ಬಿಜೆಪಿ ಅಭ್ಯರ್ಥಿಗೆ ಬಿಎಸ್ಪಿ ಶಾಸಕನ ಮತ, ಯುಪಿಯಲ್ಲಿ ಹೈಡ್ರಾಮ
ಲಕ್ನೋ, ಮಾರ್ಚ್ 23: ತಾವು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಬಹುಜನ ಸಮಾಜವಾದಿ ಪಕ್ಷದ ಶಾಸಕ ಅನಿಲ್ ಸಿಂಗ್ ಹೇಳಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆ ಕ್ಷಣದಿಂದ ಕ್ಷಣಕ್ಕೆ ಕುತೂಹಲ ಹುಟ್ಟುಹಾಕುತ್ತಿದೆ.
ಉತ್ತರ ಪ್ರದೇಶ ವಿಧಾನಸಭೆಯ ಬಲಾಬಲವನ್ನು ನೋಡುವುದಾದರೆ, ಬಿಜೆಪಿ ಮತ್ತು ಮಿತ್ರ ಪಕ್ಷಗಳು 324 ಮತ್ತು ಸ್ಪೀಕರ್ ಸ್ಥಾನವನ್ನು ಹೊಂದಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಸ್ಪಿ ಬಳಿಯಲ್ಲಿ 47, ಬಿಎಸ್ಪಿ ಬಳಿಯಲ್ಲಿ 19, ಕಾಂಗ್ರೆಸ್ ಬಳಿ 7 ಹಾಗೂ ಇತರ 5 ಜನ ಶಾಸಕರಿದ್ದಾರೆ. ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಪ್ರವೇಶ ಪಡೆಯಲು ಅಭ್ಯರ್ಥಿಯೊಬ್ಬರಿಗೆ 37 ಮತಗಳು ಅಗತ್ಯವಾಗಿವೆ.
ಬಿಜೆಪಿ ಸುಲಭದಲ್ಲಿ 8 ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸಬಹುದಾಗಿದೆ. ಲೆಕ್ಕಾಚಾರಗಳ ಪ್ರಕಾರ ಬಿಜೆಪಿಗೆ 8 ಅಭ್ಯರ್ಥಿಗಳಿಗೆ 296 ಮತಗಳು ಬೇಕಾಗಿವೆ. ಮತ್ತು 28 ಮತಗಳೂ ಹೆಚ್ಚುವರಿಯಾಗಿ ಉಳಿಯುತ್ತವೆ. ಹೀಗಾಗಿ ಇಲ್ಲಿ ಬಿಜೆಪಿ ಇನ್ನೋರ್ವ ಅಭ್ಯರ್ಥಿ ಉದ್ಯಮಿ ಅನಿಲ್ ಅಗರ್ವಾಲ್ ರನ್ನು ಕಣಕ್ಕಿಳಿಸಿದೆ.

ಎಸ್ಪಿ ಬಳಿಯಲ್ಲಿ ಜಯಾ ಬಚ್ಚನ್ ರನ್ನು ಮೇಲ್ಮನೆಗೆ ಕಳುಹಿಸಿದ ನಂತರ 10 ಮತಗಳು ಉಳಿಯಲಿವೆ. ಇದನ್ನು ಬಿಎಸ್ಪಿ ಅಭ್ಯರ್ಥಿಗೆ ನೀಡುವುದಾಗಿ ಎಸ್ಪಿ ಹೇಳಿದೆ. ಹೀಗಾದರೆ ಬಿಎಸ್ಪಿ ಬಲ 29 ಏರಿಕೆಯಾಗಲಿದೆ. ಜತೆಗೆ ಕಾಂಗ್ರೆಸ್ ಬಿಎಸ್ಪಿ ಬೆಂಬಲಿಸುವದರಿಂದ 36 ಮತಗಳು ಬಿಎಸ್ಪಿ ತೆಕ್ಕೆಗೆ ಸಿಗಲಿವೆ. ಮತ್ತು ಬಿಎಸ್ಪಿ ಅಭ್ಯರ್ಥಿಗೆ 1 ಮತಗಳ ಕೊರತೆ ಉಂಟಾಗಲಿದೆ.
