ಅಂತರರಾಜ್ಯ ಸಂಚಾರ; ಗೃಹ ಇಲಾಖೆಯಿಂದ ಮಹತ್ವದ ಸೂಚನೆ
ನವದೆಹಲಿ, ಮೇ 04 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ನ 3ನೇ ಹಂತ ಸೋಮವಾರದಿಂದ ಜಾರಿಗೆ ಬಂದಿದೆ. ಈ ನಡುವೆ ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಗೃಹ ಇಲಾಖೆ ಅವಕಾಶವನ್ನು ನೀಡಿದೆ.
ವಿವಿಧ ರಾಜ್ಯ ಸರ್ಕಾರಗಳು ವಿಶೇಷ ರೈಲನ್ನು ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಆದ್ದರಿಂದ, ಗೃಹ ಇಲಾಖೆ ಸ್ಪಷ್ಟನೆಯೊಂದನ್ನು ನೀಡಿದೆ. ಅಂತರರಾಜ್ಯ ಸಂಚಾರ ಯಾರಿಗೆ ಮಾತ್ರ ಸೀಮಿತ ಎಂದು ಹೇಳಿದೆ.
ಗೃಹ ಇಲಾಖೆ ನೀಡಿರುವ ಸೂಚನೆಯಂತೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯತ್ರಾರ್ಥಿಗಳು, ಪ್ರವಾಸಿಗರು ಮಾತ್ರ ಅಂತರರಾಜ್ಯ ಸಂಚಾರವನ್ನು ನಡೆಸಬಹುದಾಗಿದೆ. ಬೇರೆ ಕಾರಣಗಳಿಗಾಗಿ ವಿವಿಧ ರಾಜ್ಯದಲ್ಲಿ ನೆಲೆಸಿರುವ ಇತರರು ಸಂಚಾರ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ ವಾಹನ, ತುರ್ತು ವಾಹನ ಹೊರತು ಪಡಿಸಿ ಉಳಿದ ವಾಹನಗಳು ಅಂತರರಾಜ್ಯದಲ್ಲಿ ಸಂಚಾರ ನಡೆಸಲು ಅವಕಾಶ ನೀಡಿಲ್ಲ ಎಂದು ಗೃಹ ಇಲಾಖೆ ಹೇಳಿದೆ. ಸರ್ಕಾರ ವ್ಯವಸ್ಥೆ ಮಾಡಿದ ವಾಹನದಲ್ಲಿ ಯಾರು ಹೋಗಬೇಕು ಎಂದು ಸರ್ಕಾರವೇ ತೀರ್ಮಾನ ಮಾಡಲಿದೆ.
ದೇಶಾದ್ಯಂತ ಸುಮಾರು 7 ಲಕ್ಷ ವಲಸೆ ಕಾರ್ಮಿಕರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರು ಹೊರತುಪಡಿಸಿ ಉಳಿದವರ ಸಂಚಾರಕ್ಕೆ ಅವಕಾಶವಿಲ್ಲ ಎಂದು ಗೃಹ ಇಲಾಖೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಅನುಮತಿ ನೀಡಿದೆ. ಇದಕ್ಕಾಗಿ ರಾಜ್ಯಗಳು ವಿಶೇಷ ರೈಲುಗಳು ಬೇಕು ಎಂದು ಮನವಿ ಮಾಡಬೇಕಿದೆ. ಉಳಿದಂತೆ ಪ್ರಯಾಣಿಕ ರೈಲುಗಳ ಸಂಚಾರ ಮೇ 17ರ ತನಕ ಇರುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಅಂತರರಾಜ್ಯ ಸಂಚಾರ ಬಂದ್ ಆಗಿದೆ. ಪ್ರಸ್ತುತ ಲಾಕ್ ಡೌನ್ ಮೇ 17ರ ತನಕ ವಿಸ್ತರಣೆಯಾಗಿದೆ. ಕೆಲವು ರಾಜ್ಯ ಸರ್ಕಾರಗಳು ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿವೆ.












Click it and Unblock the Notifications