಳಿಸಿದ ರಾಹುಲ್ ಗಾಂಧಿ
ಮುಂಬೈ, ಆಗಸ್ಟ್ 01: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಮುಂಬೈನಲ್ಲಿ ನಡೆದಿರುವ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಮೂರನೇ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸುವುದು ಅಸಾಧ್ಯವಾಗಿದೆ. ಭಾರತದ ಜನಸಂಖ್ಯೆಯ ಶೇ 60 ರಷ್ಟು ಜನರು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಪರವಾಗಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈಗ ನಾವು ಬಿಜೆಪಿ ವಿರುದ್ಧ ಅತ್ಯಂತ ಸಮರ್ಥ ರೀತಿಯಲ್ಲಿ ಒಂದಾಗಬೇಕಿದೆ. ಈ ನಿಟ್ಟಿನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ಮಾಡಬೇಕಿದೆ. ಸಮನ್ವಯ ಸಮಿತಿ ರಚನೆ ಹಾಗೂ ಸೀಟು ಹಂಚಿಕೆ ವಿಚಾರವಾಗಿ ಆದಷ್ಟು ಬೇಗನೇ ತೀರ್ಮಾಣ ತೆಗೆದುಕೊಳ್ಳಬೇಕಿದೆ ಎಂದು ರಾಹುಲ್ ಹೇಳಿದರು.
ಇವು ಎರಡು ಪ್ರಮುಖ ಹಂತಗಳಾಗಿವೆ. ಇದರಲ್ಲಿ ನಾವು ಸಫಲಗೊಂಡರೆ ಬಿಜೆಪಿಯನ್ನು ನಿರಾಯಾಸವಾಗಿ ಸೋಲಿಸಬಹುದು ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, 'ಬಡವರಿಂದ ಹಣ ಪಡೆದು ಅದನ್ನು ಕೆಲವರಿಗೆ ವರ್ಗಾಯಿಸುವುದು ಪ್ರಧಾನಿ ಮೋದಿ ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ನಾವು ಮತ್ತೊಮ್ಮೆ ಬಡವರನ್ನು ಒಳಗೊಳ್ಳುವ ಸರ್ಕಾರವನ್ನು ರಚಿಸಬೇಕಿದೆ. ಅಭಿವೃದ್ಧಿ ಮಾರ್ಗವೇ ನಮ್ಮ ಸ್ಪಷ್ಟ ಮಾರ್ಗವಾಗಬೇಕಿದೆ. ಈ ಆಲೋಚನೆಗಳನ್ನು ಇಟ್ಟುಕೊಂಡು ನಾವು ಮುನ್ನೆಡೆಯಬೇಕೆದೆ ಎಂದು ರಾಹುಲ್ ಹೇಳಿದರು.
'ನನಗಿಂತ ಹೆಚ್ಚು ಹಿರಿಯ ನಾಯಕರು ಇಲ್ಲಿ ಇದ್ದಾರೆ. ಈ ಮೈತ್ರಿಕೂಟದ ನಾಯಕರ ನಡುವೆ ಬೆಸೆದುಕೊಂಡಿರುವ ಸಂಬಂಧಗಳು ಹೆಚ್ಚು ಆಳವಾಗಿವೆ. ಈ ಸಭೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿವೆ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ' ಎಂದು ಅವರು ಹೇಳಿದರು.

ಇಲ್ಲಿ ಸೇರಿರುವ ಎಲ್ಲಾ ನಾಯಕರ ನಮ್ರತೆ ನನಗೆ ಇಷ್ಟವಾಗಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅವುಗಳನ್ನು ಈಗ ಕಡಿಮೆ ಮಾಡಲಾಗಿದೆ. ಈ ಪ್ರಕ್ರಿಯೆಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದೇ ವೇಳೆ, ಚೀನಾ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, 'ನಾನು ಲಡಾಖ್ನಲ್ಲಿ ಒಂದು ವಾರ ಕಳೆದಿದ್ದೇನೆ. ನಾನು ಚೀನಿಯರು ಇರುವ ಸ್ಥಳದ ಹತ್ತಿರದಲ್ಲೇ ಇರುವ ಪಾಂಗಾಂಗ್ ಸರೋವರಕ್ಕೆ ಹೋಗಿದ್ದೆ. ಅಲ್ಲಿ ನಾನು ಚರ್ಚೆಯನ್ನು ನಡೆಸಿದ್ದೇನೆ. ಬಹುಶಃ ಲಡಾಖ್ನ ಹೊರಗಿನ ಯಾವುದೇ ರಾಜಕಾರಣಿ ಲಡಾಖ್ನ ಜನರೊಂದಿಗೆ ನಡೆಸಿದ ಅತ್ಯಂತ ಆಲವಾದ ಚರ್ಚೆ ಅದಾಗಿತ್ತು' ಎಂದು ಹೇಳಿದರು.
'ಪ್ಯಾಂಗೊಂಗ್ ಸರೋವರದ ಸುತ್ತಮುತ್ತ ವಾಸಿಸುವ ಜನರು ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಖಡಾಖಂಡಿತವಾಗಿ ಹೇಳಿದರು. ಚೀನಾ ಭಾರತದ ಭೂಮಿಯನ್ನು ತೆಗೆದುಕೊಂಡಿಲ್ಲ ಎಂದು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂಬುದಾಗಿ ಅವರು ನನಗೆ ಸ್ಪಷ್ಟವಾಗಿ ಹೇಳಿದರು. ಲಡಾಖ್ನಲ್ಲಿ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ' ಎಂದು ಅವರು ಹೇಳಿದರು.












Click it and Unblock the Notifications