ವಾಯುಪಡೆ ಯುದ್ಧ ವಿಮಾನಕ್ಕೆ ಹಕ್ಕಿ ಡಿಕ್ಕಿ: ಅಪಘಾತದಿಂದ ಪೈಲಟ್ ಪಾರು
ಅಂಬಾಲ, ಜೂನ್ 27: ಭಾರತೀಯ ವಾಯುಪಡೆಯ (ಐಎಎಫ್) ಜಾಗ್ವಾರ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಒಂದು ಎಂಜಿನ್ ವಿಫಲವಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಸಮಯಪ್ರಜ್ಞೆ ಮೆರೆದ ಪೈಲಟ್, ವಿಮಾನದ ಇಂಧನ ಟ್ಯಾಂಕ್ಗಳನ್ನು ಬೀಳಿಸಿ ಅಂಬಾಲ ವಾಯು ಪಡೆ ನೆಲೆಯಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಟ್ನಿಂದ ಉದುರಿಸಿದ ಸಣ್ಣ ಪ್ರಮಾಣದ ಅಭ್ಯಾಸ ಬಾಂಬ್ಗಳನ್ನು ಸಹ ವಾಯುಪಡೆ ವಶಕ್ಕೆ ಪಡೆದುಕೊಂಡಿದೆ.
ಆರಂಭದಲ್ಲಿ ಅಂಬಾಲದ ವಾಸ ಪ್ರದೇಶ ಮತ್ತು ವಾಯುನೆಲೆಯ ಗೋಡೆಯ ಬಳಿ ಭಾರಿ ಸ್ಫೋಟದ ಸದ್ದು ಕೇಳಿಸಿತ್ತು. ವಿಮಾನದಿಂದ ಏನೋ ವಸ್ತು ಕೆಳಗ್ಗೆ ಬಿದ್ದಿದ್ದನ್ನು ಪ್ರತ್ಯಕ್ಷದರ್ಶಿಗಳನ್ನು ನೋಡಿದ್ದರು. ಅದು ಕೆಳಕ್ಕೆ ಬೀಳುತ್ತಿದ್ದಂತೆಯೇ ಭಾರಿ ಪ್ರಮಾಣದ ದಟ್ಟ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿತು. ಕೂಡಲೇ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ವಾಯುಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಮೊದಲು ವಾಸ ಪ್ರದೇಶದ ಸುತ್ತಮುತ್ತಲೂ ವಾಯುಪಡೆ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸಿದರು. ಬಳಿಕ ವಿಮಾನ ಸುರಕ್ಷಿತವಾಗಿ ವಾಯುನೆಲೆಯಲ್ಲಿ ಇಳಿದಿರುವುದು ಗೊತ್ತಾಯಿತು.

ಈ ತಿಂಗಳ ಆರಂಭದಲ್ಲಿ ಐಎಎಫ್ ಜಾಗ್ವಾರ್ ವಿಮಾನವು ತನ್ನ ದೈನಂದಿನ ತರಬೇತಿ ಕಾರ್ಯಕ್ಕಾಗಿ ಜಾಮ್ನಗರ್ದಿಂದ ಹೊರಟಿದ್ದಾಗ ಗುಜರಾತ್ನ ಕಚ್ ಬಳಿ ಅಪಘಾತಕ್ಕೆ ಒಳಗಾಗಿತ್ತು. ವಿಮಾನ ನಡೆಸುತ್ತಿದ್ದ ಪೈಲಟ್, ಏರ್ ಕಮಾಂಡರ್ ಸಂಜಯ್ ಚೌಹಾಣ್ ಜೀವ ಕಳೆದುಕೊಂಡಿಕೊಂಡಿದ್ದರು. ಮರುದಿನವೇ ಜೂನ್ 8ರಂದು ಗುಜರಾತ್ನ ಜಾಮ್ನಗರ್ ವಾಯುನೆಲೆಗೆ ಇಳಿಯುವ ಮುನ್ನ ಜಾಗ್ವಾರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲಟ್ ಸುರಕ್ಷಿತವಾಗಿ ಹೊರಗೆ ಬಂದಿದ್ದರು.












Click it and Unblock the Notifications