ಪ್ರಧಾನಿ ಮೋದಿಯ ಈ 7 ತಪ್ಪುಗಳು ಲೋಕಸಭೆ ಚುನಾವಣೆಗೆ ಕಂಟಕ ಆಗುತ್ತಾ?
Recommended Video
2014ರ ಲೋಕಸಭೆ ಚುನಾವಣೆಯಲ್ಲಿ 282 ಸ್ಥಾನವನ್ನು ಗಳಿಸಿ, ಇತಿಹಾಸ ಸೃಷ್ಟಿಸಿದ ಬಿಜೆಪಿಯು ಮೊನ್ನೆ ಮೊನ್ನೆ ಉತ್ತರಪ್ರದೇಶದ ಎರಡು ಲೋಕಸಭಾ ಸ್ಥಾನಗಳನ್ನು ಸೋಲುವ ತನಕ ಹಲವು ಅನಿರೀಕ್ಷಿತಗಳನ್ನು ನೀಡಿದೆ. 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಸಂದರ್ಭದಲ್ಲೂ ಆ ಅನುಕಂಪದ ಅಲೆ ಕಾಂಗ್ರೆಸ್ ಗೆ ಸಹಾಯ ಮಾಡಿ, ಮತ ತರಲಿಲ್ಲ.
ಆದರೆ, ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾರೂ ಊಹಿಸದಂತೆ ಪ್ರಚಂಡ ಬಹುಮತ ಪಡೆದು ದಿಲ್ಲಿ ಗದ್ದುಗೆಗೆ ಏರಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಏಳು ತಪ್ಪುಗಳಿಂದ ಬಿಜೆಪಿ ವರ್ಚಸ್ಸಿಗೆ ಪೆಟ್ಟು ಬಿದ್ದಂತಾಗಿದೆ. ಸದ್ಯದ ಸ್ಥಿತಿ ನೋಡಿದರೆ, ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಹೆಚ್ಚೆಂದರೆ 180 ಸ್ಥಾನಗಳನ್ನು ಪಡೆಯುವುದು ಎನಿಸುವಂತಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗ ಹೀಗೆ ಹೇಳುವುದಕ್ಕೆ ಸಾಧ್ಯವಾ ಎಂದು ಪ್ರಶ್ನಿಸಬಹುದು. ಆದರೆ ಒಂದಂತೂ ಸತ್ಯ. ಕಳೆದ ಬಾರಿ ಪಡೆದ ಹಾಗೆ 282 ಸ್ಥಾನಗಳಲ್ಲಂತೂ ಗೆಲ್ಲುವುದು ಅಸಾಧ್ಯದ ಮಾತು. ಬಿಜೆಪಿ ಅದೆಂಥ ಪ್ರಬಲ ಸಿದ್ಧಾಂತಬದ್ಧ ರಾಜಕಾರಣವಾದರೂ ಅದನ್ನು ವಿರೋಧ ಪಕ್ಷಗಳು ಹೊಡೆದು ಹಾಕುವಂತೆ ಕಾಣುತ್ತಿದೆ.
ಈ ಅಭಿಪ್ರಾಯ ಬಿಜೆಪಿ ವಿರೋಧಿಗಳದಲ್ಲ. ಹಲವು ರಾಜಕೀಯ ವಿಶ್ಲೇಷಕರು ಬಿಜೆಪಿಯ ಪ್ರಮುಖ ಏಳು ತಪ್ಪುಗಳನ್ನು ಪಟ್ಟಿ ಮಾಡಿದ್ದಾರೆ. ಮುಂದೆ ಓದಿ.
