ದಾವೂದ್ ಬೇಟೆಗೆ, 'ಡಿ ಕಂಪೆನಿ' ಸರ್ವನಾಶಕ್ಕೆ ಸ್ಪೆಷಲ್ 50 ಟೀಮ್
ದೆಹಲಿ, ಸೆಪ್ಟೆಂಬರ್ 3: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪತ್ತೆ ಹಚ್ಚುವುದಕ್ಕೆ, ಅವನ ವ್ಯವಹಾರಗಳನ್ನು ಸರ್ವನಾಶ ಮಾಡುವುದಕ್ಕೆ 50 ಮಂದಿಯ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ.
ಆ ತಂಡದಲ್ಲಿ ಗುಪ್ತಚರ ದಳ ಹಾಗೂ 'ರಾ' ಅಧಿಕಾರಿಗಳು ಕೆಲಸ ಮಾಡುತ್ತಾರೆ. ಕರಾಚಿಯಲ್ಲಿರುವ ದಾವೂದ್ ಇಬ್ರಾಹಿಂನ ಬೇಟೆ ಶತಾಯಗತಾಯ ಆಗಬೇಕು ಎಂದು ನಿರ್ಧರಿಸಿದ್ದು, ಇತ್ತೀಚೆಗೆ ನಡೆದ ರಕ್ಷಣಾ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ತನ್ನ ಜೀವಕ್ಕೆ ಅಪಾಯ ಇದೆ ಎಂಬ ಬಲವಾದ ಗುಮಾನಿಯಿಂದ ದಾವೂದ್ ಇಬ್ರಾಹಿಂ ಆರು ಬುಲೆಟ್ ಪ್ರೂಫ್ ವಾಹನ ಖರೀದಿಸಲು ತೀರ್ಮಾನಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.[ಬುಲೆಟ್ ಪ್ರೂಫ್ ವಾಹನ ಶಾಪಿಂಗ್ ಮಾಡಿದ ದಾವೂದ್ ಇಬ್ರಾಹಿಂ!]
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ಕೂಡ ದಾವೂದ್ ಇಬ್ರಾಹಿಂ ಮೇಲೆ ದಾಳಿಗಳಗಬಹುದು ಎಂಬ ಸೂಚನೆ ನೀಡಿ, ಎಚ್ಚರವಾಗಿರಲು ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತನ ಹಸ್ತಾಂತರಕ್ಕೆ ಪಾಕಿಸ್ತಾನಕ್ಕೆ ಮಾಡಿದ ಮನವಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ್ ದಾವೂದ್ ನ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಈ ಆಪರೇಷನ್ ಉದ್ದೇಶ. ಇಡೀ ಆಪರೇಷನ್ ಉಸ್ತುವಾರಿಯನ್ನು ಎನ್ ಎಸ್ ಎನ ಅಜಿತ್ ದೋವಲ್ ನೋಡಿಕೊಳ್ಳುತ್ತಾರೆ. ದಾವೂದ್ ನ ಬಲೆಗೆ ಕೆಡವಲು ಬ್ಲೂಪ್ರಿಂಟ್ ಸಿದ್ಧವಾಗುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ದಾವೂದ್ ಮನೆ ವಿಳಾಸ: 9 ರಲ್ಲಿ 6 ಮಾತ್ರ ಸರಿಯಿದೆ : ಯುಎನ್]
ಒಂದು ಕಡೆ 50 ಮಂದಿಯ ತಂಡ ದಾವೂದ್ ಬೇಟೆಯಲ್ಲಿ ತೊಡಗಿದರೆ, ಮತ್ತೊಂದು ಕಡೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವುದನ್ನು ಭಾರತ ಸರ್ಕಾರ ಮುಂದುವರಿಸಲಿದೆ. ಹಸ್ತಾಂತರದ ಬೇಡಿಕೆ, ಕಾನೂನಾತ್ಮಕ ಮನವಿಯನ್ನು ಪಾಕಿಸ್ತಾನಕ್ಕೆ ಕಳಿಸುವ ಜೊತೆಗೆ ದಾವೂದ್ ನನ್ನು ವಶಕ್ಕೆ ಪಡೆಯುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ನೆರವು ಕೇಳುವುದಕ್ಕೂ ನಿರ್ಧರಿಸಲಾಗಿದೆ.
ಈ ಮಧ್ಯೆ ಪಾಕಿಸ್ತಾನದಲ್ಲಿ ದಾವೂದ್ ಗೆ ನೀಡಿರುವ ರಕ್ಷಣೆ ಹೆಚ್ಚಿಸಲಾಗಿದೆ. ಹೊರಗೆ ಹೆಚ್ಚು ಸುತ್ತಾಡಬಾರದು ಎಂಬ ಸೂಚನೆ ಇರುವುದರಿಂದ ಕರಾಚಿಯಲ್ಲಿರುವ ಬಂಗಲೆ ಬಿಟ್ಟು ಆತ ಕದಲುತ್ತಿಲ್ಲ. ಆತನ ಸಹಚರ ಛೋಟಾ ಶಕೀಲ್ ಸೇರಿದಂತೆ ಇತರರಿಗೂ ಇದೇ ಸೂಚನೆ ನೀಡಲಾಗಿದೆ. ಸದ್ಯಕ್ಕೆ ದಾವೂದ್ ನ ದುಬೈ ವ್ಯವಹಾರಗಳ ಬಗ್ಗೆ ನಿಗಾ ಇಡಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.[ಕರಾಚಿಯ ಕ್ಲಿಫ್ಟನ್ ಉಪನಗರದಲ್ಲೇ ದಾವೂದ್ ನೆಲೆ]
ದೊಡ್ಡ ಮಟ್ಟದ ಆತನ ವ್ಯವಹಾರಗಳು ನಡೆಯುತ್ತಿರುವುದು ದುಬೈನಲ್ಲಿ, ಆತನಿಗೆ ಅಲ್ಲಿರುವ ಸಂಪರ್ಕಗಳಿಂದ, ಅವನ ಕಡೆಯ ಜನರಿಂದ. ಒಂದು ವೇಳೆ ಅಲ್ಲಿಯ ನೆಟ್ ವರ್ಕ್ ಗಳನ್ನು ಮುರಿಯುವುದಕ್ಕೆ ಭಾರತ ಯಶಸ್ವಿಯಾಗಿಬಿಟ್ಟರೆ ದಾವೂದ್ ಇಬ್ರಾಹಿಂ ಶಕ್ತಿ ಕುಂದಿದಂತೆಯೇ ಎಂದು ಅಧಿಕಾರಿಗಳು ಹೇಳುತ್ತಾರೆ.












Click it and Unblock the Notifications