ಸುಳ್ಳುಗಳನ್ನು ಬಹಿರಂಗ ಪಡಿಸುವುದು 'ಬುದ್ಧಿ ಜೀವಿ' ಗಳ ಕರ್ತವ್ಯ: ಸುಪ್ರೀಂ ನ್ಯಾಯಮೂರ್ತಿ
ನವದೆಹಲಿ, ಆಗಸ್ಟ್ 28: "ರಾಜ್ಯಗಳ ಸುಳ್ಳುಗಳನ್ನು ಬಹಿರಂಗ ಪಡಿಸುವುದು ಬುದ್ಧಿ ಜೀವಿಗಳ ಕರ್ತವ್ಯವಾಗಿದೆ" ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಶನಿವಾರ ಬೆಳ್ಳಿಗೆ ಹೇಳಿದ್ದಾರೆ. ಹಾಗೆಯೇ "ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಸುಳ್ಳುಗಳು, ಸುಳ್ಳು ಕಥೆಗಳು ಮತ್ತು ನಕಲಿ ಸುದ್ದಿಗಳ ವಿರುದ್ಧ ಎಚ್ಚರ ವಹಿಸುವುದು ಮುಖ್ಯ," ಎಂದು ಒತ್ತಿ ಹೇಳಿದರು.
6 ನೇ ಮುಖ್ಯ ನ್ಯಾಯಮೂರ್ತಿ ಎಂಸಿ ಚಾಗ್ಲಾ ಸ್ಮಾರಕ ಹಿನ್ನೆಲೆ ಉಪನ್ಯಾಸವನ್ನು ನೀಡಿದ ಸಂದರ್ಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಪ್ರಸ್ತುತ ಸಂದರ್ಭದಲ್ಲಿ ವೈದ್ಯಕೀಯ ಸತ್ಯಗಳನ್ನು ಒದಗಿಸಲು ಸರ್ಕಾರದ ಮೇಲೆ ಅಧಿಕ ಅವಲಂಬನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಉದಾಹರಣೆಯಾಗಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು ತಿರುಚುವಿಕೆ ಬಗ್ಗೆ ಗಮನ ಸೆಳೆದರು.
'ಪೊಲೀಸರು ಆಡಳಿತ ಪಕ್ಷದ ಪರವಾಗಿ ಇರುವುದು ಗೊಂದಲಕಾರಿ ಟ್ರೆಂಡ್': ಮುಖ್ಯ ನ್ಯಾಯಾಧೀಶ
"ಸತ್ಯಕ್ಕಾಗಿ ನಾವು ರಾಜ್ಯವನ್ನು ಮಾತ್ರ ಅವಲಂಬಿಸಲು ಸಾಧ್ಯವಿಲ್ಲ. ಸರ್ವಾಧಿಕಾರಿ ಸರ್ಕಾರಗಳು ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಳ್ಳಿನ ಮೇಲೆ ಅತಿಯಾಗಿ ಹಾಗೂ ನಿರಂತರವಾಗಿ ಅವಲಂಬನೆ ಆಗುವುದಕ್ಕೆ ಹೆಸರುವಾಸಿಯಾಗಿದೆ. ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು ತಿರುಚುವ ಒಂದು ಟ್ರೆಂಡ್ ರಾಷ್ಟ್ರಗಳ ನಡುವೆ ಇದೆ ಎಂಬುವುದನ್ನು ನಾವು ನೋಡುತ್ತಿದ್ದೇವೆ," ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಹೇಳಿದ್ದಾರೆ.
ಕೊರೊನಾ ಅಂಕಿ ಅಂಶದ ಬಗ್ಗೆ ಸುಳ್ಳು ಪ್ರಚಾರ
ಕೊರೊನಾ ವೈರಸ್ ಸೋಂಕಿನ ನಿಜವಾಗಿ ಎಷ್ಟು ಪ್ರಮಾಣದಲ್ಲಿ ಹರಡುತ್ತಿದೆ ಎಂಬುವುದನ್ನು ಮರೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೋವಿಡ್ ಪ್ರಕರಣಗಳ ಡೇಟಾವನ್ನು ತಿರುಚಿರಬಹುದು ಎಂಬ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ವ್ಯಕ್ತಪಡಿಸಿರುವ ಅಭಿಪ್ರಾಯದ ಹಿನ್ನೆಲೆ ಈ ವಿಚಾರದಲ್ಲಿ ಮಾತನಾಡಿದ ಡಿ ವೈ ಚಂದ್ರಚೂಡ, "ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು ತಿರುಚುವ ಒಂದು ಟ್ರೆಂಡ್ ರಾಷ್ಟ್ರಗಳ ನಡುವೆ ಇದೆ ಎಂಬುವುದನ್ನು ನಾವು ನೋಡುತ್ತಿದ್ದೇವೆ," ಎಂದು ಹೇಳಿದ್ದಾರೆ. "ನಕಲಿ ಸುದ್ದಿಗಳನ್ನು ಹರಡುವ ಘಟನೆಗಳು ಅಧಿಕವಾಗುತ್ತಿದೆ. ಡಬ್ಲ್ಯುಎಚ್ಒ (ವಿಶ್ವ ಆರೋಗ್ಯ ಸಂಸ್ಥೆ) ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳನ್ನು ಕಂಡು ಹಿಡಿದಿದೆ. ಈ ಬೆಳವಣಿಗೆಯನ್ನು ವಿಶ್ವಾಸಾರ್ಹವಲ್ಲದ ಮಾಹಿತಿಯು ಶೀಘ್ರವಾಗಿ ಹರಡುವುದು ಹಾಗೂ ಪರಿಹಾರವನ್ನು ಕಂಡು ಕೊಳ್ಳುವುದನ್ನು ಕಷ್ಟಗೊಳಿಸುವ ಸ್ಥಿತಿ ಎಂದು ಕರೆದಿದೆ. ಮಾನವರು ಇಂತಹ ಸುದ್ದಿಗಳ ಮೇಲೆ ಶೀಘ್ರ ಆಕರ್ಷಿತರಾಗುತ್ತಾರೆ. ಹೆಚ್ಚಾಗಿ ಇಂತಹ ಆಕರ್ಷಣೀಯ ಸುದ್ದಿಗಳು ಸುಳ್ಳು ಆಗಿರುತ್ತದೆ," ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ತಿಳಿಸಿದ್ದಾರೆ.
ನಕಲಿ ಸುದ್ದಿಗಳ ವಿಚಾರದಲ್ಲಿ ಜನರು ನಿರ್ಣಾಯಕರಾಗಿರಬೇಕು
ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕು ಪ್ರಕರಣಗಳು ವಿಶ್ವದಾದ್ಯಂತ ಹರಡುವ ಮುನ್ನ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಡುವ ನಕಲಿ ಸುದ್ದಿ ಹಾಗೂ ಅಪಪ್ರಚಾರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದ್ದರು. ಹಾಗೆಯೇ ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕ ಪ್ರಚಾರ ಮಾಡುವ ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದ್ದರು. "ನಕಲಿ ಸುದ್ದಿಗಳ ಪ್ರಚಾರದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ಬುಕ್ ಮೊದಲಾದವು ಹೊಣೆಯನ್ನು ಹೊತ್ತುಕೊಳ್ಳಬೇಕು. ಆದರೆ ಇತಹ ನಕಲಿ ಸುದ್ದಿಗಳ ವಿಚಾರದಲ್ಲಿ ಜನರು ಜಾಗರೂಕ ಮತ್ತು ನಿರ್ಣಾಯಕವಾಗಿರಬೇಕು. ಹಾಗೆಯೇ ಓದಬೇಕು, ಚರ್ಚಿಸಬೇಕು ಹಾಗೂ ಬೇರೆ ಬೇರೆ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕು," ಎಂದು ಹೇಳಿದರು.
ಮಹತ್ವದ ತೀರ್ಪುಗಳ ನೀಡಿದ ಸುಪ್ರೀಂ ಜಡ್ಜ್ ನಾರಿಮನ್ ನಿವೃತ್ತಿ: ಇಲ್ಲಿದೆ ರೋಹಿಂಟನ್ ಜೀವನದ ಹಾದಿ
ಪೋಸ್ಟ್-ಟ್ರುತ್ ವರ್ಲ್ಡ್: ನಮ್ಮ ಸತ್ಯ vs ನಿಮ್ಮ ಸತ್ಯ
ಹಾಗೆಯೇ ಈ ಸಂದರ್ಭದಲ್ಲೇ ಡಿ ವೈ ಚಂದ್ರಚೂಡ, ನಮ್ಮ ಸತ್ಯ ಹಾಗೂ ನಿಮ್ಮ ಸತ್ಯದ ನಡುವಿನ ಸ್ಪರ್ಧೆಯ ಬಗ್ಗೆ ಮಾತನಾಡಿದರು. ಸತ್ಯವನ್ನು ನಿರ್ಲಕ್ಷ್ಯ ಮಾಡುವ ಪ್ರವೃತ್ತಿಯ ಬಗ್ಗೆಯೂ ಮಾತನಾಡಿದ್ದಾರೆ. "ನಾವು ಪೋಸ್ಟ್-ಟ್ರುತ್ (ವಸ್ತು ನಿಷ್ಠ ಸಂಗತಿಗಳ ಬಗ್ಗೆ ಅಧಿಕ ಗಮನ ಹರಿಸದ) ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಇದಕ್ಕೆ ಸಾಮಾಜಿಕ ಜಾಲತಾಣ ವೇದಿಕೆಗಳು ಜವಾಬ್ದಾರಿ. ಆದರೆ ಸಾಮಾಜಿಕ ಜಾಲತಾಣ ಎಷ್ಟು ಜವಾಬ್ದಾರಿಯೋ ಅಷ್ಟೇ ನಾಗರಿಕರು ಕೂಡಾ ಜವಾಬ್ದಾರಿ. ನಾವು ಸಾಮಾನ್ಯವಾಗಿ ಯಾವುದು ಕಾಣುತ್ತದೆಯೋ ಅದರತ್ತ ಗಮನ ಹರಿಸುತ್ತೇವೆ. ಅದರ ವಿರುದ್ದವಾದ ನಂಬಿಕೆಗಳನ್ನು ನಾವು ಇಷ್ಟಪಡುವುದಿಲ್ಲ. ನಾವೀಗ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಮಾರ್ಗಗಳಲ್ಲಿ ಹೆಚ್ಚು ವಿಭಜಿತ ಆಗಿರುವ ಜಗತ್ತಿನಲ್ಲಿ ವಾಸ ಮಾಡುತ್ತಿದ್ದೇವೆ," ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಹೇಳಿದ್ದಾರೆ.