ಸಂವಹನದ ಕೊರತೆಯೋ ಅಥವಾ ಸಂಬಂಧ ಕಾಯ್ದುಕೊಳ್ಳುವಲ್ಲಿನ ಸಮಸ್ಯೆಯೋ
ಎನ್ ಡಿಎ ಮೈತ್ರಿಕೂಟವನ್ನು ಸಂಭಾಳಿಸುವುದು ನರೇಂದ್ರ ಮೋದಿ ಅವರಿಗೆ ಆಗುತ್ತಿಲ್ಲ. ಆ ಕಾರಣಕ್ಕೆ ಶಿವಸೇನೆ, ತೆಲುಗು ದೇಶಂ ಪಕ್ಷ ಈಗಾಗಲೇ ದೋಸ್ತಿ ಕಡಿದುಕೊಂಡಿವೆ. ಇಲ್ಲಿ ಮತ್ತೊಂದು ಅಂಶವನ್ನು ನೆನಪಿಸಿಕೊಳ್ಳಬೇಕು, ಮೋದಿ ವಿರುದ್ಧ ಅಥವಾ ಮೈತ್ರಿ ಕೂಟದಿಂದ ಹೊರಗೆ ಬರಲು ನೀಡುತ್ತಿರುವ ಕಾರಣಗಳು ಒಂದೇ ಥರ ಇವೆ. ಈ ವಿಚಾರದಲ್ಲಿ ಸಂವಹನದ ಕೊರತೆಯೋ ಅಥವಾ ಸಂಬಂಧ ಕಾಯ್ದುಕೊಳ್ಳುವಲ್ಲಿನ ಸಮಸ್ಯೆಯೋ ಇರುವುದು ಎದ್ದು ಕಾಣುತ್ತಿದೆ.
ಸಚಿವ ಸ್ಥಾನ ಜವಾಬ್ದಾರಿಯಲ್ಲೂ ತಪ್ಪಿದ ಹೆಜ್ಜೆ
ಕೇಂದ್ರ ಸಂಪುಟದ ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಭಾರೀ ಗೊಂದಲ ಕಾಣುತ್ತಿದೆ. ಒಳ್ಳೆ ವಿದೇಶಾಂಗ ಮಂತ್ರಿ ಆಗಬಹುದಾದ ಅರುಣ್ ಜೇಟ್ಲಿಗೆ ಹಣಕಾಸು ಖಾತೆ ಕೊಡಲಾಗಿದೆ. ಉತ್ತಮ ಗೃಹ ಸಚಿವೆ ಆಗಬಹುದಾದ ಸುಷ್ಮಾಗೆ ವಿದೇಶಾಂಗ ಖಾತೆ ನೀಡಲಾಗಿದೆ. ಸಚಿವರಾಗಿರುವ ಮಹೇಶ್ ಶರ್ಮಾ, ಹರ್ಷವರ್ಧನ್, ರಾಧಾಮೋಹನ್ ಸಿಂಗ್ ಹಾಗೂ ಉಮಾ ಭಾರತಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಬಿಜೆಪಿ ಸಂಸದರ ಮನಸೋ ಇಚ್ಛೆ ಹೇಳಿಕೆಗಳಿಗೆ ತಡೆ ಹಾಕಲು ಸಾಧ್ಯವಾಗಿಲ್ಲ
ವಿಜ್ಞಾನದಿಂದ ಮದುವೆ-ಮಕ್ಕಳು, ಗೋ ರಕ್ಷಣೆ, ಹಿಂದುತ್ವ, ಸಂವಿಧಾನದ ತನಕ ಬಿಜೆಪಿಯ ಸಂಸದರು ಬಾಯಿಗೆ ಬಂದಂತೆ ಹೇಳಿಕೆ ನೀಡಿ, ಮುಜುಗರ ಉಂಟು ಮಾಡುತ್ತಿದ್ದರೂ ಅವರಿಗೆ ಕಡಿವಾಣ ಹಾಕುವ ಯಾವ ಪ್ರಯತ್ನವೂ ಕಾಣುತ್ತಿಲ್ಲ. ನಮ್ಮ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅನಂತ್ ಕುಮಾರ್ ಹೆಗಡೆ ನೀಡಿದ ಸಂವಿಧಾನ ಬದಲಾವಣೆ ಹೇಳಿಕೆ ತಂದಿಟ್ಟಿರುವ ಮುಜುಗರ ಇನ್ನೂ ಅಳಿಸಲು ಸಾಧ್ಯವಾಗಿಲ್ಲ.
ಪ್ರತಿ ದಿನ ಮಾಧ್ಯಮಗಳೊಂದಿಗೆ ಸಂವಹನ ಇಲ್ಲ
ಪ್ರಧಾನಮಂತ್ರಿಗಳ ಕಾರ್ಯಾಲಯ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರತಿ ದಿನವೂ ಮಾಧ್ಯಮಗಳ ಜತೆಗೆ ಸಂವಹನ ಮಾಡುವುದು ಪ್ರಮುಖ ರಾಷ್ಟ್ರಗಳು ನಡೆಸಿಕೊಂಡು ಬಂದಿರುವ ಪದ್ಧತಿ. ಸೈಯದ್ ಅಕ್ಬರುದ್ದೀನ್ ವಿದೇಶಾಂಗ ವ್ಯವಹಾರಗಳ ವಕ್ತಾರ ಆಗಿದ್ದಾಗ ಭಾರತವೂ ಹಾಗೇ ಮಾಡುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ.
ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸದ ಪ್ರಧಾನಮಂತ್ರಿ
ಮುಖ್ಯವಾದದ್ದು ಏನೆಂದರೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರೇ ಮಾಧ್ಯಮಗಳ ಜತೆ ಪ್ರಶ್ನೋತ್ತರ ಸೆಷನ್ ಗಳನ್ನು ನಡೆಸುವುದಿಲ್ಲ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವುದು ಪ್ರಧಾನಮಂತ್ರಿ ಆದವರ ಜವಾಬ್ದಾರಿ. ಅಥವಾ ಆಯಾ ಸಮಯಕ್ಕೆ ತಕ್ಕಂತೆ ಅಥವಾ ಸನ್ನಿವೇಶಕ್ಕೆ ತಕ್ಕಂತೆ ಎದುರಾಗುವ ಪ್ರಶ್ನೆಗಳನ್ನು ನರೇಂದ್ರ ಮೋದಿ ಅವರು ಉತ್ತರಿಸುತ್ತಿಲ್ಲ.
ಯುಪಿಎ ಅವಧಿಯ ಭ್ರಷ್ಟಾಚಾರ ಆರೋಪದ ತನಿಖೆಯೇ ತಣ್ಣಗಾಗಿದೆ
ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದೆ ಎಂದು ಆರೋಪಿಸಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯೇ ನಿಧಾನವಾಗಿ ಹೋಗಿದೆ. ಅಧಿಕಾರಿ ವರ್ಗ ಕೂಡ ಇದನ್ನು ಚುರುಕಾಗಿ ಮಾಡುತ್ತಿಲ್ಲ. ಚಾಟಿ ಬೀಸಾದರೂ ಸರಿ, ಆ ಬಗ್ಗೆ ತನಿಖೆ ವೇಗವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ಕೇಂದ್ರ ಸರಕಾರ ಕೂಡ ಅಂಥ ಆಸಕ್ತಿ ತೋರಿಸುತ್ತಿಲ್ಲ.
ಪಾಕಿಸ್ತಾನದ ಬಗ್ಗೆ ಭಾರತದ ನೀತಿಯಲ್ಲಿ ಸ್ಥಿರತೆ ಹಾಗೂ ಸ್ಪಷ್ಟತೆ ಕೊರತೆ
ಪಾಕಿಸ್ತಾನದ ಬಗೆಗಿನ ಭಾರತದ ನೀತಿಯಲ್ಲಿ ಸ್ಥಿರತೆ ಇಲ್ಲ. ಅಧಿಕಾರಕ್ಕೆ ಬರುವ ಮುಂಚೆ ಅಥವಾ ಬಂದ ಹೊಸತರಲ್ಲಿ ಇದ್ದ ಧೋರಣೆ ಪರಿಣಾಮಕಾರಿಯಾಗಿ ಗೋಚರಿಸಿಲಿಲ್ಲ. ಈ ವಿಚಾರದಲ್ಲಿ ದೇಶದ ಜನರಿಗೆ ಇದ್ದ ನಿರೀಕ್ಷೆ ಪೂರ್ತಿ ಆಗಲೇ ಇಲ್ಲ. ಆ ಕಾರಣಕ್ಕೆ ಮೋದಿ ನೇತೃತ್ವದ ಇತರ ಸಾಧನೆಗಳು ತಪ್ಪುಗಳ ಕಾರಣಕ್ಕೆ ಮಬ್ಬಾಗುತ್ತಿವೆ.