ಹೀಗಾಗಿ ಇಲ್ಲಿ 10ನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅನಿಲ್ ಅಗರ್ವಾಲ್ ಮತ್ತು ಬಿಎಸ್ಪಿಯ ಭೀಮ್ ರಾವ್ ಅಂಬೇಡ್ಕರ್ ನಡುವೆ ಪೈಪೋಟಿ ಇದೆ. ಅನಿಲ್ ಅಗರ್ವಾಲ್ 9 ಮತ್ತು ಅಂಬೇಡ್ಕರ್ 1ಮತಗಳ ಕೊರತೆ ಅನುಭವಿಸುತ್ತಿದ್ದಾರೆ.
ಕುತೂಹಲ ಕೆರಳಿಸಿದ ನಡೆಗಳು
ಬಿಎಸ್ಪಿ ಅಭ್ಯರ್ಥಿ 1 ಮತಗವನ್ನು ಸುಲಭವಾಗಿ ಸಂಪಾದಿಸಬಹುದು ಎಂದುಕೊಳ್ಳಲಾಗಿತ್ತು. ಆದರೆ ಬಿಎಸ್ಪಿ ಶಾಸಕರ ಬುಟ್ಟಿಗೇ ಬಿಜೆಪಿ ಕೈ ಹಾಕಿದೆ.
ನಿಶಾದ್ ಪಕ್ಷದ ವಿಜಯ್ ಮಿಶ್ರಾ ಮತ್ತು ಬಿಎಸ್ಪಿಯ ಅನಿಲ್ ಸಿಂಗ್ ಗುರುವಾರ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದರು. ಅವರಿಬ್ಬರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಲಿದ್ದಾರೆ ಎಂದು ಯುಪಿ ಸಚಿವ ಒಪಿ ರಾಜ್ ಭರ್ ಹೇಳಿದ್ದರು.
ಇದೀಗ ಇಂದು ಹೇಳಿಕ ನೀಡಿರುವ ಅನಿಲ್ ಸಿಂಗ್ ತಾವು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವುದಾಗಿ ಹೇಳಿದ್ದಾರೆ. ಹೀಗಾಗಿ ಅನಿಲ್ ಅಗರ್ವಾಲ್ ಎರಡು ಹೆಚ್ಚುವರಿ ಮತ ಪಡೆಯಲಿದ್ದಾರೆ ಮತ್ತು ಅವರ ಕೊರತೆ ಮತಗಳ ಸಂಖ್ಯೆ 7ಕ್ಕೆ ಇಳಿಕೆಯಾಗಲಿದೆ.
ಇದೇ ವೇಳೆ ಅಂಬೇಡ್ಕರ್ ಗೆ ಒಂದು ಮತ ಕಡಿಮೆಯಾಗಲಿದ್ದು ಒಟ್ಟಾರೆ ಎರಡು ಮತ ಕೊರತೆಯಾಗಲಿದೆ.
ಇತರರಲ್ಲಿಯೂ ನಿಶಾದ್ ಪಕ್ಷದ ವಿಜಯ್ ಮಿಶ್ರಾ ಬಿಜೆಪಿಗೆ ಮತ ಹಾಕುವುದರಿಂದ ಬಿಎಸ್ಪಿಗೆ ಇತರರಲ್ಲಿ ಉಳಿದಿರುವುದು 4 ಮತಗಳು ಮಾತ್ರ. ಇದರಲ್ಲಿ 2 ಮತವನ್ನು ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.
ಈ ನಡುವೆ ಹೇಳಿಕೆ ನೀಡಿರುವ ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್, ಕ್ರಾಸ್ ವೋಟಿಂಗ್ ನಡೆಯುವುದು ನಿಜ. ಆದರೆ ಬಿಜೆಪಿ ಶಾಸಕರು ನಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ.
ಇನ್ನು ನಮ್ಮ ಎಲ್ಲಾ 9 ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದು, ಯಾರು ಅಡ್ಡ ಮತದಾನ ಮಾಡಲಿದ್ದಾರೆ, ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications