ಇಂದ್ರಾಣಿ ಅರ್ಜಿ ಪುರಸ್ಕರಿಸಿದ ಕೋರ್ಟ್: ಚಿದಂಬರಂ ಬಂಧನ ಸನ್ನಿಹಿತ?
ನವದೆಹಲಿ, ಜುಲೈ 5: ಐಎನ್ಎಕ್ಸ್ ಮಿಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಪುತ್ರ, ಸಂಸದ ಕಾರ್ತಿ ಚಿದಂಬರಂ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಐಎನ್ಎಕ್ಸ್ ಮೀಡಿಯಾ ಮಾಲೀಕರಾದ, ಈಗ ಜೈಲಿನಲ್ಲಿರುವ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ, ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಸಿಬಿಐ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.
ಸದ್ಯ ಮುಂಬೈನ ಬೈಕುಲ್ಲಾ ಜೈಲಿನಲ್ಲಿರುವ ಇಂದ್ರಾಣಿ ಈ ಹಿಂದೆಯೂ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದರು. ಕೆಲವೊಂದು ಗೌಪ್ಯ ವಿಚಾರ ಬಹಿರಂಗಗೊಳ್ಳುವ ಸಾಧ್ಯತೆ ಇದ್ದು, ತನಿಖೆಯನ್ನು ಬೇಗ ಮುಕ್ತಾಯಗೊಳಿಸಬಹುದು. ಹಾಗಾಗಿ ಅನುಮತಿ ನೀಡಬೇಕೆಂದು ಸಿಬಿಐ ಕೂಡಾ ಕೋರ್ಟಿಗೆ ಮನವಿ ಮಾಡಿತ್ತು.

ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಜುಲೈ 11ಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಮುಂದೂಡಿದೆ. ಈ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿಯ ಹೇಳಿಕೆಯೇ ಪ್ರಮುಖವಾಗಿರುವುದರಿಂದ, ಚಿದಂಬರಂ ಮತ್ತು ಅವರ ಪುತ್ರನ ಬಂಧನವಾಗುವ ಸಾಧ್ಯತೆಯಿಲ್ಲದಿಲ್ಲ.
ಪೀಟರ್ ಮತ್ತು ಇಂದ್ರಾಣಿಯವರಿಂದ 10 ಲಕ್ಷ ರುಪಾಯಿ ಲಂಚ ಪಡೆದ ಆರೋಪ ಕಾರ್ತಿ ಚಿದಂಬರಂ ಮೇಲಿದೆ. ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡಿದ ಪ್ರಕರಣದಿಂದ ತಮ್ಮನ್ನು ಪಾರು ಮಾಡಲು ಪೀಟರ್ ಮತ್ತು ಇಂದ್ರಾಣಿ ಅವರು ಕಾರ್ತಿಗೆ ಈ ಹಣ ನೀಡಿದ್ದಾರೆ ಎನ್ನುವ ಆರೋಪವಿದೆ.
ಈ ಹಿಂದೆ, ಫೆಬ್ರವರಿ 2018ರಲ್ಲಿ ತನಿಖೆಗೆ ಸಹಕರಿಸುತ್ತಿಲ್ಲವೆಂದು ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ಚಿದಂಬರಂ ಮತ್ತು ಕಾರ್ತಿಯನ್ನು ವಿಚಾರಣೆಗೊಳಪಡಿಸಿತ್ತು.












Click it and Unblock the Notifications