IMD Weather Forecast: ವಿಪರೀತ ಬಿಸಿಲಿನ ನಡುವೆ ದೇಶದ ಹಲವೆಡೆ ಭಾರೀ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯದಗಳಲ್ಲಿ ರಣಬಿಸಿಲು ಮುಂದುವರೆದಿದೆ. ಈ ನಡುವೆಯೇ ಕೆಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹಾಗಾದ್ರೆ ಇಂದು (ಏಪ್ರಿಲ್ 29) ಎಲ್ಲೆಲ್ಲಿ ವಾತಾವರಣ ಹೇಗಿರಲಿದೆ? ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಹಲವು ಭಾಗಗಳಲ್ಲಿ ತಾಪಮಾನವು 40°C ಗಡಿ ದಾಡಿದೆ. ಮತ್ತೊಂದೆಡೆ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ತಾಪಮಾನವು 10°C ಗಿಂತಲೂ ಕೆಳಕ್ಕೆ ಕುಸಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ವಾತಾವರಣ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡಿ.

ಎಲ್ಲೆಲ್ಲಿ ತಾಪಮಾನ ಹೆಚ್ಚಳ?
ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ತಪಮಾತನದಲ್ಲಿ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ಪೂರ್ವ ಉತ್ತರ ಪ್ರದೇಶದ ಬಾಂದಾದಲ್ಲಿ ಇತ್ತೀಚೆಗೆ 47.6°C ತಾಪಮಾನ ದಾಖಲಾಗಿದ್ದು, ಇದು ದೇಶದಲ್ಲೇ ಗರಿಷ್ಠ ಮಟ್ಟವಾಗಿದೆ. ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ನಲ್ಲಿ ತಾಪಮಾನವು 40°C ಗಡಿ ದಾಟಿದೆ. ಈ ಭೀಕರ ಬಿಸಿಲಿನಿಂದಾಗಿ ಕೂಲಿ ಕಾರ್ಮಿಕರು, ಸಾರಿಗೆ ವ್ಯವಸ್ಥೆ ಮತ್ತು ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಹಿನ್ನೆಲೆ ಆರೋಗ್ಯದ ಹಿತದೃಷ್ಟಿಯಿಂದ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರಬರದಂತೆ ಈ ಭಾಗಗಳ ಜನರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಭಾರೀ ಮಳೆ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ
ಮತ್ತೊಂದೆಡೆ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಇಂದಿನಿಂದ ಅಂದರೆ ಏಪ್ರಿಲ್ 29ರಿಂದ ಮುಂದಿನ ಹಲವು ದಿನಗಳವರೆಗೆ ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈ ಭಾಗಗಳಿಗೆ ಭಾರತೀಯ ಹವಾಮಾನ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ದಕ್ಷಿಣ ಭಾರತದ ಹವಾಮಾನ
ಕೇರಳ, ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಗಲಿನ ವೇಳೆ ಮಾತ್ರ ಈ ರಾಜ್ಯಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನದಲ್ಲಿನ ಈ ಏರಿಳಿತವು ಕೇವಲ ಜನಜೀವನದ ಮೇಲಷ್ಟೇ ಅಲ್ಲದೆ, ಕೃಷಿ ಮತ್ತು ಇಂಧನ ಬಳಕೆಯ ಮೇಲೆಯೂ ಪ್ರಭಾವ ಬೀರುತ್ತಿದೆ. ಏರುತ್ತಿರುವ ತಾಪಮಾನದಿಂದಾಗಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಈ ಹವಾಮಾನ ಪರಿಸ್ಥಿತಿಗೆ ಸನ್ನದ್ಧರಾಗಿರುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು
* ಹೆಚ್ಚು ನೀರು ಕುಡಿಯಬೇಕು.
* ಎಳನೀರು, ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಇವುಗಳು ದೇಹವನ್ನು ತಂಪಾಗಿಡುತ್ತದೆ.
* ಕಾಫಿ, ಟೀ ಮತ್ತು ಅತಿಯಾದ ಸಕ್ಕರೆ ಅಂಶವಿರುವ ತಂಪು ಪಾನೀಯಗಳಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಏಕೆಂದರೆ ಇವು ದೇಹದಲ್ಲಿ ನೀರಿನಂಶವನ್ನು ಕಡಿಮೆ ಮಾಡುತ್ತವೆ.
* ಜೀರ್ಣಿಸಿಕೊಳ್ಳಲು ಕಷ್ಟವಾಗುವ ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ಅತಿಯಾದ ಪ್ರೋಟೀನ್ ಇರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
* ನೀರಿನಂಶವಿರುವ ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ ಹೆಚ್ಚಾಗಿ ಸೇವನೆ ಮಾಡುವುದು ತುಂಬಾ ಒಳಿತು.
* ಸಾಧ್ಯವಾದಷ್ಟು ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ. ಈ ಸಮಯದಲ್ಲಿ ಸೂರ್ಯನ ಕಿರಣಗಳ ಪ್ರಭಾವ ಹೆಚ್ಚಿರಲಿದೆ.
* ಹಗುರವಾದ, ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಇದು ಬೆವರಿನ ಆವಿಯಾಗುವಿಕೆಗೆ ಮತ್ತು ಗಾಳಿಯಾಡಲು ಸಹಕಾರಿಯಾಗುತ್ತದೆ
* ಬಿಸಿಲಿಗೆ ಹೋಗುವಾಗ ಕೊಡೆ, ಟೋಪಿ ಅಥವಾ ಸನ್ ಗ್ಲಾಸ್ ಬಳಸಿ. ತಲೆಗೆ ಟವೆಲ್ ಅಥವಾ ಸ್ಕಾರ್ಫ್ ಕಟ್ಟಿಕೊಳ್ಳುವುದು ಉತ್ತಮ.
* ಮನೆಯ ಕಿಟಕಿಗಳಿಗೆ ಪರದೆಗಳನ್ನು ಹಾಕಿ ನೇರ ಬಿಸಿಲು ಬರದಂತೆ ತಡೆಯಿರಿ. ರಾತ್ರಿ ವೇಳೆ ಕಿಟಕಿಗಳನ್ನು ತೆರೆದಿಟ್ಟು ಗಾಳಿಯಾಡುವಂತೆ ನೋಡಿಕೊಳ್ಳಿ.
* ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ದಿನಕ್ಕೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡುವುದು ಪ್ರಯೋಜನಕಾರಿ.
* ಒಂದು ವೇಳೆ ತಲೆತಿರುಗುವಿಕೆ, ಅತಿಯಾದ ಸುಸ್ತು, ವಾಂತಿ ಅಥವಾ ತೀವ್ರ ತಲೆನೋವು ಕಾಣಿಸಿಕೊಂಡರೆ ತಕ್ಷಣ ತಂಪಾದ ಜಾಗಕ್ಕೆ ಹೋಗಿ ವಿಶ್ರಾಂತಿ ಪಡೆಯಿರಿ ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.












Click it and Unblock the Notifications