ಕೋಸ್ಟ್ ಗಾರ್ಡ್ ಹದ್ದಿನ ಕಣ್ಣಿಗೆ ಪಾಕ್ ಹಾವು ಬಿದ್ದಿದ್ದು ಹೀಗೆ...
ಗುಜರಾತ್, ಜ. 2: ಪಾಕಿಸ್ತಾನದಿಂದ ಸ್ಫೋಟಕಗಳನ್ನು ಹೊತ್ತು ತರುತ್ತಿತ್ತು ಎನ್ನಲಾದ ಮೀನುಗಾರಿಕೆ ಬೋಟಿನಲ್ಲಿದ್ದ ನಾಲ್ವರು ಶಂಕಿತ ಭಯೋತ್ಪಾದಕರು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾರೆ. ಈ ವಿಷಯವೀಗ ಇಡೀ ದೇಶದ ಗಮನ ಸೆಳೆದಿದೆ.
ಸಮಸ್ತ ಭಾರತೀಯರು ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿದ್ದರೆ ನಮ್ಮ ಸೈನಿಕರು ನಿದ್ದೆಗೆಟ್ಟು ಗಡಿ ಕಾಯುತ್ತಿದ್ದರು. ಹೊಸ ವರ್ಷಾಚರಣೆಯಲ್ಲಿ ಭಾರತ ಮೈಮರೆತಿರುತ್ತದೆ ಎಂಬ ಅಂಧ ವಿಶ್ವಾಸ ಪಾಕಿಸ್ತಾನಿ ಉಗ್ರರಲ್ಲಿತ್ತು. ಇದೇ ಸಮಯ ಎಂದುಕೊಂಡು ದೇಶದೊಳಕ್ಕೆ ನುಸುಳಲು ಯತ್ನಿಸಿ ನಮ್ಮ ಕೋಸ್ಟ್ ಗಾರ್ಡ್ ಪಡೆಯನ್ನು ಎದುರಿಸುವ ಧೈರ್ಯವೂ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕಾರ್ಯಾಚರಣೆ ನಡೆದಿದ್ದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
1) ಗುಜರಾತ್ ಪೋರ್ಬಂದರ್ನಿಂದ 365 ಕಿ.ಮೀ. ದೂರದಲ್ಲಿ ಡಿಸೆಂಬರ್ 31ರಂದು ರಾತ್ರಿ ಕಂಡುಬಂದ ಮೀನುಗಾರಿಕೆ ಬೋಟನ್ನು ಕೋಸ್ಟ್ ಗಾರ್ಡ್ಗೆ ಸೇರಿದ ಹಡಗುಗಳು ಹಾಗೂ ಹಾಗೂ ವಿಮಾನ ತಡೆದು ನಿಲ್ಲಿಸುವಲ್ಲಿ ಸಫಲವಾಯಿತು.
2) ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ ಈ ಮೀನುಗಾರಿಕೆ ಬೋಟು ಕರಾಚಿ ಸಮೀಪದ ಕೇತಿಬಂದರ್ನಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ತರುತ್ತಿತ್ತು. [ಸುರಕ್ಷಿತ ಸ್ತಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು]
3) ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ನ ಡೋರ್ನಿಯರ್ ವಿಮಾನವೊಂದು ಸಮುದ್ರದಲ್ಲಿ ಹುಡುಕಾಟ ನಡೆಸುತ್ತಿತ್ತು. ಆಗಲೇ ಈ ಶಂಕಿತ ಮೀನುಗಾರಿಕೆ ಬೋಟ್ ಕಣ್ಣಿಗೆ ಬಿತ್ತು.
4) ಸಮೀಪದಲ್ಲಿಯೇ ಪೆಟ್ರೋಲಿಂಗ್ ನಡೆಸುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಮಾಹಿತಿ ಪಡೆದು ಅತ್ತ ಧಾವಿಸಿತು. ಪೋರ್ಬಂದರ್ನ 365 ಕಿ.ಮೀ. ದೂರದಲ್ಲಿ ಕಂಡುಬಂದ ಬೋಟನ್ನು ತಡೆದು ನಿಲ್ಲಿಸಿತು. ಇಷ್ಟೆಲ್ಲ ಆಗಿದ್ದು 2014ರ ಡಿಸೆಂಬರ್ 31ರಂದು ಮಧ್ಯರಾತ್ರಿ. ಆಗ ಇಡೀ ದೇಶ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿತ್ತು. [ಶಾಲೆಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ]
5) ಮೀನುಗಾರಿಕೆ ಬೋಟ್ಗೆ ಅಲ್ಲಿಯೇ ನಿಂತು ಸಿಬ್ಬಂದಿ ಮತ್ತು ಸರಕು ತಪಾಸಣೆ ನಡೆಸಲು ಸಹಕರಿಸುವಂತೆ ಎಚ್ಚರಿಕೆ ನೀಡಲಾಯಿತು. ಆದರೆ, ಬೋಟಿನಲ್ಲಿದ್ದವರು ಆದೇಶ ಪಾಲಿಸಲು ತಯಾರಿರಲಿಲ್ಲ. ಭಾರತದ ಕಡಲು ಗಡಿ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ದೋಣಿಯ ವೇಗವನ್ನು ಹೆಚ್ಚಿಸಿದರು.
