ಚಂಡಮಾರುತ ಪ್ರಭಾವ; ಈ ರಾಜ್ಯಗಳಲ್ಲಿ ಅಧಿಕ ಮಳೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 16: ದೇಶಾದ್ಯಂತ ಮುಂಗಾರು ಚುರುಕಾಗಿದ್ದು, ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮಳೆಗೆ ಪ್ರಚೋದನೆ ನೀಡಿದೆ. ಇದೀಗ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯ ಪ್ರಭಾವದಿಂದಾಗಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಸೆಪ್ಟೆಂಬರ್ 17ರಂದು ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಲಿದ್ದು, ಇದರ ಪ್ರಭಾವದಿಂದ ಇದೇ ಶನಿವಾರ ಹಾಗೂ ಭಾನುವಾರ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿರುವುದಾಗಿ ಮುನ್ಸೂಚನೆ ನೀಡಿದೆ.
ಉತ್ತರ ಹಾಗೂ ಮಧ್ಯ ಭಾರತದಲ್ಲಿನ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಉತ್ತರಾಖಂಡ, ರಾಜಸ್ತಾನ, ಗುಜರಾತ್ನಲ್ಲಿ ಗುರುವಾರದಿಂದಲೇ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಚಂಡಮಾರುತದಿಂದಾಗಿ ಭಾರತದ ಪೂರ್ವ ಭಾಗದಲ್ಲಿ ಸೆಪ್ಟೆಂಬರ್ 18ರಂದು ಅಧಿಕ ಮಳೆಯಾಗಲಿದೆ. ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 19ರ ನಂತರ ಮಳೆ ತಗ್ಗುವುದಾಗಿ ತಿಳಿಸಿದೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವು ದಿನಗಳ ಕಾಲ ಅಧಿಕ ಮಳೆಯಾಗುವುದಾಗಿ ಇಲಾಖೆ ಮಾಹಿತಿ ನೀಡಿದೆ. ಸೆಪ್ಟೆಂಬರ್ 18 ಹಾಗೂ 19ರಂದು ಕೂಡ ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆಯನ್ನು ನೀಡಲಾಗಿದೆ. ಒಡಿಶಾದಲ್ಲಿ ಕಳೆದ ಶನಿವಾರದಿಂದಲೂ ಅಧಿಕ ಮಳೆಯಾಗುತ್ತಿದ್ದು, ಬುಧವಾರ ಮಳೆ ಸಂಬಂಧಿ ಅವಘಡದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಸದ್ಯಕ್ಕೆ ಮಳೆ ಆರ್ಭಟ ತಗ್ಗಿದೆ. ಜಮ್ಮು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಹೊರತುಪಡಿಸಿ ಉತ್ತರ ಭಾರತದಲ್ಲಿ ಸೆಪ್ಟೆಂಬರ್ 17ರವರೆಗೂ ಮಳೆ ಮುಂದುವರೆಯುವುದಾಗಿ ತಿಳಿಸಿದೆ.
ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡದಲ್ಲಿ ಸೆಪ್ಟೆಂಬರ್ 16ರಂದು, ರಾಜಸ್ಥಾನದಲ್ಲಿ ಸೆಪ್ಟೆಂಬರ್ 17, 18ರಂದು ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ.
ಗುಜರಾತ್ನಲ್ಲಿ ಭಾನುವಾರದಿಂದಲೂ ಭಾರೀ ಮಳೆಯಾಗುತ್ತಿದ್ದು, ರಾಜ್ಕೋಟ್ ಹಾಗೂ ಜಮ್ನಾ ನಗರದಲ್ಲಿ ಅತ್ಯಧಿಕ ಮಳೆಯಾಗಿ ಪ್ರವಾಹ ಸಂಭವಿಸಿದೆ. ಸುಮಾರು ಏಳು ಸಾವಿರ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಹಲವು ಗ್ರಾಮಗಳು ಜಲಾವೃತವಾಗಿವೆ.

ಒಡಿಶಾ, ಗುಜರಾತ್ ಹೊರತುಪಡಿಸಿ ಉತ್ತರಾಖಂಡ, ದೆಹಲಿ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 18ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ದೆಹಲಿಯಲ್ಲಿ ಮತ್ತೆ ಮಳೆ ಆರಂಭ:
ದೆಹಲಿಯಲ್ಲಿ ಬುಧವಾರದಿಂದ ಮತ್ತೆ ಮಳೆ ಆರಂಭವಾಗಿದ್ದು, ಈ ಮುಂಗಾರು ಅವಧಿಯಲ್ಲಿ ದೆಹಲಿಯಲ್ಲಿ 1,146.4 ಎಂಎಂ ಮಳೆ ದಾಖಲಾಗಿದೆ. 46 ವರ್ಷಗಳಲ್ಲೇ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ. 1975ರಲ್ಲಿ 1150 ಮಳೆ ಪ್ರಮಾಣ ದಾಖಲಾಗಿತ್ತು.
ಈ ತಿಂಗಳೊಂದರಲ್ಲೇ ದೆಹಲಿಯಲ್ಲಿ 390 ಎಂಎಂ ಮಳೆ ಪ್ರಮಾಣ ದಾಖಲಾಗಿದೆ. 1901ರ ನಂತರ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ. 1944ರಲ್ಲಿ ದೆಹಲಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 417.3 ಎಂಎಂ ಮಳೆಯಾಗಿತ್ತು.
ದೆಹಲಿಯಲ್ಲಿ ಬುಧವಾರದಿಂದ ಮತ್ತೆ ಮಳೆ ಆರಂಭವಾಗಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ತಗ್ಗಿದ ಮಳೆ:
ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕದಲ್ಲಿ ಗುರುವಾರ ಕೂಡ ಭಾರೀ ಮಳೆಯಾಗಲಿದೆ. ಶನಿವಾರ ಹಾಗೂ ಭಾನುವಾರ ರಾಜ್ಯಾದ್ಯಂತ ಮಳೆ ಹೆಚ್ಚಾಗಲಿದ್ದು, ಕರಾವಳಿ, ಮಲೆನಾಡಿನಲ್ಲಿ ಉತ್ತರ ಮತ್ತು ನೈಋತ್ಯ ಭಾಗಗಳಲ್ಲಿ ಮಳೆಯಾಗಲಿರುವುದಾಗಿ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ ಅಧಿಕ ಮಳೆ ಸೂಚನೆ:
ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications