ಉಗ್ರರ ದಮನ ಪಾಕಿಸ್ತಾನಕ್ಕೆ ಸಾಧ್ಯವಾಗದೇ ಇದ್ದರೆ ನಾವು ಸಹಾಯ ಮಾಡುತ್ತೇವೆ: ರಾಜನಾಥ್ ಸಿಂಗ್
ನವದೆಹಲಿ, ಜುಲೈ 26: 'ಪಾಕಿಸ್ತಾನದಲ್ಲಿ ಉಗ್ರರ ಸಾಮ್ರಾಜ್ಯ ಇನ್ನೂ ಸಕ್ರಿಯವಾಗಿರುವುದನ್ನು ಖುದ್ದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೇ ಒಪ್ಪಿಕೊಂಡಿದ್ದಾರೆ. ಅವರನ್ನು ಮಟ್ಟಹಾಕಲು ಅವರಿಗೆ ಸಾಧ್ಯವಾಗದೇ ಇದ್ದಲ್ಲಿ ನಾವು ಅವರಿಗೆ ಸಹಾಯ ಮಾಡಲು ಸಿದ್ದರಿದ್ದೇವೆ'.
ಇದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಾತು. ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, 'ಭಯೋತ್ಪಾದನೆ ಇಡೀ ವಿಶ್ವಕ್ಕೆ ಮಾರಕ. ಇದನ್ನು ಮಟ್ಟಹಾಕಲು ಎರಡು ರಾಷ್ಟ್ರಗಳು ಯಾಕೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬಾರದು' ಎಂದು ರಾಜನಾಥ್ ಹೇಳಿದ್ದಾರೆ.
ಭಾರತದ ಆಂತರಿಕ ಭದ್ರತೆ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಸುಧಾರಿಸಿದೆ. ವಿಶ್ವದ ಯಾವುದೇ ಶಕ್ತಿಯನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಹೇಳಿರುವ ರಾಜನಾಥ್, ಸಿಯಾಚಿನ್ ಮತ್ತು ಕಾರ್ಗಿಲ್ ನಲ್ಲಿ ನಮ್ಮ ಯೋಧರನ್ನು ಭೇಟಿ ಮಾಡಿದ್ದು ಹೆಮ್ಮೆಯೆನಿಸುತ್ತದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಲು ಅಂದಿನ ಪ್ರಧಾನಿ ವಾಜಪೇಯಿಯವರು ಲಾಹೋರ್ ಬಸ್ ಪ್ರಯಾಣ ಆರಂಭಿಸಿದರು. ಆದರೆ, ಪಾಕಿಸ್ತಾನ ತನ್ನ ನಿಜವಾದ ಬಣ್ಣವನ್ನು ತೋರಿಸಿತು ಎಂದು ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ.
ರಕ್ಷಣಾ ಸಚಿವನಾಗಿ ಪದಗ್ರಹಣ ಮಾಡಿದ ಕೂಡಲೇ, ನಮ್ಮ ಸೈನಿಕರನ್ನು ಭೇಟಿಯಾಗಲು ನಿರ್ಧರಿಸಿದೆ. ದೇಶದ ಗಡಿಕಾಯುತ್ತಿರುವ ಯೋಧರ ಯೋಗಕ್ಷೇಮ ವಿಚಾರಿಸುವುದು ನನ್ನ ಕರ್ತವ್ಯ ಎಂದು ರಾಜನಾಥ್ ಹೇಳಿದ್ದಾರೆ.
ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವು ಹೊಂದಿದ್ದೇವೆ. ನಮ್ಮ ತಂಟೆಗೆ ಯಾರಾದರೂ ಬಂದರೆ, 1965, 1971 ಅಥವಾ 1999ಕ್ಕಿಂತಲೂ ಭರ್ಜರಿಯಾಗಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ರಾಜನಾಥ್ ಸಿಂಗ್ ಎಂದು ವಿಶ್ವಾಸದ ಮಾತನಾಡಿದ್ದಾರೆ.












Click it and Unblock the Notifications