ಹೈಕಮಾಂಡ್ ಬುಲಾವ್: ನಾನ್ಯಾಕ್ರೀ ದೆಹಲಿಗೆ ಹೋಗ್ಲಿ ಅಂದ್ರು ಸಿದ್ದರಾಮಯ್ಯ
ಸೂಟುಬೂಟು ಸರಕಾರವೆಂದು ನರೇಂದ್ರ ಮೋದಿ ಸರಕಾರವನ್ನು ಟೀಕಿಸುತ್ತಿದ್ದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್, ಈಗ ತಮ್ಮದೇ ಪಕ್ಷದ ಮುಖ್ಯಮಂತ್ರಿಯ ವಜ್ರಖಚಿತ ವಾಚ್ ವೃತ್ತಾಂತದಿಂದಾಗಿ ಮುಜುಗರಕ್ಕೀಡಾಗುವಂತಾಗಿದೆ.
ಸಿದ್ದರಾಮಯ್ಯನವರ 'ವಾಚ್ ಪುರಾಣ' ಸಂಸತ್ತಿನಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಇನ್ನು ವಿಧಾನಸಭೆಯಲ್ಲಿ ಈಗಾಗಲೇ ಬಿಜೆಪಿಯ ಪ್ರತಿಭಟನೆ ಸದನದ ಬಾವಿಗಿಳಿದು ಬಂದಿದೆ. ದುಬಾರಿ ವಾಚ್ ವಿಚಾರವನ್ನು ಬಯಲುಗೆಳೆದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಬಿಜೆಪಿಗೆ ಪೂರ್ಣ ಸಹಕಾರ ನೀಡುವುದು ನಿಶ್ಚಿತ. (ವಾಚ್ ವಿವಾದ, ಡಾ.ಸುಧಾಕರ ಶೆಟ್ಟಿ ಹೇಳಿದ್ದು)
ದುಬಾರಿ ವಾಚ್ ನಿಂದಾಗಿ ಪಕ್ಷದ ವರ್ಚಸ್ಸಿಗೆ ಆಗಿರುವ ಹಾನಿಗೆ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿರುವ ಕಾಂಗ್ರೆಸ್ಸಿನ ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಮಾರ್ಚ್ ಐದರಂದು ದೆಹಲಿಗೆ ಬಂದು ಭೇಟಿಯಾಗುವಂತೆ ಸೂಚಿಸಿದೆ.
ಆದರೆ ಇದಕ್ಕೆ ಖಾರವಾಗಿ ತಮ್ಮ ಗೃಹ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನ್ಯಾಕ್ರೀ ದೆಹಲಿಗೆ ಹೋಗಲಿ. ಇನ್ನು ದೆಹಲಿಗೆ ಹೋಗುವುದು ಏನಿದ್ದರೂ ಬಜೆಟ್ ನಂತರ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. (ವಾಚ್ ವಿವಾದ, ವರದಿ ಕೇಳಿದ ಹೈಕಮಾಂಡ್)
ಉಪಚುನಾವಣೆಯಲ್ಲಿನ ಸೋಲು, ಪಂಚಾಯತ್ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸೀಟು ಸಿಗದ ಹಿನ್ನಲೆಯಲ್ಲಿ, ತನ್ನ ತಲೆದಂಡವಾದರೂ ಆಗಬಹುದು ಎನ್ನುವ ಮುನ್ಸೂಚನೆ ಅರಿತಿರುವ ಸಿದ್ದರಾಮಯ್ಯ, ತನ್ನ ವಿರುದ್ದದ ರಾಜಕೀಯ ಷಡ್ಯಂತ್ರಕ್ಕೆ ಜಾತಿ ರಾಜಕಾರಣದ ಲೇಪನ ಹಚ್ಚಿದ್ದಾರೆ. ಮುಂದಿನ ಪುಟ ಕ್ಲಿಕ್ಕಿಸಿ

ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ
ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ 'ಜಾತಿ ರಾಜಕಾರಣ'ದಿಂದಲೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತಾಯಿತು ಎನ್ನುವ ಗಂಭೀರ ಹೇಳಿಕೆ ನೀಡಿದ್ದ ಸಿದ್ದು, ಮತ್ತೆ ನನ್ನ ವಿರುದ್ಧ ಟೀಕೆಗಳು ಬರುವುದಕ್ಕೆ ನಾನು ಹಿಂದುಳಿದ ವರ್ಗದವನು ಎನ್ನುವುದೂ ಒಂದು ಕಾರಣ ಎಂದು ಹೇಳಿದ್ದಾರೆ.

ದೆಹಲಿಗೆ ಬುಲಾವ್
ರಾಜ್ಯದಲ್ಲಿ ಪಕ್ಷದ ಇಮೇಜಿಗೆ ಇನ್ನಷ್ಟು ಹಾನಿಯಾಗುದನ್ನು ತಪ್ಪಿಸಲು, ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರನ್ನು ಶನಿವಾರ (ಮಾ 5) ದೆಹಲಿಗೆ ಬರುವಂತೆ, ಅಹಮದ್ ಪಟೇಲ್ ಮೂಲಕ ಎಐಸಿಸಿ ವರಿಷ್ಠರು ಸಂದೇಶ ರವಾನಿಸಿದ್ದಾರೆ.

ಜಾಫರ್ ಷರೀಫ್
ಇತ್ತೀಚೆಗೆ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್, ಹೆಬ್ಬಾಳದಲ್ಲಿ ನನ್ನ ಮೊಮ್ಮಗ ಸೋತಿಲ್ಲ, ಅವನನ್ನು ಸೋಲಿಸಲಾಯಿತು. ಪಕ್ಷದಲ್ಲಿ ಇದ್ದವರೇ 'ಪಕ್ಷ ವಿರೋಧಿ' ಕೆಲಸವನ್ನು ಮಾಡಿದರು. ಕೆಲವರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದರು.

ಬಿ ಕೆ ಹರಿಪ್ರಸಾದ್
ಇದಲ್ಲದೇ ಎಐಸಿಸಿ ಅಂಗಣದಲ್ಲಿ ಉತ್ತಮ ಹಿಡಿತವಿರುವ ಬಿ ಕೆ ಹರಿಪ್ರಸಾದ್, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಸಂಸ್ಕೃತಿಯ ಬಗ್ಗೆ ತಿಳಿದಿಲ್ಲ. ಹೈಕಮಾಂಡ್ ಅನುಮತಿ ಇಲ್ಲದೇ ಹೆಬ್ಬಾಳ ಕ್ಷೇತ್ರದಲ್ಲಿ ಭೈರತಿ ಸುರೇಶ್ ಹೆಸರನ್ನು ಘೋಷಿಸಬಾರದಾಗಿತ್ತು. ಸರಕಾರಕ್ಕೆ ಮೂರು ವರ್ಷವಾಗಿದೆ, ಮೇಜರ್ ಸರ್ಜರಿ ಆಗಬೇಕಿದೆ ಎಂದು ಹೇಳಿಕೆ ನೀಡಿರುವುದು ಸಿದ್ದು ಕುರ್ಚಿ ಅಲ್ಲಾಡುತ್ತಿರುವ ಬಗೆಗಿನ ಮುನ್ಸೂಚನೆಎನ್ನಬಹುದಾಗಿದೆ.

ಪರಮೇಶ್ವರ್
ಸಿದ್ದು ದುಬಾರಿ ವಾಚ್ ಪ್ರಕರಣದ ಬಗ್ಗೆ ಹೈಕಮಾಂಡ್, ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಂದ ವಿಸ್ತೃತ ವರದಿ ಕೇಳಿದೆ ಎಂದು ವರದಿಯಾಗಿತ್ತು. ಆದರೆ, ದುಬಾರಿ ವಾಚ್ ಬಗ್ಗೆ ಸೋನಿಯಾ ಗಾಂಧಿ ಏನೂ ಪ್ರಸ್ತಾವಿಸಲಿಲ್ಲ ಎಂದು ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ನಾನ್ಯಾಕ್ರೀ ದೆಹಲಿಗೆ ಹೋಗಲಿ..
ಮಾರ್ಚ್ ಐದರಂದು ದೆಹಲಿಗೆ ಬರುವಂತೆ ಎಐಸಿಸಿ ವರಿಷ್ಠರು ಬುಲಾವ್ ನೀಡಿರುವುದನ್ನು ಪರಮೇಶ್ವರ್ ದೃಢಪಡಿಸಿದ್ದಾರೆ. ಆದರೆ, ಸಿದ್ದರಾಮಯ್ಯ 'ನಾನ್ಯಾಕ್ರೀ ದೆಹಲಿಗೆ ಹೋಗಲಿ' ಏನಿದ್ದರೂ ಏಪ್ರಿಲ್ ನಂತರ, ಬಜೆಟ್ ಸಂಬಂಧ ಕೆಲಸಗಳಿವೆ, ಆಮೇಲೆ ದೆಹಲಿಗೆ ತೆರಳುವುದಾಗಿ ಸಿದ್ದು ಹೇಳಿದ್ದಾರೆ.












Click it and Unblock the Notifications