6) ಸುಮಾರು ಒಂದು ಗಂಟೆ ಕಾಲ ಓಡಿದ ಬೋಟನ್ನು ಹಿಂಬಾಲಿಸಿ ಕೊನೆಗೂ ತಡೆದು ನಿಲ್ಲಿಸುವಲ್ಲಿ ಕೋಸ್ಟ್ ಗಾರ್ಡ್ ಪಡೆ ಯಶಸ್ವಿಯಾಯಿತು.
7) ಆಗ ಬೋಟಲ್ಲಿದ್ದ ನಾಲ್ವರು ಕಾಣಿಸಿದರು. ಅವರಿಗೆ ತನಿಖೆಗೆ ಸಹಕರಿಸುವಂತೆ ಸೂಚಿಸಲಾಯಿತು. ಆದರೆ, ಅವರು ಬೋಟ್ ಒಳಗೆ ಸೇರಿಕೊಂಡು ತಮ್ಮನ್ನು ಸ್ಫೋಟಿಸಿಕೊಂಡರು. ಇಡೀ ಬೋಟ್ ಸ್ಫೋಟಗೊಂಡು ಅಲ್ಲಿಯೇ ಮುಳುಗಿತು. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]
8) ಈ ಸಂದರ್ಭದಲ್ಲಿ ತೀವ್ರ ಕಗ್ಗತ್ತಲೆ ಇತ್ತು. ವಾತಾವರಣವೂ ಕಾರ್ಯಾಚರಣೆಗೆ ಸಹಕರಿಸುತ್ತಿರಲಿಲ್ಲ. ಬಲವಾದ ಗಾಳಿ ಬೀಸುತ್ತಿತ್ತು. ಆದ್ದರಿಂದ ಬೋಟ್ನಲ್ಲಿದ್ದವರನ್ನು ಜೀವಂತವಾಗಿ ಸೆರೆ ಹಿಡಿಯುವುದು ಸಾಧ್ಯವಾಗಲಿಲ್ಲ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.
9) ಸಮುದ್ರ ಮಾರ್ಗದಿಂದ ದಾಳಿ ನಡೆಯುವ ಸಂಭವನೀಯತೆ ಕುರಿತು ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಪಡೆ ಹಲವು ತಿಂಗಳುಗಳಿಂದ ಸಮುದ್ರದಲ್ಲಿ ಭದ್ರತೆ ಹೆಚ್ಚಿಸಿತ್ತು.
10) ಮುಂಬಯಿ ಮೇಲೆ 2008ರಲ್ಲಿ ಭೀಕರ ದಾಳಿ ನಡೆಸಿ 166 ಅಮಾಯಕರನ್ನು ಹತ್ಯೆಗೈದಿದ್ದ ಉಗ್ರರು ಕೂಡ ಪಾಕಿಸ್ತಾನದಿಂದ ಬೋಡ್ ಮೂಲಕವೇ ಭಾರತ ಪ್ರವೇಶಿಸಿದ್ದರು.
ಈ ಪ್ರಕರಣ ಸಮಸ್ತ ಭಾರತೀಯರಲ್ಲಿ ನಮ್ಮ ಸೈನಿಕರ ಕುರಿತು ವಿಶ್ವಾಸವನ್ನು ಹೆಚ್ಚಿಸಿದೆ. ಕೊಲ್ಲುವ ಉಗ್ರರಿಂದ ಕಾಪಾಡಲು ನಮ್ಮ ಸೈನಿಕರು ಜೀವದ ಹಂಗು ತೊರೆದು, ನಿದ್ದೆ ಮರೆತು ಸದಾ ಕಾವಲಿರುತ್ತಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದೆ.