IMD Heatwave Alert: ದೇಶದ ಈ ಭಾಗಗಳಲ್ಲಿ ಏ.30 ರವರೆಗೂ ಸುಡುಬಿಸಿಲು, ಶಾಖದ ಅಲೆ ಎಚ್ಚರಿಕೆ
India Heatwave Forecast: ಸಮುದ್ರ ಮೇಲ್ಮೈಮೇಲೆ ಮಾತ್ರವಲ್ಲದೇ ಭೂಮಿ ಮೇಲ್ಮೈನಲ್ಲೂ ಆಗುತ್ತಿರುವ ನಿರಂತರ ಬದಲಾವಣೆ, ವಾಯು ಚಂಡಮಾರುತ ಪ್ರಸರಣದ ಕಾರಣದಿಂದ ದೆಹಲಿ, ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಶಾಖದ ಅಲೆ ಮೇಲುಗೈ ಸಾಧಿಸುತ್ತಿದೆ. ವಿವಿಧ ರಾಜ್ಯಗಳಿಗೆ 7 ದಿನ ಉಷ್ಣಅಲೆ (India Heatwave alert) ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಮುನ್ಸೂಚನೆ ನೀಡಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಮುಂಬೈ ಹಾಗೂ ಇನ್ನಿತರ ಪ್ರದೇಶಗಳ ಮೇಲೆ ವಾಯು ಚಂಡಮಾರುತ ಪರಿಚಲನೆ ವ್ಯವಸ್ಥೆ ಸಕ್ರಿಯವಾಗಿದೆ. ಇದು ತಾಪಮಾನ ಏರಿಳಿತ, ಉಷ್ಣ ತರಂಗಗಳ ಮೇಲೆ ಪರಿಣಾಮ ಬೀರುತ್ತಿದೆ. ಏಪ್ರಿಲ್ 25 ರಿಂದ 30 ರವರೆಗೆ ದೇಶದ ಹಲವೆಡೆ ವ್ಯಾಪಕ ಶಾಖದ ಅನುಭವವಾಗಲಿದೆ. ದೇಶದ ಪೂರ್ವ, ದಕ್ಷಿಣ ಹಾಗೂ ಮಧ್ಯ ಭಾಗದ ಕೆಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಏರಿಕೆ ಆಗಲಿದೆ. ಈ ಉರಿಬಿಸಿಲು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಬಹುದೆಂದು ಐಎಂಡಿ ಎಚ್ಚರಿಸಿದೆ.

ಈ ಭಾಗಗಳಿಗೆ ಉಷ್ಣ ಅಲೆ, ಸೆಕೆ ಅನುಭವ ಆಗಲಿದೆ?
ತೆಲಂಗಾಣ, ಕರ್ನಾಟಕ ಒಳನಾಡು ಭಾಗ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ರಾಯಲಸೀಮಾ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಅತ್ಯಧಿಕ ಬಿಸಿಲು ನಿರೀಕ್ಷೆ ಇದೆ. ಕೊಂಕಣ ಹಾಗೂ ಗೋವಾದ ಕೆಲ ಪ್ರದೇಶಗಳಲ್ಲೂ ಒಣಹವೆ ಮುಂದುವರಿಯಲಿದೆ.
ಮುಂದಿನ ಒಂದು ವಾರ ಹಾಗೂ ಏಪ್ರಿಲ್ ಕೊನೆಯ ವಾರದ (ಏ. 25-29) ಅವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತೀವ್ರ ಶಾಖದ ಅಲೆಗಳ ಪ್ರಭಾವ ಉಂಟಾಗಲಿದೆ. ಇದೇ ಅವಧಿಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಒಳನಾಡು ಜಿಲ್ಲೆಗಳು ಮತ್ತು ರಾಯಲಸೀಮಾ ಪ್ರದೇಶಗಳು ಬಿಸಿಲಿನ ದಿನಗಳನ್ನು ಕಾಣಲಿವೆ.
ದೇಶದಲ್ಲಿ 2ರಿಂದ 4ಡಿ.ಸೆ. ತಾಪಮಾನ ಏರಿಕೆ
ತಾಪಮಾನ ಏರಿಕೆಯು ಕೇವಲ ಏಪ್ರಿಲ್ಗೆ ಸಿಮೀತವಾಗಿರದೇ ಮೆ ತಿಂಗಳಿನಲ್ಲೂ ಮುಂದುವರಿಯುವ ಲಕ್ಷಣಗಳು ಇವೆ. ದೇಶದ ಕೆಲವು ಭಾಗಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿ ಹೀಗೆಯೇ ಇರಲಿದೆ. ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-4ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಆಗಿದೆ ಎಂದು ಐಎಂಡಿ ದೀರ್ಘ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಯಾವಾಗ ವಾತಾವರಣ ಸಹಜ ಸ್ಥಿತಿಗೆ ಬರುತ್ತದೆ ಎಂಬ ಮಾಹಿತಿ ತಿಳಿಯಬೇಕಿದೆ.
ದೆಹಲಿಯಲ್ಲಿ ಗರಿಷ್ಠ 40 ಡಿ.ಸೆ. ಉಷ್ಣಾಂಶ
ಚಳಿಗಾಲ, ಬೇಸಿಗೆ ವೇಳೆ ಒಂದೊಂದು ರೀತಿಯ ಅನಾರೋಗ್ಯಕರ ವಾತಾವರಣದಿಂದ ಸುದ್ದಿಯಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನವು ಸಾಮಾನ್ಯವಾಗಿರಲಿದೆ. ತಾಪಮಾನ ಅಧಿಕವಾಗಿರುವ ಪ್ರದೇಶಗಲ್ಲಿ ನಾಗರಿಕರು ಮಧ್ಯಾಹ್ನ 12 ರಿಂದ 3 ಗಂಟೆಯ ಹೊರಗೆ ಓಡಾಡುವುದು, ಹೊರಾಂಗಣ ಕೆಲಸಗಳನ್ನು ಕೈ ಬಿಡುವಂತೆ ಐಎಂಡಿ ಸಲಹೆ ನೀಡಿದೆ.
ಕರಾವಳಿ ಭಾಗಗಳಲ್ಲಿ ಹೆಚ್ಚಲಿದೆ ಸೆಕೆ, ಶಾಖ
ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯದ ಕೆಲವೆಡೆ ಗುರುವಾರದಿಂದ ಹೆಚ್ಚಿನ ಶಾಖ ಕಂಡು ಬರಬಹುದು. ಮಹಾರಾಷ್ಟ್ರದ ಕರಾವಳಿ, ಕರ್ನಾಟಕ ಕರಾವಳಿ ಭಾಗಗಳಲ್ಲಿ ತೀವ್ರ ಒಣಹವೆಯ ಅನುಭವ ಆಗಲಿದೆ. ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಗುರುವಾರದಿಂದ ಎರಡು ದಿನ ತೀವ್ರ ಬಿಸಿಲು, ಸೆಕೆಯ ವಾತಾವರಣಕ್ಕೆ ಸಾಕ್ಷಿಯಾಗಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರೆಲ್ಲರೂ ಆರೋಗ್ಯ ಕಾಳಜಿ ವಹಸಿಬೇಕಿದೆ. ದೇಹದಲ್ಲಿ ನೀರಿನಾಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದು, ನೈಸರ್ಗಿಕ ತಂಪು ಪಾನೀಯಗಳಾದ ಮಜ್ಜಿಗೆ, ಎಳನೀರು, ಲಿಂಬು ಶರಬತ್ ಸೇವಿಸುವುದು ಉತ್ತಮ.














Click it and Unblock the Notifications