ಯುಎಪಿಎ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು
ನಮ್ಮ ನಂಬಿಕೆಗೆ ವಿರುದ್ದವಾದದೆಲ್ಲಾ ಸುಳ್ಳು
"ನಾವು ಈಗ ಹೇಗೆ ಜೀವಿಸುತ್ತಿದ್ದೇವೆ ಎಂದರೆ ಎಲ್ಲಾವೂ ನಮ್ಮ ನಂಬಿಕೆಗೆ ತಕ್ಕುದಾಗಿರಬೇಕು ಎಂದು. ನಾವು ನಮ್ಮ ನಂಬಿಕೆಗಳಿಗೆ ಹೊಂದಿಕೆಯಾಗುವ ಪತ್ರಿಕೆಗಳನ್ನು ಮಾತ್ರ ಓದುತ್ತೇವೆ. ನಮ್ಮ ಸಿದ್ದಾಂತಕ್ಕೆ ಒಳಗೊಳ್ಳದ ವ್ಯಕ್ತಿಗಳು ಬರೆದ ಪುಸ್ತಕಗಳನ್ನು ನಾವು ಓದುವುದಿಲ್ಲ ಅಥವಾ ನಿರ್ಲಕ್ಷಿಸುತ್ತೇವೆ. ಟಿವಿಯಲ್ಲಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ವಿಭಿನ್ನ ಅಭಿಪ್ರಾಯ ಹೊಂದಿದ್ದರೆ ನಾವು ಅದನ್ನು ನೋಡುವುದೇ ಇಲ್ಲ. ನಾವು ಯಾವುದೇ ವಿಷಯವಾಗಿರಲಿಲ್ಲ ನಾವು ಹೇಗೆ ಅರ್ಥೈಸಿಕೊಂಡಿದ್ದೇವೆ ಅದಕ್ಕೆ ಸೀಮಿತವಾಗುತ್ತೇವೆ. ಅದು ಸತ್ಯವೇ ಅಥವಾ ಸುಳ್ಳೆ ಎಂಬ ಬಗ್ಗೆ ಯಾವುದೇ ಚಿಂತನೆಯನ್ನು ನಾವು ನಡೆಸುದಿಲ್ಲ," ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ವಿಮರ್ಶಿಸಿದ್ದಾರೆ. "ನಕಲಿ ಸುದ್ದಿಗಳನ್ನು ಎದುರಿಸಲು ನಾವು ನಮ್ಮ ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕು. ನಮ್ಮಲ್ಲಿ ಯಾವುದೇ ರೀತಿಯ ರಾಜಕೀಯ ಅಥವಾ ಆರ್ಥಿಕ ಪ್ರಭಾವವಿಲ್ಲದ ಮಾಧ್ಯಮಗಳು ಇದೆಯೇ ಎಂಬುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಮಗೆ ಪಕ್ಷಪಾತವಿಲ್ಲದ ರೀತಿಯಲ್ಲಿ ಮಾಹಿತಿಯನ್ನು ಒದಗಿಸುವ ಪತ್ರಿಕೆಯ ಅಥವಾ ಮಾಧ್ಯಮದ ಅಗತ್ಯ ಈ ಸಂದರ್ಭದಲ್ಲಿ ಇದೆ," ಎಂದು ಅಭಿಪ್ರಾಯಿಸಿದ್ದಾರೆ. ಹಾಗೆಯೇ ನಮ್ಮ ಶಾಲಾ ಕಾಲೇಜುಗಳಲ್ಲಿ ಉತ್ತಮವಾದ ವಾತಾವರಣ ಇರಬೇಕು. ಮಕ್ಕಳು ಸುಳ್ಳು ಸುದ್ದಿಯನ್ನು ಪ್ರಶ್ನಿಸುವ ಮನೋಭಾವವನ್ನು ಸೃಷ್ಟಿ ಮಾಡುವ ಶಿಕ್ಷಣ ಅಗತ್ಯವಿದೆ," ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)