ಚಿದಂಬರಂ-ಕಾರ್ತಿಗೆ ಮಧ್ಯಂತರ ರಕ್ಷಣೆ ಅವಧಿ ವಿಸ್ತರಣೆ
ನವದೆಹಲಿ, ಜುಲೈ 10: ಏರ್ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಖಾತೆ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ಬಂಧನದಿಂದ ನೀಡಲಾಗಿರುವ ಮಧ್ಯಂತರ ರಕ್ಷಣೆಯ ಅವಧಿಯನ್ನು ವಿಸ್ತರಿಸಲಾಗಿದೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಆಗಸ್ಟ್ 7ರವರೆಗೂ ಅವರನ್ನು ಬಂಧಿಸದಂತೆ ರಕ್ಷಣೆ ಒದಗಿಸಿತು. ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ಬಂಧಿಸದಂತೆ ಜುಲೈ 10ರವರೆಗೆ ಮಧ್ಯಂತರ ರಕ್ಷಣೆ ನೀಡಲಾಗಿತ್ತು.
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು (ಎಫ್ಐಪಿಬಿ) ಏರ್ಸೆಲ್ನಲ್ಲಿ ಹೂಡಿಕೆ ಮಾಡಲು ಎಂ/ಎಸ್ ಗ್ಲೋಬಲ್ ಕಮ್ಯುನಿಕೇಷನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್ಗೆ ಅನುಮೋದನೆ ನೀಡಿತ್ತು.

ಚಿದಂಬರಂ ಅವರು ತಮ್ಮ ಅಧಿಕಾರದ ಮಿತಿಯಾಚೆ 2006ರಲ್ಲಿ ಎಫ್ಐಪಿಬಿ ಅನುಮೋದನೆ ನೀಡಿದ್ದರು. ಆದರೆ ಅವರಿಗೆ 600 ಕೋಟಿವರೆಗಿನ ಯೋಜನಾ ಪ್ರಸ್ತಾವನೆಗಳಿಗೆ ಮಾತ್ರ ಅನುಮೋದನೆ ನೀಡಲು ಅಧಿಕಾರವಿತ್ತು ಎಂದು ಇಡಿ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಫೆ. 28ರಂದು ಇಂಗ್ಲೆಂಡ್ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿತ್ತು. ಸದ್ಯ, ಕಾರ್ತಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ ಐಎನ್ಎಕ್ಸ್ ಮೀಡಿಯಾಕ್ಕೆ ವಿದೇಶದಿಂದ 305 ಕೋಟಿ ದೇಣಿಗೆ ಪಡೆದುಕೊಳ್ಳಲು ಎಫ್ಐಪಿಬಿ ಅನುಮೋದನೆ ಕೊಡಿಸಲು ಕಂಪೆನಿಯಿಂದ ಹಣ ಪಡೆದ ಆರೋಪವನ್ನು ಕಾರ್ತಿ ಎದುರಿಸುತ್ತಿದ್ದಾರೆ.












Click it and Unblock the Notifications